ಸಾಮಾಜಿಕ ಜಾಲತಾಣಗಳ ಸೆಕೋಪಾತಗಳು!!

Update: 2016-07-31 17:59 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅಕಾಲಿಕ ಸಾವಿಗೀಡಾದಾಗ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಕೊಳಕು ಮನಸ್ಸುಗಳ ವಿಕೃತಿಗಳನ್ನು ನೋಡಿ ನಾಲ್ಕು ದಶಕಗಳ ಹಿಂದಿನ ಮುದ್ರಣ ಮಾಧ್ಯಮದ ದಿನಗಳು ನೆನಪಿಗೆ ಬಂದವು. ಆಗ ಮುದ್ರಣ ಮಾಧ್ಯಮ ಬಿಟ್ಟರೆ ಯುವಕರಿಗೆ ತಮ್ಮ ಭಾವನೆ ಅಭಿವ್ಯಕ್ತಿಪಡಿಸಲು ಬೇರೆ ಯಾವ ಮಾಧ್ಯಮವೂ ಇರಲಿಲ್ಲ. ಅನ್ನಿಸಿದ್ದನ್ನು ಹಂಚಿಕೊಳ್ಳಲು ಆಗ ಇದ್ದ ಏಕೈಕ ವೇದಿಕೆ ಪತ್ರಿಕೆ. ಆಕಾಶವಾಣಿ ಎಂಬುದು ಇದ್ದರೂ ಕೂಡ ಅಲ್ಲಿ ತೋಚಿದ್ದನ್ನೆಲ್ಲ ಬರೆಯಲು ಅಥವಾ ಹೇಳಲು ಆಗುತ್ತಿರಲಿಲ್ಲ. 1974ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿದ್ದ ಸಾಹಿತಿ ಎಂ.ಎಸ್.ಕೆ.ಪ್ರಭು ಅವರು ಬೆಳಗಿನ ಚಿಂತನ ಕಾರ್ಯಕ್ರಮದ ರೆಕಾರ್ಡಿಂಗ್‌ಗೆ ಕರೆದಿದ್ದರು. ಆಗ ನನ್ನ ಹಸ್ತಪ್ರತಿಯನ್ನು ನೋಡಿ, ಇದನ್ನು ಪ್ರಸಾರ ಮಾಡುವುದು ಕಷ್ಟ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಅದರಲ್ಲಿ ಯಾರನ್ನೂ ವೈಯಕ್ತಿಕವಾಗಿ ನಿಂದಿಸಿರಲಿಲ್ಲ. ಕಂದಾಚಾರ ಮುಂತಾದ ಸಾಮಾಜಿಕ ಅತಿರೇಕಗಳ ಬಗ್ಗೆ ಬರೆದಿದ್ದೆ. ಇಂತಹದ್ದಕ್ಕೆ ಅವಾಗ ಅವಕಾಶ ಇರಲಿಲ್ಲ.

ಆದರೆ ಪತ್ರಿಕೆಗಳಲ್ಲಿ ಅನ್ನಿಸಿದ್ದನ್ನು ಬರೆಯಲು ಮುಕ್ತ ಅವಕಾಶವಿತ್ತು. ಉತ್ತರ ಕರ್ನಾಟಕ ಗ್ರಾಮೀಣ ಪ್ರದೇಶದಲ್ಲಿ ಓಕಳಿ ಹಬ್ಬದ ಹೆಸರಿನಲ್ಲಿ ದಲಿತ ಮಹಿಳೆಯರನ್ನು ಅವಮಾನಿಸುವ ಸಂಪ್ರದಾಯವನ್ನು ಖಂಡಿಸಿ, ನಾನು ಬರೆದು ಕಳುಹಿಸಿದ ಓದುಗರ ವಿಭಾಗದ ಪತ್ರವೊಂದು ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡು ಅಲ್ಲೋಲ-ಕಲ್ಲೋಲ ಉಂಟು ಮಾಡಿತ್ತು. ಈ ಪತ್ರ ನೋಡಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಓಕಳಿ ಸಂಪ್ರದಾಯ ನಿಷೇಧಿಸಿದರು, ಒಂದು ಅನಿಷ್ಟ ಸಂಪ್ರದಾಯವನ್ನು ನಿಷೇಧಿಸಲು ಕಾರಣವಾದ ಹೆಮ್ಮೆ ನನಗಿತ್ತು. ಆದರೆ ಈಗ ಅಂತಹದ್ದೊಂದು ಪತ್ರವನ್ನು ನೋಡಿ, ಅನಿಷ್ಟ ಸಂಪ್ರದಾಯ ನಿಷೇಧಿಸಲು ಸರಕಾರ ಮುಂದಾದರೆ ಹಿಂದೂ ಧರ್ಮದ ಮೇಲೆ ಹಲ್ಲೆಯೆಂದು ಸ್ವಯಂ-ಘೋಷಿತ ಹಿಂದುತ್ವವಾದಿಗಳು ಹುಯಿಲ್ಲೆಬ್ಬಿಸುತ್ತಾರೆ.

