ಮುಸ್ಲಿಮರ ಒಬಿಸಿ ಮೀಸಲಾತಿ ಮತ್ತು ಮೋದಿಯವರ ಕೋಮುದ್ವೇಷದ ಸುಳ್ಳುಗಳು

ಸ್ವಾತಂತ್ರ್ಯ ಪೂರ್ವದಲ್ಲಿ 1918ರ ಮಿಲ್ಲರ್ ಸಮಿತಿಯಿಂದ ಮೊದಲುಗೊಂಡು, 1960ರ ನಾಗನಗೌಡ ಸಮಿತಿ, 1977ರ ದೇವರಾಜ ಅರಸು ಸರಕಾರದ ಮೀಸಲಾತಿ ಸೂತ್ರ, 1986ರ ವೆಂಕಟಸ್ವಾಮಿ ಆಯೋಗದ ವರದಿ ಮತ್ತು 1990ರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕದ ಮೂರನೇ ಹಿಂದುಳಿದ ಆಯೋಗದ ವರದಿಗಳೆಲ್ಲವೂ ಅತ್ಯಂತ ವೈಜ್ಞಾನಿಕ ಅಧ್ಯಯನ ಹಾಗೂ ದತ್ತಾಂಶಗಳನ್ನು ಆಧರಿಸಿಯೇ ಮುಸ್ಲಿಮರಲ್ಲಿ ಅತಿ ಹಿಂದುಳಿದವರನ್ನು ಅತಿ ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದ್ದಲ್ಲದೆ, ಇಡೀ ಮುಸ್ಲಿಮ್ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿ ಪರಿಗಣಿಸಿ ಇಡೀ ಸಮುದಾಯಕ್ಕೆ ಒಬಿಸಿ ಮೀಸಲಾತಿಯನ್ನು ಕಲ್ಪಿಸಿವೆ.

Update: 2024-05-01 05:17 GMT
Editor : Thouheed | Byline : ಶಿವಸುಂದರ್,

ಭಾಗ- 1

ಕಳೆದ ಹತ್ತು ವರ್ಷಗಳಲ್ಲಿ ಪ್ರಥಮ ಬಾರಿಗೆ ದೇಶವು ಉನ್ಮಾದದ ಅಲೆಯಿಲ್ಲದ ಚುನಾವಣೆಯನ್ನು ಎದುರಿಸುತ್ತಿದೆ. ಹೀಗಾಗಿ ಉನ್ಮಾದದ ಹೆಸರಿನಲ್ಲಿ ಮಾತ್ರ ಅರಳುತ್ತಿದ್ದ ಕಮಲಪಕ್ಷಕ್ಕೆ ತಾನು ಎಣಿಸದ ರೀತಿ ಫಲಿತಾಂಶ ಬರದಿರಬಹುದೆಂಬ ಗಾಬರಿ ಹೆಚ್ಚಾಗುತ್ತಿದೆ. ಹಾಗೆಯೇ ಮೊದಲೆರಡು ಸುತ್ತುಗಳಲ್ಲಿ ನಾಲ್ಕು ರಾಜ್ಯಗಳನ್ನು ಹೊರತುಪಡಿಸಿದರೆ ಈವರೆಗೆ ಚುನಾವಣೆ ನಡೆದಿರುವ 13 ರಾಜ್ಯಗಳಲ್ಲಿ ಮತದಾನಕ್ಕೆ ಅಷ್ಟು ಉತ್ಸಾಹವು ಕಂಡುಬರದಿರುವುದು ಅದರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿಯೇ ಮೊದಲ ಸುತ್ತಿನ ಚುನಾವಣೆ ಮುಗಿದ ಮರುದಿನದಿಂದಲೇ ತನ್ನ ಹಳೆಯ ಕೋಮುವಾದೀಕರಣದ ತಂತ್ರವನ್ನು ಪ್ರಧಾನವಾಗಿ ಅಶ್ರಯಿಸುತ್ತಿದೆ ಮತ್ತು ಸಮಾಜವನ್ನು ಹೀಗೆ ಕೋಮುವಾದಿ ಸುಳ್ಳುಗಳ ಮೂಲಕ ಧ್ರುವೀಕರಿಸುವ ಹೀನಾಯ ಪ್ರಚಾರದ ನಾಯಕತ್ವವನ್ನು ಪ್ರಧಾನಿ ಮೋದಿಯವರೇ ವಹಿಸಿಕೊಂಡಿದ್ದಾರೆ.

