ಅಂಬೇಡ್ಕರ್ ಮತ್ತು ಅಂಬಾನಿ, ಅದಾನಿ

Update: 2017-07-26 18:23 GMT

ಭಾಗ-1

ರಾಜ್ಯ ಸರಕಾರದ ವತಿಯಿಂದ ಬೆಂಗಳೂರಿನಲ್ಲಿ ಅಂಬೇಡ್ಕರ್‌ರ ಕುರಿತಾಗಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದ ಚರ್ಚೆ ನಡೆಯುತ್ತಿದೆ. ಸಮ್ಮೇಳನ ನಡೆದ ರೀತಿಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದು ಸರಿಯೇ. ಆದರೆ, ಅಂಬೇಡ್ಕರರ ಕುರಿತು ಈ ಪ್ರಮಾಣದ ಅಂತಾರಾಷ್ಟ್ರೀಯ ಸಮ್ಮೇಳನ ನಡೆದದ್ದರಿಂದ ಒಳ್ಳೆಯದಾಗಿದೆ. ಆ ಮಟ್ಟಿಗೆ ರಾಜ್ಯ ಸರಕಾರದ ನಡೆ ಅಭಿನಂದನಾರ್ಹ. ಸಮ್ಮೇಳನದೊಳಗೂ ನಡೆದ ಚರ್ಚೆ ಹಾಗೂ ‘ಬೆಂಗಳೂರು ಘೋಷಣೆ’ ಕಾಣಿಸಿರುವಂತೆ ಶೋಷಿತ ಸಮುದಾಯಗಳ ನಿಜವಾದ ಅಭಿವೃದ್ಧಿಗೆ ನೂರು ಬಗೆಯ ಆರ್ಥಿಕ ಮತ್ತು ಸಾಮಾಜಿಕ ಕ್ರಮಗಳು ಅಗತ್ಯವಿದೆ. ಈ ಕಾರ್ಯಕ್ರಮವನ್ನು ಅದರ ಭಾಗವಾಗಿಯೂ ನೋಡಬಹುದು. 20ನೆ ಶತಮಾನದ ಭಾರತದ ಮಹಾನ್ ಚಿಂತಕರಲ್ಲಿ ಪ್ರಥಮರಾದ ಅಂಬೇಡ್ಕರರ ವಿಚಾರಗಳನ್ನು ಇಂತಹದೊಂದು ಕಾರ್ಯಕ್ರಮದ ಮುಖಾಂತರವೂ ಪ್ರತಿಷ್ಠಾಪಿಸುವ ಅಗತ್ಯವಿತ್ತು. ಅದೂ ಸಹ ಶೋಷಿತ ಸಮುದಾಯಗಳಿಗೆ ಆತ್ಮಗೌರವ ತಂದುಕೊಡುವ ಸಾಮಾಜಿಕ, ಸಾಂಸ್ಕೃತಿಕ ಕ್ರಮದ ಭಾಗವೇ ಆಗಿದೆ. ಆದರೆ, ಅದನ್ನು ನಡೆಸುವಾಗ ಆದ ಎಡವಟ್ಟುಗಳ ಕುರಿತು ಚರ್ಚೆ ನಡೆಯಬಾರದೆಂದೇನಿಲ್ಲ. ಚರ್ಚೆ ಆರೋಗ್ಯಕರವಾಗಿದ್ದರೆ ಒಳ್ಳೆಯದೆನಿಸುತ್ತದೆ.

