ತೆಲುಗುದೇಶಂ ಮುಖಂಡನ ಪುತ್ರ ಮತ್ತು ಸ್ನೇಹಿತರಿಂದ ಇಬ್ಬರು ಬುಡಕಟ್ಟು ಬಾಲಕಿಯರ ಸಾಮೂಹಿಕ ಅತ್ಯಾಚಾರ
Update: 2017-05-23 03:56 GMT
ವಿಶಾಖಪಟ್ಟಣಂ, ಮೇ 23: ಆಡಳಿತಾರೂಢ ತೆಲುಗುದೇಶಂ ಮುಖಂಡನ ಪುತ್ರ ಮತ್ತು ಮುಖ್ಯಪೇದೆಯೊಬ್ಬರ ಪುತ್ರ ಸೇರಿದಂತೆ ಎಂಟು ಮಂದಿ ಯುವಕರು, ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ.
ಚಿಂತಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ತೇಜಂಗಿ ಗ್ರಾಮದ ಶಾಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದರೂ, ಸೋಮವಾರ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿಯರು ಮತ್ತು ಪೋಷಕರು ಸರಪಂಚರ ಬಳಿಗೆ ತೆರಳಿ ದೂರು ನೀಡಿದ ಹಿನ್ನೆಲೆಯಲ್ಲಿ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಟಿಡಿಪಿ ಮುಖಂಡ ಎ.ಅಂಗದರಾವ್ ಅವರ ಪುತ್ರ ಕೆ.ವರುಣ್, ಮುಖ್ಯಪೇದೆ ಕೆ.ಗಣೇಶ್ ಎಂಬವರ ಮಗ ಕೆ.ನಾಗೇಂದ್ರ, ಪಿ.ದಿವಾಕರ್, ಎಂ.ಹರಿಗೋವಿಂದ್ರ ಪ್ರಸಾದ್ ಹಾಗೂ ಭೀಮಾ ನಾಯ್ಡು ಎಂಬ ಐದು ಮಂದಿ ಆರೋಪಿಗಳನ್ನು ಪತ್ತೆ ಮಾಡಲಾಗಿದ್ದು, ಇತರ ಮೂವರ ಗುರುತು ಪತ್ತೆಯಾಗಿಲ್ಲ.