ಉಕ್ಕು ಸೇತುವೆ ಯೋಜನೆ ಸಂಪೂರ್ಣ ಪಾರದರ್ಶಕ: ಸಿಎಂ

Update: 2016-10-17 11:57 GMT

ಬೆಂಗಳೂರು, ಅ.17: ಉಕ್ಕು ಸೇತುವೆ ನಿರ್ಮಾಣ ಯೋಜನೆ ಸಂಪೂರ್ಣ ಪಾರದರ್ಶಕವಾಗಿದೆ. ಈ ಕುರಿತು ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ.

ಸಾರ್ವಜನಿಕರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡೇ ಸರಕಾರ ಯೋಜನೆ ರೂಪಿಸಿದೆ. ಸಂಚಾರದ ಒತ್ತಡದಿಂದ ಜನ ಅನುಭವಿಸುತ್ತಿರುವ ಕಷ್ಟ ಕಡಿಮೆ ಮಾಡುವುದು ಯೋಜನೆಯ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪರಿಶೀಲನೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಉಕ್ಕು ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಗರ ಸಂಚಾರ ಕೈಗೊಂಡಿರಲಿಲ್ಲ. ಉಕ್ಕು ಸೇತುವೆ ನಿರ್ಮಾಣ ವಿಚಾರ 2010ರಲ್ಲೇ ಪ್ರಸ್ತಾಪವಾಗಿತ್ತು. ಬಳಿಕ 2014-15ನೆ ಸಾಲಿನ ಬಜೆಟ್‍ನಲ್ಲಿ ಯೋಜನೆ ಘೋಷಿಸಲಾಗಿತ್ತು. ಬಳಿಕ ಯೋಜನಾ ವರದಿ ಸಿದ್ಧಪಡಿಸಿ ವೆಬ್‍ಸೈಟ್‍ಗೂ ಹಾಕಲಾಗಿದೆ. ಯೋಜನೆ ಸಂಪೂರ್ಣ ಪಾರದರ್ಶಕವಾಗಿದೆ. ಮುಖ್ಯ ಕಾರ್ಯದರ್ಶಿಗಳು ಈ ಕುರಿತು ನಾಲ್ಕು ಮತ್ತು ನಾನು ಎರಡು ಸಭೆಗಳನ್ನು ನಡೆಸಿದ್ದೇನೆ. ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಬಿಎಂಪಿ 2010ರಲ್ಲಿ ಖಾಸಗಿ ಸಂಸ್ಥೆಗೆ ವಹಿಸಿತ್ತು. ಬಳಿಕ ಅದೇ ವರ್ಷ ಬಿಡಿಎಗೆ ಯೋಜನೆಯನ್ನು ವರ್ಗಾಯಿಸಲಾಗಿದೆ. ಹೊಟ್ಟಿ ಉರಿಯಿಂದ ಮತ್ತು ರಾಜಕೀಯ ಕಾರಣಗಳಿಗೆ ಬಿಜೆಪಿಯವರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಅವರದ್ದೇ ಕೂಸು. ನಾವು ಬೆಳೆಸಿದ್ದೇವೆ ಅಷ್ಟೆ ಎಂದು ಹೇಳಿದರು. 
ಉಕ್ಕು ಸೇತುವೆ ನಿರ್ಮಾಣ ಸಂಬಂಧ 2013ರಲ್ಲಿ ಮೊದಲ ಯೋಜನಾ ವರದಿ ಸಿದ್ಧವಾಯಿತು. ಅಂತಿಮ ಯೋಜನಾ ವರದಿ ತಯಾರಾಗಿದ್ದು 2015ರಲ್ಲಿ. ಜೊತೆಗೆ ಸಾಧ್ಯಾಸಾಧ್ಯತೆ ವರದಿಯೂ ವೆಬ್‍ಸೈಟ್‍ನಲ್ಲಿದೆ. ಯೋಜನೆಗೆ ಸಂಬಂಧಿಸಿದಂತೆ ಸರಾಸರಿ ದರ 2014ರಲ್ಲಿ ಕಡಿಮೆ ಇತ್ತು. ಎರಡು ವರ್ಷದ ಬಳಿಕ ಟೆಂಡರ್ ಕರೆದಿರುವುದರಿಂದ ವೆಚ್ಚದ ಪ್ರಮಾಣ  ಕೊಂಚ ಏರಿಕೆಯಾಗಿದೆ. ಉಕ್ಕು ಮಾರಾಟದ ಮೇಲಿನ  ಮೌಲ್ಯವರ್ಧಿತ ತೆರಿಗೆ 5ರಿಂದ 14ಕ್ಕೆ ಏರಿಕೆಯಾಗಿರುವುದೂ ವೆಚ್ಚ ಹೆಚ್ಚಲು  ಕಾರಣವಾಗಿದೆ. ಯೋಜನೆಯ ವಿವರಗಳನ್ನು ವೆಬ್‍ಸೈಟ್‍ನಲ್ಲಿ ಅಳವಡಿಸಿದ ಬಳಿಕ ಶೇ. 77ರಷ್ಟು ಮಂದಿ ಸೇತುವೆ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾವು ಪ್ರಜಾಪ್ರಭುತ್ವ, ಜನಾಭಿಪ್ರಾಯ, ಸಂಚಾರದ ಒತ್ತಡ ಕಡಿಮೆ ಆಗಬೇಕು ಎನ್ನುತ್ತೇವೆ. ಮತ್ತೊಂದೆಡೆ ಯೋಜನೆ ಜಾರಿಗೆ ಬರಬಾರದು ಎಂದರೆ ಏನು ಮಾಡಬೇಕು ನೀವೇ ಹೇಳಿ ಎಂದು ಪ್ರಶ್ನಿಸಿದರು. 