ಇದರೊಂದಿಗೆ ಸಮ್ಮೇಳನದಲ್ಲಿ ಮಂಡನೆಯಾದ ವಿಷಯಗಳ ಸುತ್ತ ಚರ್ಚೆ ಮಾಡುವ ಅಗತ್ಯವಿದೆ. 70 ವರ್ಷಗಳಲ್ಲಿ ಶೋಷಿತ ಸಮುದಾಯಗಳ ಸಬಲೀಕರಣದ ಕುರಿತು ಚಿಂತನ ಮಂಥನಗಳು ಸಿಕ್ಕಾಪಟ್ಟೆ ನಡೆದಿವೆ. ಕೋಟಿಗಟ್ಟಲೆ ಹಣ ಬಿಡುಗಡೆ ಆಗಿದೆ. ಅದರಲ್ಲೂ ದಲಿತ ಚಳವಳಿಯು ಸಮುದಾಯದ ಹಕ್ಕಿನ ಪ್ರತಿಪಾದನೆ ಮಾಡಿದ ನಂತರ ಇವು ಇನ್ನೂ ಹೆಚ್ಚು ಹೆಚ್ಚಾಗಿಯೇ ನಡೆಯಿತು. ಇವೆಲ್ಲಾ ನಡೆದೂ 70 ವರ್ಷಗಳ ಪ್ರಜಾಪ್ರಭುತ್ವದಲ್ಲಿ ಸಾಧಿಸಿದ್ದು ಇಷ್ಟೇ ಏಕಾಗಿದೆ? ಒಟ್ಟಾರೆ ಅರ್ಥದಲ್ಲಿ ಸಮಾನತೆಯೆಂಬುದು ಇನ್ನೂ ದೂರ ದೂರಕ್ಕೇ ಸಾಗುತ್ತಿರುವ ಮರೀಚಿಕೆ ಆಗಿರುವುದು ಏತಕ್ಕೆ? ಇವೆಲ್ಲದರ ಬಗ್ಗೆ ಸಮೀಕ್ಷೆ ನಡೆಸಿದ ನಂತರ ಕೈಗೆತ್ತಿಕೊಳ್ಳಬೇಕಿರುವ ಪ್ರಶ್ನೆ, ಹಾಗಾದರೆ ಮುಂದೇನು ಎಂಬುದು. ಬಲಪಂಥೀಯ ರಾಜಕಾರಣ ಮತ್ತು ಚಿಂತನೆಗಳು ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಇವೆಲ್ಲಾ ನಡೆಯುವ ಸಾಧ್ಯತೆ ನಿಜಕ್ಕೂ ಕಡಿಮೆ. ಏಕೆಂದರೆ, ಹಕ್ಕಿನ ಪ್ರತಿಪಾದನೆ ಮಾಡುತ್ತಿರುವ ಸಮುದಾಯಗಳಲ್ಲಿನ ಮುಂಚೂಣಿ ಗುಂಪೊಂದನ್ನು ತನ್ನೊಳಗೆ ಅರಗಿಸಿಕೊಂಡುಬಿಡುವುದು ಪ್ರಬಲ ಶಕ್ತಿಗಳಿಗೆ ಯಾವಾಗಲೂ ಸುಲಭದ ದಾರಿ. ಅದಕ್ಕೆ ಬೇಕಾದ ಸೈದ್ಧಾಂತಿಕ ಸಮರ್ಥನೆಯನ್ನು ಒದಗಿಸಲೂ ಗುಂಪೊಂದು ದೊರೆಯುತ್ತದೆ. ಶೋಷಿತ ಹಿನ್ನೆಲೆಯ ಕೆಲವರು ‘ಮೇಲಕ್ಕೆ’ ಬಂದರೆ, ನಿಮಗೇಕಿಷ್ಟು ಅಸಹನೆ ಎಂಬ ಅಸ್ತ್ರವು ಪ್ರಯೋಗವಾದರೆ ಅಲ್ಲಿಗೆ ಆರೋಗ್ಯಕರ ಚರ್ಚೆಯ ದಿಕ್ಕು ತಪ್ಪಿ ಹೋಗುತ್ತದೆ.

ಇಂತಹದೊಂದು ವಿಚಾರವೂ ಸದರಿ ಸಮ್ಮೇಳನದಲ್ಲಿ ಮಂಡನೆಯಾಯಿತೆಂದು ಪತ್ರಿಕೆಯ ವರದಿಗಳು ಹೇಳುತ್ತಿವೆ. ‘ದಲಿತರಲ್ಲೂ ಅಂಬಾನಿ, ಅದಾನಿ ಬರಲಿ’ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮುಝಪ್ಫರ್ ಅಸ್ಸಾದಿ ಹೇಳಿದರೆಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಅವರ ಪ್ರಕಾರ ‘ದಲಿತ ಸಮುದಾಯಗಳಿಂದಲೂ ಅಂಬಾನಿ, ಅದಾನಿಯಂತಹ ಉದ್ಯಮಿಗಳು ಬರದಿದ್ದರೆ ಸಮಾಜದಲ್ಲಿ ಬದಲಾವಣೆ ಬರಲು ಸಾಧ್ಯವಿಲ್ಲ’.

