ಜಯಲಲಿತಾಗೆ ಎರಡನೆ ಬಾರಿ ಸಿಎಂ ಆಗುವ ಅವಕಾಶ ಒದಗಿಸಿದ ನ್ಯಾ.ಫಾತಿಮಾ ಬೀವಿ

Update: 2016-12-06 11:45 GMT

ಪತ್ತನಂತಿಟ್ಟ, ಡಿ. 6: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷಿಸಲ್ಪಟ್ಟಿದ್ದರಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದಂತೆ ನಾಮಪತ್ರ ತಿರಸ್ಕರಿಸಲ್ಪಟ್ಟಿದ್ದ ಜಯಲಲಿತಾರಿಗೆ ಎರಡನೆಯ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕೇರಳ ಮೂಲದ ರಾಜ್ಯಪಾಲೆ ಜಸ್ಟಿಸ್ ಫಾತಿಮಾ ಬೀವಿ ಒದಗಿಸಿದ್ದರು. 20014ಲ್ಲಿ ಎಐಎಡಿಎಂಕೆ 132 ಸೀಟುಗಳೊಂದಿಗೆ ತಮಿಳ್ನಾಡಿನಲ್ಲಿ ಬಹುಮತ ಪಡೆದಾಗ ಶಾಸಕಿಯಲ್ಲದ ಜಯಲಲಿತಾರಿಗೆ ಎರಡನೆ ಬಾರಿಮುಖ್ಯಮಂತ್ರಿಯಾಗಿ ಅಂದಿನ ತಮಿಳ್ನಾಡಿನ ರಾಜ್ಯಪಾಲೆ ಜಸ್ಟಿಸ್ ಫಾತಿಮಾ ಬೀವಿ ಪ್ರಮಾಣವಚನವನ್ನು ಬೋಧಿಸಿದ್ದರು.

ಆದರೆ ಜಯಲಲಿತಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಆಹ್ವಾನಿಸಿದ್ದಕ್ಕಾಗಿ ಅಂದಿನ ಎನ್‌ಡಿಎ ಸರಕಾರ ಮತ್ತು ಘಟಕ ಪಕ್ಷವಾಗಿದ್ದ ಡಿಎಂಕೆಯ ಕೆಂಗಣ್ಣಿಗೆ ಜಸ್ಟಿಸ್ ಫಾತಿಮಾ ಬೀವಿ ಪಾತ್ರರಾಗಿದ್ದರು. ಆದ್ದರಿಂದ ಕಾಲಾವಧಿ ಮುಗಿಯುವ ಮೊದಲೇ ರಾಜ್ಯಪಾಲೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಡಿಎಂಕೆ ಅಧ್ಯಕ್ಷೆ ಎಂ ಕುರಣಾ ನಿಧಿ ಮತ್ತು ಡಿಎಂಕೆಯ ಇಬ್ಬರು ಕೇಂದ್ರ ಸಚಿವರನ್ನು ಬಂಧಿಸಿದ ಘಟನೆಯಲ್ಲಿ ಸಂವಿಧಾನ ಹೊಣೆಗಾರಿಕೆಯನ್ನು ಈಡೇರಿಸಿಲ್ಲ ಎಂದು ಬೆಟ್ಟು ಮಾಡಿ ರಾಜ್ಯಪಾಲೆಯನ್ನು ಮರಳಿ ಕರೆಸಲು ವಾಜಪೇಯಿ ಸರಕಾರ ತೀರ್ಮಾನಿಸಿದ್ದರಿಂದ ಫಾತಿಮಾ ಬೀವಿ ರಾಜ್ಯಪಾಲೆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಂದಿನ ರಾಷ್ಟ್ರಪತಿ ಕೆಆರ್ ನಾರಾಯಣನ್ ರಾಜೀನಾಮೆಯನ್ನು ಸ್ವೀಕರಿಸಿದ್ದರು.

1996ರ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸೋತಿದ್ದರು. 234 ಸದಸ್ಯರ ವಿಧಾನಸಭೆಯಲ್ಲಿ ಕೇವಲ ನಾಲ್ಕು ಮಂದಿ ಶಾಸಕರಿದ್ದರು. ಆದರೆ 2001ರಲ್ಲಿ ಪಾರ್ಟಿ ಅಧಿಕಾರಕ್ಕೆ ಮರಳಿದರೂ ಜಯಲಲಿತಾ ಭ್ರಷ್ಟಾಚಾರ ಹಗರಣದಲ್ಲಿಸಿಲುಕಿಕೊಂಡಿದ್ದರು. ಕರುಣಾನಿಧಿ ಸರಕಾರ ನೇಮಿಸಿದ್ದ ವಿಶೇಷ ಕೋರ್ಟು ಝಾನ್ಸಿ ಕೇಸಿನಲ್ಲಿ ಜಯಲಲಿತಾರಿಗೆ ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಚುನಾವಣಾ ನಾಮಪತ್ರ ತಿರಸ್ಕೃತಗೊಂಡಿತ್ತು.

ಆಂಡಿಪಟ್ಟಿ, ಕೃಷ್ಣಗಿರಿ, ಭುನಗಿರಿ, ಪುದುಕೋಟ್ಟ ಎಂಬ ನಾಲ್ಕು ಸ್ಥಳಗಳಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರವನ್ನು ಸಲ್ಲಿಸಿದ್ದರೂ ತಿರಸ್ಕೃತಗೊಂಡಿತ್ತು. 1951ರ ಜನಪ್ರತಿನಿಧಿ ಕಾನೂನಿನ ಆರನೆ ಕಲಂ ಪ್ರಕಾರ ಕ್ರಿಮಿನಲ್ ಕೇಸಿನಲ್ಲಿ 24 ತಿಂಗಳಿಗಿಂತ ಹೆಚ್ಚು ಜೈಲುಶಿಕ್ಷೆ ವಿಧಿಸಲ್ಪಟ್ಟವರು ಆರುವರ್ಷಕಾಲ ಚುನಾವಣೆ ಸ್ಪರ್ಧಿಸುವಂತಿರಲಿಲ್ಲ.