ಈ ನಾಲ್ಕು ದಶಕಗಳಲ್ಲಿ ಮಾಧ್ಯಮದ ಸ್ವರೂಪ ಸಂಪೂರ್ಣ ಬದಲಾಗಿದೆ. ಹೊಸ ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಮಾಧ್ಯಮದ ವ್ಯಾಪ್ತಿ ವಿಸ್ತರಿಸಲ್ಪಟ್ಟಿದೆ. ಆದರೆ ಮನುಷ್ಯನ ಮನಸ್ಸು ಮಾತ್ರ ಸಂಕುಚಿತಗೊಂಡಿದೆ. 70ರ ದಶಕದಲ್ಲಿ ಜಾತಿ, ಮತವನ್ನು ದ್ವೇಷ-ಅಸೂಯೆಗಳನ್ನು ಮೀರಿ ನಿಂತು ಅನ್ಯಾಯದ ವಿರುದ್ಧ ಸಿಡಿಯುತ್ತಿದ್ದ ಮನುಷ್ಯ ಈಗ ಜಾತಿಮತಗಳ ಕೊಚ್ಚೆಯಲ್ಲಿ ಬಿದ್ದು ದ್ವೇಷ-ಅಸೂಯೆಗಳನ್ನು ತುಂಬಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭೇದಿ ಮಾಡಿಕೊಳ್ಳುತ್ತಿದ್ದಾನೆ. ಸಿದ್ದರಾಮಯ್ಯ ಅವರ ಪುತ್ರ ನಿಧನರಾದಾಗ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸಂಭ್ರಮಿಸಿದ ರೀತಿಯನ್ನು ಕಂಡಾಗ, ತುಂಬಾ ಆತಂಕವುಂಟಾಯಿತು. ಸಾಮಾಜಿಕ ಜಾಲತಾಣಗಳು ಜನರನ್ನು ಸಂಪರ್ಕಿಸುವ ಅತ್ಯುತ್ತಮ ಸಾಧನಗಳು ಎಂಬುದು ನಿಜ. ಆದರೆ ಫ್ಯಾಶಿಸ್ಟ್ಟ್ ಶಕ್ತಿಗಳು ವಿಜೃಂಭಿಸುವ ದೇಶದಲ್ಲಿ ಇದೇ ಜಾಲತಾಣಗಳು ಮನುಷ್ಯರ ನಡುವೆ ದ್ವೇಷದ ಅಡ್ಡಗೋಡೆಯಾಗಿ ನಿಲ್ಲುತ್ತಿವೆ. ಸಾವನ್ನು ಸಂಭ್ರಮಿಸುವ ಸೈಕೋಪಾತಗಳು ಇಲ್ಲಿ ಸೃಷ್ಟಿಯಾಗುತ್ತಿದ್ದಾರೆ. ಅಂತಲೇ ಸಾಮಾಜಿಕ ಜಾಲತಾಣ ವರ ಮತ್ತು ಶಾಪ ಎರಡೂ ಆಗಿದೆ. ಜಾತ್ಯಾತೀತ ಪ್ರಜಾಪ್ರಭುತ್ವವಾದಿ ಶಕ್ತಿ ಮತ್ತು ವ್ಯಕ್ತಿಗಳ ಕೈಯಲ್ಲಿ ವರವಾಗುತ್ತದೆ. ಸಂಕುಚಿತ ಕೋಮುವಾದಿ ವಿಷಜಂತುಗಳ ಕೈಯಲ್ಲಿ ಅದು ಸಮಾಜವನ್ನು ಕೊಲ್ಲುವ ಬ್ಯಾಕ್ಟೀರಿಯಾ ಆಗುತ್ತದೆ.

