ಸಿಗದ ಆಂಬುಲೆನ್ಸ್: ಕುದುರೆ ಗಾಡಿಯಲ್ಲೇ ಹೆರಿಗೆ!

Update: 2016-09-26 03:12 GMT

ಬರೇಲಿ, ಸೆ.26: ಗ್ರಾಮೀಣ ಭಾರತದ ಆರೋಗ್ಯ ಕಾಳಜಿ ವ್ಯವಸ್ಥೆ ಕಳಪೆಯಾಗಿವುದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ ನೋಡಿ. ಗ್ರಾಮೀಣ ಭಾಗದಲ್ಲಿ ಗರ್ಭಿಣಿ ಮಹಿಳೆಯರ ಜೀವಕ್ಕೇ ಅಪಾಯ ಇರುವುದಕ್ಕೆ ಕನ್ನಡಿ ಹಿಡಿಯುವ ಘಟನೆ. ತುಂಬು ಗರ್ಭಿಣಿಯನ್ನು ಕರೆದೊಯ್ಯಲು ಗ್ರಾಮದಲ್ಲಿ ಆಂಬಲೆನ್ಸ್ ಸಿಗದ ಕಾರಣ ಆಕೆಯನ್ನು ಕರೆದೊಯ್ಯುತ್ತಿದ್ದ ಕುದುರೆಗಾಡಿಯಲ್ಲೇ ಹೆರಿಗೆ ಸಂಭವಿಸಿದೆ.

ಜಿಲ್ಲೆಯ ಮೀರ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರದ ಎದುರೇ ಈ ಘಟನೆ ಸಂಭವಿಸಿದೆ. ಇಂಥ ಪ್ರಕರಣಗಳಲ್ಲಿ ಆಶಾ ಕಾರ್ಯಕರ್ತೆಯರು ಗರ್ಭಿಣಿ ಜತೆಗೆ ಹಳ್ಳಿಯಿಂದ ಆಗಮಿಸಿ, ಆಸ್ಪತ್ರೆಗೆ ಸೇರಿಸಬೇಕು. ಇದೀಗ ಆಶಾ ಕಾರ್ಯಕರ್ತರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ, 102/108 ದೂರವಾಣಿ ಸಂಖ್ಯೆಗೆ ಕರೆ ಮಾಡಿದರೂ ಆಂಬುಲೆನ್ಸ್ ಸಿಗಲಿಲ್ಲ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಅಮಿತ್ ಕುಮಾರ್ ವಿವರಿಸಿದ್ದಾರೆ.

ವೈದ್ಯಕೀಯ ನಿರ್ಲಕ್ಷ್ಯ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯ್ ಯಾದವ್ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

"ಮುಂಜಾನೆ 5 ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಆಂಬುಲೆನ್ಸ್ ಸಿಗಲಿಲ್ಲ. ಆದ್ದರಿಂದ ಕುದುರೆಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆವು. ಆಸ್ಪತ್ರೆಗೆ ತಲುಪಿದಾಗ, ಆಶಾ ಕಾರ್ಯಕರ್ತೆಯರು ಮುಷ್ಕರದಲ್ಲಿರುವುದು ತಿಳಿದುಬಂತು. ಆದರೆ ಆಸ್ಪತ್ರೆ ಸಿಬ್ಬಂದಿ ಲಭ್ಯವಿದ್ದರು. ಆದರೆ ಮಹಿಳೆಯನ್ನು ಆಸ್ಪತ್ರೆಗೆ ಒಯ್ಯುವಷ್ಟು ಸಮಯಾವಕಾಶ ಇರಲಿಲ್ಲ. ಇದರಿಂದ ಕುದುರೆ ಗಾಡಿಯಲ್ಲೇ ಆಸ್ಪತ್ರೆ ಸಿಬ್ಬಂದಿ ಹೆರಿಗೆ ಮಾಡಿಸಿದರು" ಎಂದು ಗರ್ಭಿಣಿ ಮಹಿಳೆ ಪ್ರೇಮಾವತಿಯವರ ಅಕ್ಕ ಶಾಂತಿ ವಿವರಿಸಿದ್ದರು.

ಆದರೆ ಆಡಳಿತ ಯಂತ್ರ ನಮ್ಮ ಮೇಲೆ ಗೂಬೆ ಕೂರಿಸಲು ಹೊರಟಿದೆ. ಕುಟುಂಬದವರು ಆಂಬುಲೆನ್ಸ್‌ಗೆ ಕರೆ ಮಾಡಿದಾಗ, ಆಸ್ಪತ್ರೆಯವರು ಕರೆ ಸ್ವೀಕರಿಸಿರುವ ಸಾಧ್ಯತೆ ಇಲ್ಲ ಎಂದು ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಇಂದುಶ್ರೀ ಗಂಗ್ವಾರ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News