ಈ ವಾದವೇನೂ ಹೊಸದಲ್ಲ. ಆದರೆ, ಅಂಬಾನಿ ಅದಾನಿಯಂತಹ ಉದಾಹರಣೆಗಳನ್ನು ಇದುವರೆಗೂ ಯಾರಾದರೂ ಬಳಸಿದ್ದುದನ್ನು ನೋಡಿರಲಿಲ್ಲ. ಇಂತಹ ವಾದದ ಪ್ರತಿಪಾದಕರಲ್ಲೊಬ್ಬರಾದ ಚಂದ್ರಭಾನ್ ಪ್ರಸಾದ್‌ರ ಲೇಖನಗಳಲ್ಲೂ ದಲಿತ ಬಂಡವಾಳಶಾಹಿಯ ಬೆಳವಣಿಗೆ ಆಗಬೇಕು ಎಂಬುದು ವಿಸ್ತಾರವಾಗಿ ಚರ್ಚೆಯಾಗಿದೆ. ಬಂಡವಾಳಶಾಹಿ ವ್ಯವಸ್ಥೆಯು ಇದೇ ರೀತಿ ಇನ್ನಷ್ಟು ಆಕ್ರಮಣಕಾರಿಯಾಗಿ ಮುಂದುವರಿಯುತ್ತಿದ್ದಾಗ, ಮೇಲ್ಜಾತಿಗಳ ಉದ್ದಿಮೆಪತಿಗಳು ಮಾತ್ರ ಇರಬೇಕು ಎಂದು ಪ್ರತಿಪಾದಿಸುವುದು ಸಾಧ್ಯವಿಲ್ಲ. ಆದರೆ, ಅದರಿಂದ ದಲಿತ ಸಮುದಾಯದ ವಿಮೋಚನೆ ಸಾಧ್ಯವಿಲ್ಲವೆಂಬುದನ್ನು ಹಲವಾರು ಚಿಂತಕರು ಮುಂದಿಟ್ಟಿದ್ದಾರೆ. ಆ ಪತ್ರಿಕೆಯಲ್ಲಿ ಚಂದ್ರಭಾನ್ ಪ್ರಸಾದ್ ಮತ್ತು ಆನಂದ್ ತೇಲ್‌ತುಂಬ್ಡೆಯವರ ಪರಸ್ಪರ ವಿರುದ್ಧ ಅನಿಸಿಕೆಗಳು ಜೊತೆಜೊತೆಯಲ್ಲೇ ಪ್ರಕಟವಾಗಿವೆ. ಆಗಲೂ ದಲಿತ ಸಮುದಾಯದಿಂದ ಅಂಬಾನಿ, ಅದಾನಿ ಥರದ ಉದ್ಯಮಿಗಳು ಬರಬೇಕು ಎಂದು ಹೇಳಿರುವುದನ್ನು ನೋಡಿಲ್ಲ.

ಇದೇ ಸಮ್ಮೇಳನದ ‘ಬೆಂಗಳೂರು ಘೋಷಣೆ’ಯಲ್ಲಿ ಪ್ರತಿಪಾದಿಸ ಲಾಗಿರುವ ಅಂಶಗಳಿಗಾಗಲೀ, ದಲಿತ ಸಮುದಾಯದ ಬಹುಕಾಲದ ಹಕ್ಕೊತ್ತಾಯಗಳಾದ ಭೂಮಿ, ಉದ್ಯೋಗ, ಶಿಕ್ಷಣ, ದೌರ್ಜನ್ಯ ಮುಕ್ತ ಬದುಕು, ಸಮಾನ ಅವಕಾಶ ಇತ್ಯಾದಿಗಳಿಗಾಗಲೀ ಅಡ್ಡಿಯಾಗುತ್ತಿರುವುದು ಎಲ್ಲಿಂದ? ದೇಶವನ್ನು ತನ್ನ ಕಪಿಮುಷ್ಟಿಯೊಳಗಿಟ್ಟುಕೊಂಡಿರುವುದು ಬ್ರಾಹ್ಮಣಶಾಹಿ ಕಾರ್ಪೊರೇಟ್ ವ್ಯವಸ್ಥೆ ಎಂಬುದರಲ್ಲಿ ಸಂದೇಹವಿಲ್ಲ.

Writer - ಎಚ್.ವಿ.ವಾಸು

contributor

Editor - ಎಚ್.ವಿ.ವಾಸು

contributor

Similar News