ನಮ್ಮ ನಾಡಿನಲ್ಲಿ ಸಾವನ್ನು ಸಂಭ್ರಮಿಸಿದ್ದು ಇದೇ ಮೊದಲ ಬಾರಿಯಲ್ಲ.ಡಾ.ಯು.ಅರ್.ಅನಂತಮೂರ್ತಿಯವರ ಸಾವಿಗೆ ಈಡಾದಾಗಲೂ ಈಸೈಕೋಪಾತಗಳು ಇದೇ ರೀತಿ ಸಂಭ್ರಮಿಸಿದ್ದವು. ತಪ್ಪು ಆ ಯುವಕರದ್ದಲ್ಲ. ಈ ಶನಿ ಸಂತಾನ ತಯಾರಾಗಿದ್ದು ನಾಥುರಾಮ ಗೋಡ್ಸೆಯನ್ನು ಸೃಷ್ಟಿಸಿದ ಫ್ಯಾಶಿಸ್ಟ್ ಪ್ರಯೋಗಾಲಯದಲ್ಲಿ. ಅಂತಲೇ ಅಮಾಯಕ ಹುಡುಗರು ತಮಗೆ ಪರಿಚಯವಿಲ್ಲದವರ ಸಾವಿಗೂ ಸಂಭ್ರಮಿಸುತ್ತಿವೆ.

ಮಹಾತ್ಮ ಗಾಂಧೀಜಿಯವರನ್ನು ನಾಥುರಾಮ ಗೋಡ್ಸೆ ಗುಂಡಿಟ್ಟು ಕೊಂದಾಗಲೂ ಅಷ್ಟೇನೂ ದೊಡ್ಡದಲ್ಲದ ನಮ್ಮೂರಿನಲ್ಲೂ ಕೆಲವರು ಸಿಹಿ ಹಂಚಿ ಸಂಭ್ರಮಿಸಿದ್ದರೆಂದು ನಾನು ಚಿಕ್ಕವನಿದ್ದಾಗ, ನನ್ನ ತಂದೆಯವರು ಹೇಳುತ್ತಿದ್ದರು. ಈ ಸಿಹಿ ಹಂಚಿ ಸಂಭ್ರಮಿಸಿದವರು ನಮ್ಮೂರಿಗೆ ಸಮೀಪದ ಮಹಾರಾಷ್ಟ್ರದ ಸಾಂಗ್ಲಿ, ಮಿರಜ್‌ಗಳಿಗೆ ಹೋಗಿ ತಲೆ ತುಂಬಾ ವಿಷ ತುಂಬಿಕೊಂಡು ಬಂದಿದ್ದರು. ಇಂತಹ ಒಬ್ಬಿಬ್ಬರನ್ನು ಆಗ ನಮ್ಮೂರು ಸಾವಳಗಿ ಜನ ಕತ್ತೆಯ ಮೇಲೆ ಕೂರಿಸಿ ಮೊವಣಿಗೆ ಮಾಡಿದ್ದರೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೆ.

ಸದಾ ಹಿಂದೂ ಸಂಸ್ಕೃತಿ ಮತ್ತು ಭಾರತ ಸಂಸ್ಕೃತಿ ಎನ್ನುವ ಇವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮುಖ್ಯಮಂತ್ರಿಯವರನ್ನು ಏಕವಚನದಲ್ಲಿ ನಿಂದಿಸುತ್ತಾರೆ. ಐಎಎಸ್ ಅಧಿಕಾರಿ ರವಿ, ಪೊಲೀಸ್ ಅಧಿಕಾರಿ ಗಣಪತಿಯ ಸಾವುಗಳ ಬಗ್ಗೆ ಪ್ರಸ್ತಾಪಿಸಿ, ಆ ಶಾಪ ಇವರಿಗೆ ತಟ್ಟಿದೆ ಎಂದು ಹೇಳುತ್ತಾರೆ. ಸತ್ತವರ ಹೆಣಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟವರ ಪರಿವಾರಕ್ಕೆ ಇವರು ಸೇರಿದವರಾಗಿದ್ದಾರೆ.