ವೆಬ್‍ಸೈಟ್‍ನಲ್ಲಿ ಎಲ್ಲರ ಅಭಿಪ್ರಾಯ ಕೇಳಲಾಗಿದೆ. ಯೋಜನೆಗೆ ಜಾಗತಿಕ ಟೆಂಡರ್ ಕರೆದಾಗ ನವಯುಗ ಮತ್ತು ಎಲ್ ಅಂಡ್ ಟಿ ಕಂಪನಿ ಭಾಗವಹಿಸಿತ್ತು. ಕಡಿಮೆ ಬಿಡ್ ದಾಖಲು ಮಾಡಿದ್ದು ಎಲ್ ಆಂಡ್ ಟಿ ಕಂಪನಿಯವರು. ಅವರು ದಾಖಲು ಮಾಡಿದ್ದ ಬಿಡ್‍ನಲ್ಲೂ ಮಾತುಕತೆ ನಡೆಸಿ ಕೊಂಚ ಕಡಿಮೆ ಮಾಡಲಾಗಿದೆ. ಉಕ್ಕು ಸೇತುವೆ ಜೊತೆಗೆ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕವನ್ನೂ ಕಲ್ಪಿಸಲಾಗುವುದು. ಅದಕ್ಕಾಗಿ 9 ಮಾರ್ಗಗಳನ್ನು ಗುರುತಿಸಿ ವೆಬ್‍ಸೈಟ್‍ಗೆ ಹಾಕಲಾಗಿದೆ. ಅದಕ್ಕೂ ಜನಾಭಿಪ್ರಾಯ ಕೇಳಲಾಗುವುದು. ಯಾವುದೇ ಯೋಜನೆ ಮಾಡುವಾಗ ಕೆಲ ಮರಗಳು ಹೋಗುವುದು ಸಹಜ. ಮೇಲು ರಸ್ತೆ, ಫುಟ್‍ಪಾತ್, ಅಂಡರ್ ಪಾಸ್ ನಿರ್ಮಿಸುವಾಗ ಅನಿವಾರ್ಯವಾಗಿ ಮರಗಳನ್ನು ಕಡಿಯಬೇಕಾಗುತ್ತದೆ. ಅದಕ್ಕಾಗಿ ಬೇರೆ ಕಡೆ ಗಿಡಗಳನ್ನು ನೆಡಲು ಮತ್ತು ಮರಗಳನ್ನು ಸ್ಥಳಾಂತರಿಸುವ ಬಗ್ಗೆ ಆಲೋಚಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಹತ್ತು ಲಕ್ಷ ಗಿಡಗಳನ್ನು ನೆಡಲು ಬಿಬಿಎಂಪಿಗೆ ಸೂಚಿಸಲಾಗಿದೆ. ನಮಗೂ ಪರಿಸರದ ಬಗ್ಗೆ ಕಾಳಜಿ ಇದೆ. ಪರಿಸರ ಉಳಿಸುವ ಬಗ್ಗೆ ಬದ್ಧತೆ ಇದೆ. ಪರಿಸರ ನಾಶವಾಗಲಿ ಎಂದು ನಾವು ಹೇಳುವುದಿಲ್ಲ ಎಂದು ಸಿಎಂ ಹೇಳಿದರು. 