ಅದರೆ ಬಹುಮತ ಸಿಕ್ಕಿದ ಎಐಡಿಎಂಕೆ ಜಯಲಲಿತಾರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿತ್ತು. ಶಾಸಕರಲ್ಲದ ಅವರು ಆರುತಿಂಗಳಲ್ಲಿ ವಿಧಾನಸಭೆಗೆ ಆಯ್ಕೆಯಾದರೆ ಸಾಲುತ್ತದೆ ಎಂಬ ಸಂವಿಧಾನದ ನಿಯಮದಂತೆ ಅವರನ್ನು ಶಾಸಕಾಂಗ ಪಕ್ಷ ನಾಯಕಿಯಾಗಿ ಆಯ್ಕೆಮಾಡಲಾಯಿತು. ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ್ದರಿಂದ ಸ್ಪರ್ಧಿಸಲು ಆಗದಿರುವ ಜಯಲಲಿತಾ ಮುಖ್ಯಮಂತ್ರಿಯಾಗಲು ಸಾಧ್ಯವೇ ಎಂಬುದು ಕಾನೂನಿನ ಸಮಸ್ಯೆಯಾಗಿ ಪರಿವರ್ತನೆಯಾಗಿತ್ತು.

ದೇಶಾದ್ಯಂತ ಇದು ಚರ್ಚಾ ವಿಷಯವಾಯಿತು.

ಇದೇ ವೇಳೆ ವಿಶೇಷ ಕೋರ್ಟಿನ ಶಿಕ್ಷೆಗೆ ಹೈಕೋರ್ಟು ಸ್ಟೇ ನೀಡಿತು. ಜಯಲಲಿತಾಗೆ ಇದು ಪ್ರಯೋಜನವಾಯಿತು. ಮುನ್ಸಿಫ್ ಸಹಿತ ಸುಪ್ರೀಂಕೋರ್ಟಿನ ನ್ಯಾಯಾಧೀಶರ ಸ್ಥಾನ ಆಲಂಕರಿಸಿದ್ದ ಕಾನೂನು ತಜ್ಞೆ ರಾಜ್ಯಪಾಲೆಯ ನಿರ್ಧಾರ ಹೇಗಿರುತ್ತದೆ ಎಂಬ ಕುತೂಹಲ ಎಲ್ಲೆಡೆ ನೆಲೆಸಿತ್ತು.

ರಾಜ್‌ಭವನ್‌ಗೆ ಜಯಲಲಿತಾರನ್ನು ಆಮಂತ್ರಿಸಿದ ಫಾತಿಮಾ ಬೀವಿ 2001ಮೇ 24ಕ್ಕೆ ಎರಡನೆ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಬೋಧಿಸಿದರು. ನಂತರ ಸಂವಿಧಾನದ ಪ್ರಕಾರ ತಾನು ತೀರ್ಮಾನ ತಳೆದಿರುವೆ ಎಂದು ಫಾತಿಮಾ ಬೀವಿ ನಂತರ ಹೇಳಿಕೆ ನೀಡಿದ್ದರು. ಆದರೆ ಇದರ ವಿರುದ್ಧ ಡಿಎಂಕೆ ಹೋರಾಟಕ್ಕಿಳಿಯಿತು. ಆದ್ದರಿಂದ ಕರುಣಾನಿಧಿ ಮತ್ತು ಇತರರ ಬಂಧನನಡೆದಿತ್ತು. ಪರಿಸ್ಥಿತಿ ಅಧ್ಯಯನಕ್ಕೆ ಬಂದ ಎನ್‌ಡಿಎ ಸಂಚಾಲಕ ಜಾರ್ಜ್‌ಫೆರ್ನಾಂಡಿಸ್ ನೇತೃತ್ವದ ತಂಡ ವಿಧಾನಸಭೆ ಬರ್ಕಾಸ್ತುಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿತ್ತು. ಆದರೆ ಇದಕ್ಕೆ ರಾಜ್ಯಪಾಲೆಯ ವರದಿ ಅಗತ್ಯವಾಗಿತ್ತು. ಆದರೆ ರಾಜ್ಯಪಾಲೆ ವರದಿ ಸಲ್ಲಿಸಲು ಸಿದ್ಧರಾಗಲಿಲ್ಲ.

 2001 ಜುಲೈ ಒಂದರಂದು ರಾತ್ರಿ ಸಭೆಸೇರಿದ ಕೇಂದ್ರಸಚಿವ ಸಂಪುಟ ತಮಿಳ್ನಾಡು ರಾಜ್ಯಪಾಲೆ ಜಸ್ಟಿಸ್ ಫಾತಿಮಾ ಬೀವಿಯವರನ್ನು ಹಿಂದಕ್ಕೆ ಕರೆಯಲು ತಿರ್ಮಾನಿಸಿತ್ತು. ಅದಕ್ಕೆ ಅವಕಾಶ ಕೊಡದೆ ಅವರು ರಾಜೀನಾಮೆ ನೀಡಿದರು. 1997 ಜನವರಿ 25ಕ್ಕೆ ಅವರು ರಾಜ್ಯಪಾಲೆಯಾಗಿ ನೇಮಕವಾಗಿದ್ದರು. ಈಗ ಪತ್ತನಂತಿಟ್ಟದ ತನ್ನ ಮನೆಯಲ್ಲಿ ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶೆ ಫಾತಿಮಾ ಬೀವಿ ನಿವೃತ್ತ ಜೀವನ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News