ಮಾಯಾವತಿ, ಸಿದ್ದರಾಮಯ್ಯ, ನಿತೀಶ್‌ಕುಮಾರ್ ಇಂತಹವರನ್ನು ಮಾತ್ರ ಗುರಿಯಾಗಿರಿಸಿಕೊಂಡು ಇವರೇಕೆ ಅಸಭ್ಯ ಭಾಷೆಗಳಲ್ಲಿ ಟೀಕಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ವೈಯಕ್ತಿಕವಾಗಿ ಸಿದ್ದರಾಮಯ್ಯ, ಮಾಯವತಿಯವರು ಯಾರಿಗೂ ಅನ್ಯಾಯ ಮಾಡಲಿಲ್ಲ. ಅವರು ತಮ್ಮ ಕೋಮುವಾದಿ ಪರಿವಾರಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕಾಗಿ ಅವರನ್ನು ದ್ವೇಷಿಸುತ್ತಾರೆ ಅಲ್ಲದೇ ಅಂಬೇಡ್ಕರ್, ಲೋಹಿಯಾ ಸಮಾನತೆ ಸಿದ್ಧಾಂತ ಪ್ರತಿಪಾದಿಸುತ್ತಾರೆ ಎಂಬ ಕಾರಣಕ್ಕಾಗಿ ಅವರ ವಿರುದ್ಧ ವಿಷ ಕಾರುತ್ತಾರೆ.

ಸಿದ್ದರಾಮಯ್ಯನವರ ಪುತ್ರನ ಸಾವಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಸಂಭ್ರಮಿಸುವವರು ಅದಕ್ಕೆ ಕಾರಣಗಳನ್ನು ನೀಡಿದ್ದಾರೆ. ಬಡವರಿಗೆ ಅನ್ನಭಾಗ್ಯ, ಆರೋಗ್ಯಭಾಗ್ಯದಂತಹ ಯೋಜನೆಗಳು ರೂಪಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಿಂದಿನ ಸರಕಾರದಂತೆ ರೆಡ್ಡಿಗಳಿಗೆ ಗಣಿಭಾಗ್ಯ, ಅತ್ಯಾಚಾರಿ ಸ್ವಾಮಿಗಳಿಗೆ ಸರಕಾರಿ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ನೋಟು ಭಾಗ್ಯ ಸಿದ್ದರಾಮಯ್ಯ ಕರುಣಿಸಲಿಲ್ಲ ಎಂಬುದು ಇವರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ವಿಕೃತರು ಎಂತಹವರು ಎಂಬುದು, ಅವರ ಹಿನ್ನೆಲೆ ಎಂತಹದ್ದು ಎಂಬುದು ಈಗಾಗಲೇ ಗೊತ್ತಾಗಿದೆ. ಅನಂತಮೂರ್ತಿಯವರು ಬದುಕಿದ್ದಾಗ, ಅವರಿಗೆ ಪಾಕಿಸ್ತಾನಕ್ಕೆ ಹೋಗಲು ವಿಮಾನದ ಟಿಕೆಟ್ ಕಳುಹಿಸಿದ, ಅವರು ನಿಧನರಾದಾಗ ಪಟಾಕಿ ಸಿಡಿಸಿದ ವ್ಯಕ್ತಿಯೊಬ್ಬ ಈಗ ಜೈಲು ಸೇರಿದ್ದಾನೆ. ಅವನು ಕೂಡ ಈ ಫ್ಯಾಶಿಸ್ಟ್ಟ್ ಪ್ರಯೋಗಾಲಯದಲ್ಲಿ ಸೃಷ್ಟಿಗೊಂಡ ವಿಕೃತ ಪ್ರಾಣಿ. ಇದೇ ಮನಸ್ಥಿತಿಯ ಕೆಲ ದಾರಿ ತಪ್ಪಿದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯದ ಮುಖ್ಯಮಂತ್ರಿಯವರ ವಿರುದ್ಧ ಇಂತಹ ಅಸಭ್ಯ ಭಾಷೆಯಲ್ಲಿ ಟೀಕಿಸುತ್ತ ಇರುವಾಗಲೂ ಅವರನ್ನು ಪತ್ತೆ ಮಾಡಿ, ದಂಡಿಸುವಲ್ಲಿ ನಮ್ಮ ಸೈಬರ್ ಪೊಲೀಸರು ಯಾಕೆ ವಿಫಲವಾಗಿದ್ದಾರೆ. ಕಳಸಾ ಬಂಡೂರಿ ಯೋಜನೆಗಾಗಿ ಹೋರಾಡುತ್ತಿರುವ ರೈತರ ಮೇಲೆ ಲಾಠಿ ಪ್ರಹಾರ ಮಾಡುವ ಪೊಲೀಸರು ಸಾಮಾಜಿಕ ಜಾಲತಾಣಗಳ ಈ ಸೈಕೋಪಾತಗಳನ್ನು ಕಂಡು ಸುಮ್ಮನಾಗುತ್ತಾರೆ. ಇದೆಲ್ಲ ಕಂಡಾಗ ಪೊಲೀಸ್ ವ್ಯವಸ್ಥೆ ಮೇಲೆ ಗೃಹಸಚಿವರಿಗೆ ನಿಯಂತ್ರಣ ಇದೆಯೋ ಅಥವಾ ಇಲ್ವೊ ಎಂಬುದು ಕಂಡು ಬರುತ್ತದೆ.