ಅದಕ್ಕೆ ಅವರು ಪ್ರಧಾನವಾಗಿ ಬಳಸುತ್ತಿರುವುದು:

1) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಬಿಸಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡುತ್ತದೆ.

2) ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರಧಾನವಾಗಿ ಕರ್ನಾಟಕದಲ್ಲಿ ಮುಸ್ಲಿಮರಿಗೆ ಧರ್ಮಾಧಾರಿತವಾಗಿ ಮೀಸಲಾತಿ ನೀಡಲಾಗುತ್ತಿದೆ. ಅದು ಅಸಾಂವಿಧಾನಿಕ..ಇತ್ಯಾದಿ ..

ಭಾರತದ ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅವುಗಳ ಜನಸಂಖ್ಯಾ ಅನುಪಾತಕ್ಕೆ ಸರಿಯಾದ ಉದ್ಯೋಗ, ಶಿಕ್ಷಣ ಮತ್ತು ರಾಜಕೀಯದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಜನಸಂಖ್ಯೆ ಅನುಪಾತದ ಮಾನದಂಡವನ್ನು ಹೊರತುಪಡಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗಿಲ್ಲ. ಹೀಗಾಗಿ ದಲಿತರ ಮೀಸಲಾತಿಯನ್ನು ಕಿತ್ತು ಇತರ ಸಮುದಾಯಗಳಿಗೆ ಕೊಡುವ ಪ್ರಮೇಯವೇ ಇಲ್ಲ. ಇದು ಮೋದಿ ಕಾರ್ಖಾನೆಯಲ್ಲಿ ತಯಾರಾದ ಹಸಿ ಸುಳ್ಳು ಅಷ್ಟೆ.

ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲದ ಆದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಇತರ ಹಿಂದುಳಿದ ವರ್ಗಗಳನ್ನು - Other Backward Classes- OBC- ಪತ್ತೆ ಹಚ್ಚಿ ಅವರಿಗೆ ಮೀಸಲಾತಿಯ ಮೂಲಕ ಮೇಲ್ಚಲನೆ ಒದಗಿಸುವ ಅವಕಾಶ ಮತ್ತು ಕರ್ತವ್ಯವನ್ನು ಸಂವಿಧಾನವು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ವಹಿಸಿದೆ.

ಇದರ ಭಾಗವಾಗಿ ಕೇಂದ್ರದಲ್ಲಿ 1952ರಲ್ಲಿ ಕಾಕಾ ಕಾಲೇಕರ್ ಕಮಿಷನ್‌ಮತ್ತು 1977ರಲ್ಲಿ ಮಂಡಲ್ ಕಮಿಷನ್ ಸ್ಥಾಪನೆಯಾಗಿತ್ತು. ಇನ್ನು ರಾಜ್ಯಗಳಲ್ಲಿ ಆಯಾ ರಾಜ್ಯ ಸರಕಾರಗಳು ತಮ್ಮ ಪ್ರದೇಶದಲ್ಲಿ ಹಿಂದುಳಿದ ವರ್ಗಗಳನ್ನು ಪತ್ತೆ ಹಚ್ಚುವುದಕ್ಕೆ ಕಾಲಾನುಸಾರವಾಗಿ ಆಯೋಗಗಳನ್ನು ಸ್ಥಾಪಿಸಿ, ಅಧ್ಯಯನ ನಡೆಸಿ ಗುರುತಿಸಿ ಒಬಿಸಿ ಮೀಸಲಾತಿಯನ್ನು ಕೊಡುತ್ತಾ ಬಂದಿವೆ.

