ಮೇಲ್ಜಾತಿ-ಕೆಳಜಾತಿಯೆಂದು ವಿಂಗಡಿಸುವ ಧರ್ಮ ಒಳ್ಳೆಯ ಧರ್ಮವಲ್ಲ: ದಲೈಲಾಮಾ
ಬೆಂಗಳೂರು, ಮೇ 23: ವಿವಿಧ ಧರ್ಮಗಳ ತತ್ವಾದರ್ಶಗಳಲ್ಲಿ ವ್ಯತ್ಯಾಸವಿರಬಹುದು. ಆದರೆ ಎಲ್ಲ ಧರ್ಮಗಳು ಪ್ರತಿಪಾದಿಸುವುದು ಮಾನವೀಯತೆ, ಕರುಣೆ ಹಾಗೂ ಅಹಿಂಸೆಯನ್ನೇ. ಕೆಳ ಜಾತಿ-ಮೇಲು ಜಾತಿ ಎಂದು ವಿಂಗಡಿಸುವುದು ಒಳ್ಳೆಯ ಧರ್ಮ ಅಲ್ಲವೇ ಅಲ್ಲ. ಶೋಷಣೆ ಮಾಡುವುದು ಊಳಿಗಮಾನ್ಯ ಪದ್ಧತಿಯಾಗುತ್ತದೆ ಹೊರತು, ಧರ್ಮ ಸಂಸ್ಕೃತಿ ಎನಿಸುವುದಿಲ್ಲ ಎಂದು ಬೌದ್ಧರ ಜಗದ್ಗುರು ದಲೈಲಾಮಾ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಮಾಜಿಕ ನ್ಯಾಯ ಮತ್ತು ಅಂಬೇಡ್ಕರ್ ಕುರಿತ ವಿಚಾರ ಸಂಕೀರಣದಲ್ಲಿ ಮಾತನಾಡಿದ ಅವರು, ಮನುಕುಲ ಒಂದೇ ಎಂದು ಪರಿಗಣಿಸದಿರುವುದೇ ನಮ್ಮ ಇಂದಿನ ಎಲ್ಲ ಸಮಸ್ಯೆಗಳಿಗೆ ಕಾರಣ. ಈ ಶತಮಾನದ ಒಬ್ಬರೇ ಒಬ್ಬ ಮಹಾನ್ ಮಾನವತಾವಾದಿಯೆಂದರೆ ಡಾ.ಬಿ.ಆರ್.ಅಂಬೇಡ್ಕರ್ ಎಂದರು.
ಬೌದ್ಧ ಧರ್ಮ ಭಾರತದ ಪುರಾತನ ಧರ್ಮ. ಐತಿಹಾಸಿಕವಾಗಿ ಭಾರತ ಬೌದ್ಧ ರಾಷ್ಟ್ರ. ಭಾರತದ ಪ್ರಾಚೀನ ಪರಂಪರೆಯನ್ನು ಪುನರುಜ್ಜೀವನಗೊಳಿಸಬೇಕು. ಅದು ಇಡೀ ವಿಶ್ವಕ್ಕೆ ಇಂದೂ ಪ್ರಸ್ತುತ. ಭಾರತದ ಸಂವಿಧಾನ ಅದ್ಭುತವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಸಚಿವ ಆಂಜನೇಯ ಭಾಗವಹಿಸಿದ್ದರು.