‘ಹೆಚ್ಚು ಶಬ್ದ ಬರುವ ಪಟಾಕಿಗಳ ಬಳಕೆ ಬೇಡ’

Update: 2016-10-21 18:33 GMT

ಬೆಂಗಳೂರು, ಅ. 21: ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸುವ ನಿಟ್ಟಿನಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ಕೆಲವು ಮುನ್ನೆಚ್ಚರಿಕೆಯನ್ನು ತಿಳಿಸಿದ್ದು, ಮಕ್ಕಳಿಗೆ ದೊಡ್ಡವರ ಸಮ್ಮುಖದಲ್ಲಿ ಪಟಾಕಿ ಹಚ್ಚಲು ತಿಳಿಸಬೇಕು. ತೆರೆದ ಪ್ರದೇಶದಲ್ಲಿ ಪಟಾಕಿ ಹಚ್ಚುವುದು ಸುರಕ್ಷಿತ. ಯಾವುದೇ ವೇಳೆ ಮನೆಯೊಳಗೆ ಪಟಾಕಿ ಹಚ್ಚಬಾರದು ಎಂದು ಕಟ್ಟಪ್ಪಣೆ ಮಾಡಿದೆ.

 ಆದಷ್ಟು ಮಟ್ಟಿಗೆ ಶರೀರಕ್ಕೆ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ಧರಿಸತಕ್ಕದ್ದು. ದೊಗಲೆ ಬಟ್ಟೆಗಳನ್ನು ಧರಿಸಬಾರದು. ಸುರ-ಸುರ ಬತ್ತಿ ಇತ್ಯಾದಿಗಳನ್ನು ಶರೀರದಿಂದ ಆದಷ್ಟು ದೂರ ಹಿಡಿಯಬೇಕು. ಪಟಾಕಿ ಹಚ್ಚುವ ವೇಳೆ ಅದರ ಮೇಲೆ ಬಾಗಬಾರದು. ಸಾಧ್ಯವಾದಷ್ಟು ಮಟ್ಟಿಗೆ ಪಕ್ಕದಿಂದ ಹಚ್ಚತಕ್ಕದ್ದು. ಯಾವುದೇ ಪಾತ್ರೆಯೊಳಗೆ ಅಥವಾ ಇಕ್ಕಟ್ಟಾದ ಸ್ಥಳದಲ್ಲಿ ಪಟಾಕಿ ಹಚ್ಚಬಾರದು.
ಪಟಾಕಿಗಳನ್ನು ಜೇಬಿನಲ್ಲಿ ಇಡಬಾರದು. ಯಾವುದೇ ಸಂದರ್ಭದಲ್ಲಿ ಪಟಾಕಿಗಳನ್ನು ಬೆಂಕಿ ಅಥವಾ ಉಷ್ಣತೆ ಹೆಚ್ಚಿರುವ ಸ್ಥಳಗಳಲ್ಲಿ ಇಡಬಾರದು ಹಾಗೂ ಪೊಟ್ಟಣಗಳನ್ನು ತೆರೆಯಬಾರದು. ಹಚ್ಚಿರುವ ಪಟಾಕಿ ಸಿಡಿಯದಿದ್ದರೆ ಅದನ್ನು ಪುನರ್ ಪರೀಕ್ಷಿಸಲು ಪ್ರಯತ್ನಿಸಬಾರದು.
ಹೂಕುಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ಹಚ್ಚಬಾರದು. ರಾಕೆಟ್ ಬಳಸದಿರುವುದೇ ಉತ್ತಮ. ಬೇರೆಯವರಿಗೆ ತೋರಿಸಿಕೊಳ್ಳಲು ಪಟಾಕಿ ಹಚ್ಚುವಾಗ ಅಪಾಯಕ್ಕೆ ಅವಕಾಶ ಕೊಡಬಾರದು. ಪಟಾಕಿ ಹಚ್ಚುವಾಗ ಯಾವಾಗಲೂ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವುದು ಸುರಕ್ಷಿತ, ಆಕಸ್ಮಿಕವಾಗಿ ಸುಟ್ಟಗಾಯಗಳಾದರೆ ಕೂಡಲೇ ತಣ್ಣೀರನ್ನು ಸುರಿಯತಕ್ಕದ್ದು.
ಸಾಧ್ಯವಾದಷ್ಟು ಮಟ್ಟಿಗೆ ಸ್ನೇಹಿತರ ಜೊತೆ ಸೇರಿ ಸಾರ್ವಜನಿಕ ತೆರೆದ ಪ್ರದೇಶದಲ್ಲಿ ಪಟಾಕಿ ಹಚ್ಚುವುದು ಸೂಕ್ತ. ಇದರಿಂದ ಎಲ್ಲರೂ ಸಂತೋಷ ಪಡಬಹುದು ಹಾಗೂ ಸುರಕ್ಷಿತ. ಪಟಾಕಿ ಹಚ್ಚುವಾಗ ಮಕ್ಕಳು, ವಯಸ್ಸಾದವರು, ಕಾಯಿಲೆ ಇರುವವರು ಹಾಗೂ ಪ್ರಾಣಿಗಳನ್ನು ಗಮನಿಸಿ, ಇವರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಪ್ರಯತ್ನಿಸಿ. ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚು ಶಬ್ದ ಬರುವ ಪಟಾಕಿಗಳನ್ನು ಆಸ್ಪತ್ರೆ ಮತ್ತು ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಬಳಸುವುದನ್ನು ತಪ್ಪಿಸುವುದು ಸೂಕ್ತವೆಂದು ಅಗ್ನಿ ಶಾಮಕ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News