ಹಿಂದುಳಿದ ವರ್ಗಗಳನ್ನು ಪತ್ತೆ ಹಚ್ಚುವುದಕ್ಕೆ ಪ್ರಧಾನವಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಯ ಪ್ರಮಾಣಾತ್ಮಕ ಮಾನದಂಡಗಳನ್ನು ಅನುಸರಿಸುತ್ತಾ ಬಂದಿವೆ. ಯಾವ ಕಮಿಷನ್‌ಗಳೂ ಧರ್ಮವನ್ನು ಮಾನದಂಡವಾಗಿ ಎಂದಿಗೂ ಅನುಸರಿಸಿಲ್ಲ. ಒಂದು ಧರ್ಮಕ್ಕೆ ಸೇರಿದ್ದರೂ, ಜಾತಿಗೆ ಸೇರಿದ್ದರೂ ಅವರುಗಳು ಒಂದು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗುತ್ತಾರೆ ಎಂಬುದೊಂದೇ ಒಬಿಸಿ ಮೀಸಲಾತಿ ನೀಡಲು ಅನುಸರಿಸುವ ಮಾನದಂಡ.

ಹೀಗಾಗಿ ಹಲವಾರು ರಾಜ್ಯಗಳು ಇದೇ ಆಧಾರದಲ್ಲಿ ಮತ್ತು ಕೇಂದ್ರವು ಕೂಡ ಕೆಲವೊಮ್ಮೆ ಮುಸ್ಲಿಮರೊಳಗಿನ ಕೆಲವು ಜಾತಿಗಳಿಗೆ ಮತ್ತು ಒಂದೊಮ್ಮೆ ಆಯಾ ರಾಜ್ಯಗಳ ಪ್ರಬಲ ಕೋಮುಗಳಿಗೆ ಹೋಲಿಸಿದಲ್ಲಿ ಇಡೀ ಸಮುದಾಯವೇ ಹಿಂದುಳಿದಿದೆ ಎಂದು ವೈಜ್ಞಾನಿಕ ಅಧ್ಯಯನದ ಮೂಲಕ ಕಂಡು ಬಂದರೆ ಇಡೀ ಸಮುದಾಯವನ್ನು ಹಿಂದುಳಿದ ವರ್ಗ ವಾಗಿ-ಧಾರ್ಮಿಕ ಸಮುದಾಯವಾಗಿಯಲ್ಲ-ಒಬಿಸಿ ಮೀಸಲಾತಿ ನೀಡಿವೆ.

ಹೀಗಾಗಿ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲಾಗುತ್ತಿದೆ ಎಂಬುದು ಮೋದಿಯವರು ಹೇಳುತ್ತಿರುವ ಅಪ್ಪಟ ಸುಳ್ಳು.

ಇದು ಕರ್ನಾಟಕದ ಸಂದರ್ಭದಲ್ಲಿ ಇನ್ನೂ ಸ್ಪಷ್ಟ. 2023ರ ಚುನಾವಣೆಯಲ್ಲಿ ಬೊಮ್ಮಾಯಿ ಸರಕಾರ ಇದೇ ಕೋಮುವಾದ ಧೋರಣೆಯಿಂದ ಮುಸ್ಲಿಮರಿಗೆ ನೀಡುತ್ತಿದ್ದ ಶೇ.4 ಒಬಿಸಿ ಮೀಸಲಾತಿಯನ್ನು ರದ್ದು ಮಾಡಿದ್ದಾಗಲೂ ಈ ವಿವರಗಳನ್ನು ಮತ್ತು ಬಿಜೆಪಿಯ ಕೋಮುವಾದವನ್ನು ಸ್ಪಷ್ಟವಾಗಿ ಬಯಲು ಮಾಡಲಾಗಿತ್ತು. ವಾಸ್ತವವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಜಸ್ಟೀಸ್ ಬಿ.ವಿ. ನಾಗರತ್ನಾ ಅವರೂ ಮುಸ್ಲಿಮರಿಗೆ ಕರ್ನಾಟಕದಲ್ಲಿ ನೀಡುತ್ತಿರುವ ಮೀಸಲಾತಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯೇ ವಿನಾ ಧರ್ಮಾಧಾರಿತ ಮೀಸಲಾತಿಯಲ್ಲ ಎಂದು ಮೌಖಿಕವಾಗಿ ಸ್ಪಷ್ಟಪಡಿಸಿ ಮುಸ್ಲಿಮರ ಒಬಿಸಿ ಮೀಸಲಾತಿಯನ್ನು ರದ್ದು ಪಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ.