ಸಾಮಾಜಿಕ ಜಾಲತಾಣದ ಈ ವಿಕೃತಿಯನ್ನು ಕಂಡು ಭಾರತೀಯ ಸಂಸ್ಕೃತಿಗೆ ಇದು ಅಪಚಾರವೆಂದು ಕೆಲ ಹಿರಿಯ ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಇವರು ಭಾರತೀಯ ಸಂಸ್ಕೃತಿಯ ಪ್ರತಿನಿಧಿಗಳಲ್ಲ. ಜರ್ಮನಿಯಿಂದ ಭಾರತಕ್ಕೆ ಆಮದು ಮಾಡಲ್ಪಟ್ಟ ಹಿಟ್ಲರ್‌ನ ಫ್ಯಾಶಿಸ್ಟ್ಟ್ ಸಿದ್ಧಾಂತ ಮತ್ತು ಮನುವಾದದ ಅನೈತಿಕ ಸಂಬಂಧದಿಂದ ಸೃಷ್ಟಿಯಾದ ಶನಿ ಸಂತಾನಗಳು. ಅಂತಲೇ ಅಮಾಯಕ ಯಹೂದಿಗಳನ್ನು ಹಿಟ್ಲರ್ ಗ್ಯಾಸ್ ಚೇಂಬರ್‌ಗೆ ಹಾಕಿ, ಸುಟ್ಟು ಕೇಕೆ ಹಾಕಿದಂತೆ ಇವರು ಸಾವುಗಳನ್ನು ಕಂಡು ಸಂಭ್ರಮಿಸುತ್ತಿದ್ದಾರೆ.

ಇವರು ಟೀಕಿಸುವಂತಹ ಯಾವ ತಪ್ಪನ್ನೂ ಸಿದ್ಧರಾಮಯ್ಯ ಅವರು ಮಾಡಿಲ್ಲ. ಕಟ್ಟಿಕೊಂಡ ಹೆಂಡತಿಯನ್ನು ಕೊಂದು ಎದುರಾಳಿ ಪಕ್ಷದ ರಾಜಕಾರಣಿಗಳ ಕಾಲು ಹಿಡಿದು ಪಾರಾಗಿ ಬಂದಿಲ್ಲ. ಆದರೂ ಅವರನ್ನು ದ್ವೇಷಿಸುತ್ತಾರೆಂದರೆ, ಇದೊಂದು ಫ್ಯಾಶಿಸ್ಟ್ಟ್ ರೋಗವಲ್ಲದೇ ಮತ್ತೇನೂ ಅಲ್ಲ.

ಈ ದೇಶ ಫ್ಯಾಶಿಸಂ ದಾರಿಯಲ್ಲಿ ಬಲು ದೂರ ಸಾಗಿ ಬಂದಿದೆ. ಗೋಡ್ಸೆಗೆ ಗಾಂಧಿಯನ್ನು ಕೊಲ್ಲಲು ಪಿಸ್ತೂಲ್ ಅಸ್ತ್ರವಾದಂತೆ, ಭಾರತದ ಜಾತ್ಯತೀತ ಜನತಂತ್ರವನ್ನು ಕೊಲ್ಲಲು ಇವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆದು ಬಹುಮುಖಿ ಭಾರತವನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಆದ್ಯತೆ ಆಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News