ಸಾಕುನಾಯಿ ರಕ್ಷಿಸಲು ಹೋಗಿ ನೀರುಪಾಲಾದ ಯುವಕ

Update: 2016-02-24 03:56 GMT

ನವದೆಹಲಿ: ಬಹುಶಃ ಆ ಲ್ಯಾಬ್ರಡೋರ್ ರಿಟ್ರೈವರ್ ನಾಯಿ ಈಜಿಕೊಂಡು ಸುರಕ್ಷಿತವಾಗಿ ದಡ ಸೇರುತ್ತಿತ್ತು. ಆದರೆ ಅದನ್ನು ವಿಹಾರಕ್ಕೆ ಕರೆತಂದಿದ್ದ ಯುವಕ ಹಿಂದೆ ಮುಂದೆ ನೋಡದೇ ಕಾಲುವೆಗೆ ಧುಮುಕಿದ. ಕಾಲುವೆಯಲ್ಲಿ ಬಿದ್ದ ಸಾಕುನಾಯಿಯನ್ನು ರಕ್ಷಿಸಲು ಹೋದ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಪೂರ್ವ ದೆಹಲಿಯ ನ್ಯೂ ಅಶೋಕ ನಗರ ಪ್ರದೇಶದಲ್ಲಿ ನಡೆದಿದೆ.


ಮೃತಪಟ್ಟ ಯುವಕನನ್ನು ಖಾಸಗಿ ವಿಶ್ವವಿದ್ಯಾನಿಲಯದ ತಂತ್ರಜ್ಞಾನ ಪದವಿ ವಿದ್ಯಾರ್ಥಿ ಬಲರಾಂ (20) ಎಂದು ಗುರುತಿಸಲಾಗಿದೆ. ಕಾಲೇಜಿನಿಂದ ಬಂದು ಪ್ರತಿದಿನದಂತೆ ನಾಯಿಯನ್ನು ವಿಹಾರಕ್ಕೆ ಕರೆಯೊಯ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.


ನಾಯಿ ಕಾಲುವೆಗೆ ಬಿದ್ದ ತಕ್ಷಣ ಯುವಕ ಕೂಡಾ ಹಾರಿದ. ಕೂಡಲೇ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಆತನ ರಕ್ಷಣೆಗೆ ತಕ್ಷಣ ಕಾರ್ಯಾಚರಣೆ ಕೈಗೊಳ್ಳಲಾಯಿತು. ಆದರೆ ಯುವಕನ ಶವವನ್ನಷ್ಟೇ ಹೊರತೆಗೆಯಲು ಸಾಧ್ಯವಾಯಿತು ಎಂದು ಡಿಸಿಪಿ ಬಿ.ಎಸ್.ಗುಜಾರ್ ವಿವರಿಸಿದರು.
ಅದಾಗ್ಯೂ ಯುವಕನ ಸಾವಿನ ಎಲ್ಲ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News