ವಿಚಿತ್ರವೆಂದರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮುಂದಿಟ್ಟ ಮೀಸಲಾತಿ ಪಟ್ಟಿಯಲ್ಲೂ 2-ಸಿ ಮತ್ತು 2-ಡಿ ಪ್ರವರ್ಗಗಳಲ್ಲಿ ಇಡೀ ಜೈನ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲಾತಿ ಒದಗಿಸಲಾಗಿತ್ತು. ಅದನ್ನು ಮಾತ್ರ ಧರ್ಮಾಧಾರಿತ ಮೀಸಲಾತಿ ಎಂದು ಪರಿಗಣಿಸದಿರುವುದರ ಹಿಂದಿನ ಕೋಮುವಾದಿ ದುರುದ್ದೇಶಗಳು ಸ್ಪಷ್ಟ.

ಈಗ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮತ್ತೊಮ್ಮೆ ಸಾಕ್ಷಾತ್ ಪ್ರಧಾನಿ ಮೋದಿಯವರೇ ಮುಸ್ಲಿಮ್ ಮೀಸಲಾತಿ ವಿಷಯದಲ್ಲಿ ಕೋಮುವಾದ ಮಾಡುತ್ತಾ ಕರ್ನಾಟಕದ ಉದಾಹರಣೆಯನ್ನು ದುರುದ್ದೇಶಪೂರ್ವಕವಾಗಿ ತಪ್ಪಾಗಿ ಉಲ್ಲೇಖಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಸ್ಲಿಮರಿಗೆ ನೀಡುತ್ತಿರುವ ಒಬಿಸಿ ಮೀಸಲಾತಿಯ ಸಾಂವಿಧಾನಿಕತೆಯನ್ನು ಪ್ರಚುರ ಪಡಿಸುವ ಅಗತ್ಯ ಉಂಟಾಗಿದೆ.

ಮುಸ್ಲಿಮರು ಹಿಂದುಳಿದ ವರ್ಗಗಳ ಭಾಗ

-ಸಾಂವಿಧಾನಿಕ ಕೋರ್ಟ್‌ಗಳ ಅದೇಶ

ಮೊದಲನೆಯದಾಗಿ ಮುಸ್ಲಿಮರನ್ನು ಇಡೀ ಸಮುದಾಯವಾಗಿ ಹಿಂದುಳಿದಿದೆ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು ಹಾಗೂ ಬಿಹಾರಗಳಲ್ಲಿ ಕೂಡ ಈಗಲೂ ಇತರ ಹಿಂದುಳಿದ ವರ್ಗಗಳ ಭಾಗವಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ಈಗಲೂ 20 ರಾಜ್ಯಗಳ ವಿವಿಧ ಮುಸ್ಲಿಮ್ ಸಮುದಾಯಗಳು ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ. 2013ರಲ್ಲಿ ಕರ್ನಾಟಕದ ಬಿಜೆಪಿಯ ಸದಾನಂದ ಗೌಡರ ಸರಕಾರವು ಮುಸ್ಲಿಮರ ಒಂಭತ್ತು ಉಪ ಪಂಗಡಗಳನ್ನು ಬಿಟ್ಟು ಉಳಿದೆಲ್ಲಾ ಮುಸ್ಲಿಮರನ್ನು ಕೇಂದ್ರದ ಒಬಿಸಿ ಮೀಸಲಾತಿ ಒದಗಿಸುವಾಗ ಹಿಂದುಳಿದ ವರ್ಗಗಳೆಂದೇ ಪರಿಗಣಿಸಬೇಕೆಂದು ಆದೇಶಿಸಿತ್ತು.