ಎಸ್ಟೀಮ್ ಮಾಲ್ ಬಳಿ ಸ್ಕೈ ವಾಕ್ ನಿರ್ಮಾಣದಲ್ಲಿ ವಿಳಂಬವಾಗಿದೆ. ಭೂ ಸ್ವಾಧೀನದಲ್ಲಿ ಸಮಸ್ಯೆ ಉಂಟಾಗಿದ್ದು ಇದಕ್ಕೆ ಕಾರಣ. ಈಗ ಸಮಸ್ಯೆ ನಿವಾರಣೆಯಾಗಿದ್ದು, ಕಾಮಗಾರಿ ಆರಂಭವಾಗಲಿದೆ. ಉಕ್ಕು ಸೇತುವೆ ನಿರ್ಮಾಣ ವಿರೋಧಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನದವರು ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ -ಯೋಜನೆ ವಿಚಾರದಲ್ಲಿ ಮುಂದುವರಿಯಿರಿ ಎಂದು ಹೇಳಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇವೆ. ಹೀಗಾಗಿ ಸಂಶಯಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಬ್ಬಳಾದ ವರೆಗೆ ಸಿಗ್ನಲ್ ಫ್ರೀ ರಸ್ತೆ ಇದೆ. ಈ ರಸ್ತೆಯಲ್ಲಿ ಇತ್ತೀಚೆಗೆ ಸಂಚಾರ ದಟ್ಟಣೆ ಮಿತಿ ಮೀರಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ.  ಹೆಣ್ಣೂರು, ಕಣ್ಣೂರು, ಮೈಲನಹಳ್ಳಿ ಬಾಗಲೂರು ರಸ್ತೆ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸಲಿದೆ. ಈ ರಸ್ತೆಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಹೆಣ್ಣೂರು ಬಳಿ ಸ್ಥಗಿತಗೊಂಡಿದ್ದ ಮೇಲು ರಸ್ತೆ ಕಾಮಗಾರಿಯನ್ನು ಪುನಾರಂಭಿಸಲಾಗಿದೆ.  ಥಣಿಸಂದ್ರ, ನಾಗವಾರ ರಸ್ತೆ 21 ಕಿ.ಮೀ. ಮಾರ್ಗ ಹೊಂದಿದೆ. ಟ್ಯಾನರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ 20 ಕಿ.ಮೀ. ಇದೆ. ಥಣಿಸಂದ್ರ, ನಾಗವಾರ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. 31 ಕೋಟಿ ರೂ. ವೆಚ್ಚದಲ್ಲಿ ಗ್ರೇಡ್ ಸಪರೇಟರ್ ನಿರ್ಮಿಸಲಾಗುತ್ತಿದೆ. ಹೆಣ್ಣೂರು, ಬಾಗಲೂರು, ಮೈಲನಹಳ್ಳಿ ರಸ್ತೆ ಅಭಿವೃದ್ಧಿಗೂ ಅನುದಾನ ನೀಡಲಾಗಿದೆ.  ಬಳ್ಳಾರಿ ಮತ್ತು ತುಮಕೂರು ರಸ್ತೆಗೆ ಸಂಪರ್ಕ ಮಾರ್ಗವನ್ನೂ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ವೈಟ್‍ಫೀಲ್ಡ್-ಕೆ.ಆರ್.ಪುರ ರಸ್ತೆಯ ಅಭಿವೃದ್ಧಿಗೂ ಸರ್ಕಾರ ಮುಂದಾಗಿದೆ. ಇವೆಲ್ಲವೂ ಸಂಚಾರದ ಒತ್ತಡ ಕಡಿಮೆ ಮಾಡುವ ಕ್ರಮಗಳಾಗಿವೆ. ಮೈಲನಹಳ್ಳಿ ಬಳಿ ಸ್ವಲ್ಪ ಭೂಮಿ ಸ್ವಾಧೀನ ಆಗಬೇಕಿದೆ. ಈ ಕುರಿತು ಕೆಐಎಡಿಬಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ. ಡಿಸೆಂಬರ್ ವೇಳೆಗೆ 15 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಎಲ್ಲ ಕಾಮಗಾರಿಗಳ ಪರಿಶೀಲನೆಯನ್ನು ಇಂದು ನಡೆಸಿದ್ದೇನೆ. ಈ ಹಿಂದೆ ಅಧಿಕಾರ ನಡೆಸಿದವರು ಈ ಅಭಿವೃದ್ಧಿ ಕಾರ್ಯಗಳಿಗೆ ಕೈ ಹಾಕಿರಲಿಲ್ಲ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ನಾವು 300 ಕೋಟಿ ರೂ. ಒದಗಿಸಿದ್ದೇವೆ ಎಂದು ಸಿಎಂ ವಿವರಿಸಿದರು. 

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆಯನ್ನು ನಾನು ಖಂಡಿಸುತ್ತೇನೆ. ಯಾರದ್ದೇ ಕೊಲೆಯಾದರೂ ಅದು ಅಮಾನವೀಯ. ರುದ್ರೇಶ್ ಕೊಲೆ ವಿಚಾರದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತೇವೆ. ನಿಸ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಸಿಎಂ ಹೇಳಿದರು. 

ಚುನಾವಣೆಯಲ್ಲಿ ನನ್ನನ್ನು ಸೋಲಿಸುವುದು ಬಿಡುವುದರ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿಕೆಗೆ ಪ್ರತಿಯಾಗಿ ಮುಖ್ಯಮಂತ್ರಿಯವರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News