ಏಕೆಂದರೆ ಸಂವಿಧಾನದ ಆರ್ಟಿಕಲ್ 15(4) ಮತ್ತು 16(4)ರ ಪ್ರಕಾರ ಪ್ರಭುತ್ವವು ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಿ ಅವರ ಏಳಿಗೆಗೆ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಕಾಲಕಾಲಕ್ಕೆ ಸರಕಾರಗಳು ಸಮಾಜದಲ್ಲಿ ಈ ಬಗೆಯ ಹಿಂದುಳಿದಿರುವಿಕೆಗೆ ಬಲಿಯಾಗಿರುವ ಯಾವುದೇ ವರ್ಗಗಳು, ಅವರು ಯಾವುದೇ ಧರ್ಮ, ಸಮುದಾಯ, ಜಾತಿಗಳಿಗೆ ಸೇರಿದ್ದರೂ, ಪತ್ತೆ ಹಚ್ಚಿ ಅವರಿಗೆ ಮೀಸಲಾತಿ ಕಲ್ಪಿಸಬೇಕು. ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಯಾವುದೇ ಸರಕಾರ ಈ ಕಾರಣಗಳಿಗಾಗಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲೇ ಬೇಕು. ಅದಕ್ಕೆ ಧರ್ಮ ದ ಅಡ್ಡಗೋಡೆಯಿಲ್ಲ.

ಇದನ್ನು ಕರ್ನಾಟಕದ ಹೈಕೋರ್ಟಿನ ವಿಭಾಗೀಯ ಪೀಠ 1979 ರ ಎಪ್ರಿಲ್ 9ರಂದು WP 4371/ 77 ಪ್ರಕರಣದಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳಿದೆ:

".. So far as the Muslims are concerned, the commission was unwise in excluding them from the list of Backward Classes solely on the ground that they belong to a religious minority. The Commission has however found that the Muslims are socially and educationally backward and also do not have adequate representation in the service. The fact that they are religious minority is no ground to exclude them from the list of backward classes. The government in our opinion was perfectly justified in listing the Muslims in the list of Backward classes”

(ಮುಸ್ಲಿಮರ ಕುರಿತಾಗಿ ಹೇಳಬೇಕೆಂದರೆ ಮುಸ್ಲಿಮರು ಧಾರ್ಮಿಕ ಅಲ್ಪ ಸಂಖ್ಯಾತರಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ಹಿಂದುಳಿದ ವರ್ಗಗಳಿಂದ ಆಯೋಗವು ಹೊರಗಿಟ್ಟಿದ್ದು ಸಮಂಜಸವಾದ ಕ್ರಮವಲ್ಲ. ಅದೇನೇ ಇದ್ದರೂ ಆ ಆಯೋಗವು ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರಕಾರಿ ಸೇವೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎಂಬುದನ್ನು ಗುರುತಿಸಿದೆ. ಅವರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಕಾರಣವೇ ಅಲ್ಲ. ಆದ್ದರಿಂದ ಸರಕಾರವು ಮುಸ್ಲಿಮರನ್ನು ಮತ್ತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಸರಿಯಾದುದನ್ನೇ ಮಾಡಿದೆ ಎಂದು ನಾವು ಪರಿಗಣಿಸುತ್ತೇವೆ.)

ಹಾಗೆಯೇ 1992ರಲ್ಲಿ ಮಂಡಲ್ ವರದಿಯ ಸಾಂವಿಧಾನಿಕತೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಒಂಭತ್ತು ನ್ಯಾಯಾಧೀಶರ ಪೀಠವು ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ನಿಸ್ಸಂದಿಗ್ಧವಾಗಿ ಹೀಗೆ ಸ್ಪಷ್ಟಪಡಿಸಿದೆ:

“This inadequate representation is not confined to any specific section of the people, but all those who fall under the group of social backwardness whether they are Shudras of Hindu community or similarly situated other backward classes of people in other communities, namely, Muslims, Sikhs, Christians etc.”

(https://indiankanoon.org/doc/1363234/)

(ಸರಕಾರಿ ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವು ಯಾವುದೋ ಒಂದು ಜನವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಎಲ್ಲರಿಗೂ ಅದು ಸಮಾನವಾಗಿ ಅನ್ವಯವಾಗುತ್ತದೆ. ಅವರು ಹಿಂದೂಗಳೊಳಗಿನ ಶೂದ್ರ ಸಮುದಾಯಕ್ಕೆ ಸೇರಿದವರಾಗಿರಬಹುದು ಅಥವಾ ಅದೇ ರೀತಿ ಹಿಂದುಳಿದಿರುವಿಕೆಗೆ ಗುರಿಯಾಗಿರುವ ಮುಸ್ಲಿಮ್, ಸಿಖ್ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರಾಗಿದ್ದರೂ ಸಮಾನವಾಗಿ ಅನ್ವಯವಾಗುತ್ತದೆ)

ಹೀಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದರೆ ಅವರಿಗೆ ಒಬಿಸಿ ಮೀಸಲಾತಿ ನೀಡಬೇಕಾದ್ದು ಸರಕಾರದ ಸಾಂವಿಧಾನಿಕ ಕರ್ತವ್ಯ. ಅದನ್ನು ಧರ್ಮದ ಆಧಾರದಲ್ಲಿ ನಿರಾಕರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ. ಹಾಗೆ ನೋಡಿದರೆ ಬೊಮ್ಮಾಯಿ ಸರಕಾರ ಹೊಸ ಮೀಸಲಾತಿ ಸೂತ್ರದಲ್ಲೂ 2-ಡಿ ಪ್ರವರ್ಗದಡಿ ಕ್ರಿಶ್ಚಿಯನ್ನರಿಗೂ, ದಿಗಂಬರ ಜೈನರಿಗೂ, 2-ಎ ಪ್ರವರ್ಗದಡಿಯಲ್ಲಿ ಬೌದ್ಧರಿಗೂ ಮೀಸಲಾತಿಯನ್ನೂ ಮುಂದುವರಿಸಿದೆ. ಹೀಗಾಗಿ ಬೊಮ್ಮಾಯಿ ಸರಕಾರದ ಮೀಸಲಾತಿ ಸೂತ್ರ ಅಸಾಂವಿಧಾನಿಕ ಮಾತ್ರವಲ್ಲ ದ್ವೇಷಪೂರಿತ ಕೋಮುವಾದಿ ಕ್ರಮವೂ ಆಗಿದೆ.

ಹಿಂದುಳಿದ ಆಯೋಗಗಳ ಅಧ್ಯಯನಗಳು ಮತ್ತು ಮುಸ್ಲಿಮರು

ಸ್ವಾತಂತ್ರ್ಯ ಪೂರ್ವದಲ್ಲಿ 1918ರ ಮಿಲ್ಲರ್ ಸಮಿತಿಯಿಂದ ಮೊದಲುಗೊಂಡು, 1960ರ ನಾಗನಗೌಡ ಸಮಿತಿ, 1977ರ ದೇವರಾಜ ಅರಸು ಸರಕಾರದ ಮೀಸಲಾತಿ ಸೂತ್ರ, 1986ರ ವೆಂಕಟಸ್ವಾಮಿ ಆಯೋಗದ ವರದಿ ಮತ್ತು 1990ರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕದ ಮೂರನೇ ಹಿಂದುಳಿದ ಆಯೋಗದ ವರದಿಗಳೆಲ್ಲವೂ ಅತ್ಯಂತ ವೈಜ್ಞಾನಿಕ ಅಧ್ಯಯನ ಹಾಗೂ ದತ್ತಾಂಶಗಳನ್ನು ಆಧರಿಸಿಯೇ ಮುಸ್ಲಿಮರಲ್ಲಿ ಅತಿ ಹಿಂದುಳಿದವರನ್ನು ಅತಿ ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದ್ದಲ್ಲದೆ, ಇಡೀ ಮುಸ್ಲಿಮ್ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿ ಪರಿಗಣಿಸಿ ಇಡೀ ಸಮುದಾಯಕ್ಕೆ ಒಬಿಸಿ ಮೀಸಲಾತಿಯನ್ನು ಕಲ್ಪಿಸಿವೆ.

ಬೊಮ್ಮಾಯಿ ಸರಕಾರ ರದ್ದು ಮಾಡಿದ ಮುಸ್ಲಿಮರಿಗೆ ನೀಡಲಾಗುತ್ತಿದ್ದ 2-ಬಿ ಪ್ರವರ್ಗದ ಮೀಸಲಾತಿಯು 1994ರ ಸೆಪ್ಟಂಬರ್‌17ರಂದು ಆಗಿನ ವೀರಪ್ಪ ಮೊಯ್ಲಿ ಸರಕಾರ ಜಾರಿ ಮಾಡಿದ ಹೊಸ ಒಬಿಸಿ ಮೀಸಲಾತಿ ಸೂತ್ರದ ಭಾಗವಾಗಿ ಜಾರಿಯಾಯಿತು.

ವಿಪರ್ಯಾಸವೆಂದರೆ ಮೀಸಲಾತಿಯನ್ನು ವೀರಪ್ಪ ಮೊಯ್ಲಿ ಸರಕಾರ ನೀಡಿ ದ್ದರೂ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ತಾನೇ ಎಂದು ಕೊಚ್ಚಿಕೊಳ್ಳುತ್ತಿದ್ದ ದೇವೇಗೌಡರು ಈಗ ಮೋದಿ ಮುಸ್ಲಿಮ್ ಮೀಸಲಾತಿಯನ್ನು ಕಿತ್ತುಹಾಕುವ ಮಾತಾಡುತ್ತಿದ್ದರೂ ಮೌನ ಬೆಂಬಲ ನೀಡುತ್ತಿದ್ದಾರೆ.

ಈ ಸೂತ್ರವನ್ನು ಆದೇಶವಾಗಿ ಜಾರಿ ಮಾಡಿದ ಸರಕಾರಿ ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಿರುವಂತೆ ಈ ಹೊಸ ಮೀಸಲಾತಿ ಸೂತ್ರವನ್ನು ಸರಕಾರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕ ಸರಕಾರದ ಮೂರನೇ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸನ್ನು ಗಮನದಲ್ಲಿಟ್ಟುಕೊಂಡು ರೂಪಿಸಿತ್ತು.

ಆದ್ದರಿಂದ ಮುಸ್ಲಿಮರಿಗೆ ನೀಡಲಾಗುತ್ತಿದ್ದ 2-ಬಿ ಮೀಸಲಾತಿಯ ಹಿಂದೆ ಯಾವುದೇ ಅಧ್ಯಯನವೂ ಇರಲಿಲ್ಲ ಮತ್ತು ಯಾವುದೇ ಶಿಫಾರಸೂ ಇರಲಿಲ್ಲ ಎಂಬ ಸರಕಾರದ ಹೇಳಿಕೆ ಅತ್ಯಂತ ಹಸಿ ಹಸಿ ಸುಳ್ಳು. ಇದನ್ನು ಚಿನ್ನಪ್ಪ ರೆಡ್ಡಿ ಆಯೋಗದ ವರದಿಯ ಅಧ್ಯಯನ ಮತ್ತು ಶಿಫಾರಸುಗಳನ್ನು ಗಮನಿಸಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ನ್ಯಾ. ಚಿನ್ನಪ್ಪರೆಡ್ಡಿ ವರದಿ

-ಮುಸ್ಲಿಮರು ಸಾಮಾಜಿಕವಾಗಿ ಹಿಂದುಳಿದವರು

ಕರ್ನಾಟಕ ಸರಕಾರವು 1988ರಲ್ಲಿ ಮೂರನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನ್ಯಾ. ಚಿನ್ನಪ್ಪರೆಡ್ಡಿಯವರನ್ನು ನೇಮಿಸಿ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಗೆ ಅರ್ಹವಾಗಿರುವ ವರ್ಗಗಳನ್ನು ಗುರುತಿಸಿ ಅವರಿಗೆ ಯಾವ ಬಗೆಯ ಮೀಸಲಾತಿಯನ್ನು ಕಲ್ಪಿಸಬೇಕೆಂದು ಶಿಫಾರಸು ಮಾಡಲು ಕೋರಿಕೊಂಡಿತ್ತು.

ನ್ಯಾ. ಚಿನ್ನಪ್ಪರೆಡ್ಡಿಯವರು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದು ವಸಂತ್ ಕುಮಾರ್ ವರ್ಸಸ್ ಕರ್ನಾಟಕ ಸರಕಾರ ಪ್ರಕರಣದಲ್ಲಿ ದೇವರಾಜ ಅರಸು ಸರಕಾರದ ಮೀಸಲಾತಿ ಸೂತ್ರವನ್ನು ಪರಿಶೀಲಿಸಿದ ಸಾಂವಿಧಾನಿಕ ಪೀಠದಲ್ಲಿ ಒಬ್ಬರಾಗಿದ್ದರು. ಹಾಗೆಯೇ ದೇಶದಲ್ಲಿ ಹಿಂದುಳಿದ ವರ್ಗಗಳನ್ನು ಪತ್ತೆ ಹಚ್ಚುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಒದಗಿಸಿದವರಲ್ಲಿ ಒಬ್ಬರಾಗಿದ್ದರು.

1988ರಲ್ಲಿ ತನ್ನ ಅಧ್ಯಯನವನ್ನು ಪ್ರಾರಂಭಿಸಿದ ನ್ಯಾ. ಚಿನ್ನಪ್ಪರೆಡ್ಡಿ ಆಯೋಗವು ಎರಡು ವರ್ಷಗಳ ಕಾಲ ವಿಸ್ತೃತವಾದ ಅಂಕಿಅಂಶಗಳನ್ನು ಸಂಗ್ರಹಿಸಿತು. 543 ಹಳ್ಳಿಗಳಲ್ಲಿ ಪ್ರತ್ಯಕ್ಷ ಸರ್ವೇ ಅಧ್ಯಯನ ನಡೆಸಿತು ಹಾಗೂ ಜಾತಿವಾರು ಜನಸಂಖ್ಯೆ, ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರ ಮತ್ತು ಪಾಸಾದವರ ಜಾತಿವಾರು, ಸಮುದಾಯವಾರು ಮಾಹಿತಿ, ಉನ್ನತ ಶಿಕ್ಷಣಕ್ಕೆ ಹೋದವರ ಜಾತಿ-ಸಮುದಾಯವಾರು ಮಾಹಿತಿ, ಆದಾಯ ಮಾಹಿತಿ, ಸರಕಾರಿ ಸೇವೆಗಳಲ್ಲಿ ಜಾತಿವಾರು-ಸಮುದಾಯವಾರು ಪ್ರಾತಿನಿಧ್ಯ ಇತ್ಯಾದಿಗಳ ಬಗ್ಗೆ ಕೂಲಂಕಷ ಮಾಹಿತಿಯನ್ನು ಒಟ್ಟು ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್,

contributor

Similar News