ಆನ್‌ಲೈನ್‌ನಿಂದ ಜಾನಪದ ಕಲಾವಿದರಿಗೆ ಅನನುಕೂಲ: ಐ.ಎಂ.ವಿಠ್ಠಲಮೂರ್ತಿ

Update: 2017-08-12 13:17 GMT

ಬೆಂಗಳೂರು, ಆ.12: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿನ ಸೇವೆ ಸವಲತ್ತುಗಳನ್ನು ಪಡೆಯಲು ಹೊಸದಾಗಿ ಅಳವಡಿಸಿಕೊಂಡಿರುವ ಆನ್‌ಲೈನ್ ವ್ಯವಸ್ಥೆ ಜಾನಪದ ಕಲಾವಿದರಿಗೆ ಅನುಕೂಲಕರವಾಗಿಲ್ಲ ಎಂದು ರಾಜ್ಯ ಸರಕಾರದ ನಿವೃತ್ತ ಕಾರ್ಯದರ್ಶಿ ಐ.ಎಂ.ವಿಠ್ಠಲಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಲಲಿತಾ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನ್ನೊಂದು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಜಾನಪದ ಕಲೆಗಳ ಮೇಲೆ ಡಿಜಟಲೀಕರಣದ ಹೇರಿಕೆ ಸಲ್ಲ. ಈ ಕಲಾ ಪ್ರಕಾರಗಳಲ್ಲಿ ಆನ್‌ಲೈನ್ ವ್ಯವಸ್ಥೆಗೆ ಹೊಂದುಕೊಳ್ಳುವಂತಹ ಸುಶಿಕ್ಷಿತ ಕಲಾವಿದರು ಇಲ್ಲ. ಸೇವೆ, ಸವಲತ್ತುಗಳನ್ನು ಬಯಸಿ ಆನ್‌ಲೈನ್‌ಗೆ ಹೊಂದಿಕೊಳ್ಳಲು ಜಾನಪದ ಕಲಾವಿದರಿಗೆ ಕಷ್ಟಕರ ಎಂದು ಹೇಳಿದರು.

ಕಲೆಗಳು ಆನ್‌ಲೈನ್‌ನಲ್ಲಿ ಸಿಗುವುದಾದರೆ ಕಲಾವಿದರ ಅಗತ್ಯತೆ ಇರುವುದಿಲ್ಲ. ಇಲಾಖೆ ಮತ್ತು ಜಾನಪದ ಕಲಾವಿದರ ನಡುವೆ ಸಂಪರ್ಕವು ಕಡಿತಗೊಳ್ಳಲಿದೆ. ಇದನ್ನು ಮನಗಂಡು ಇಲಾಖೆಯಲ್ಲಿ ಆನ್‌ಲೈನ್ ವ್ಯವಸ್ಥೆಯನ್ನು ನಿಲ್ಲಿಸಬೇಕು ಎಂದು ಹೇಳಿದರು.
ಇನ್ನು ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ದಿನಗಳನ್ನು ಮೆಲುಕು ಹಾಕಿದ ವಿಠ್ಠಲಮೂರ್ತಿ, ಆರಂಭದ ದಿನಗಳಲ್ಲಿ ಏನು ಕೆಲಸಕ್ಕೆ ಬಾರದ ಇಲಾಖೆ ಎಂದೇ ಹೆಸರುಪಡೆದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ಕಲಾವಿದರ ಗೌರವ ಸ್ಥಳವಾಗಿ ಗುರುತಿಸಿಕೊಂಡಿದೆ. 26 ಕೋಟಿಯಷ್ಟು ಇದ್ದ ವಾರ್ಷಿಕ ಅನುದಾನ ಈಗ 350ಕೋಟಿಗೆ ಹೆಚ್ಚಾಗಿದೆ. ಶಿಷ್ಯ ವೇತನ, ಪ್ರಶಸ್ತಿಗಳ ಮೊತ್ತವು ಹೆಚ್ಚಾಗಿದೆ ಎಂದು ಹೇಳಿದರು.

 ಹಿರಿಯ ಕಲಾವಿದ ಎಸ್.ಜಿ.ವಾಸುದೇವ್ ಮಾತನಾಡಿ, ಕಲಾಗ್ರಾಮದಲ್ಲಿ ನಿರ್ಮಾಣವಾಗಿರುವ ಆರ್ಟ್ ಸ್ಟುಡಿಯೊ ಮಾದರಿಯಲ್ಲಿ ದೃಶ್ಯಕಲಾವಿದರ ಕಲಾ ಅನಾವರಣಕ್ಕೆ ವೇದಿಕೆಯೊಂದನ್ನು ತ್ವರಿತವಾಗಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಇಲಾಖೆಯ ನಿರ್ದೇಶಕ ವಿಶುಕುಮಾರ್, ದೃಶ್ಯ ಕಲೆಗಾಗಿ ಕಲಾಗ್ರಾಮದಲ್ಲಿ ದೃಶ್ಯಕಣ ಎಂಬ ದೃಶ್ಯಕಲಾವಿದರ ಸಂಕೀರ್ಣಕ್ಕೆ ಶಿಲಾನ್ಯಾಸ ನೇರವೇರಿಸಲಾಗಿದೆ. ಈ ಸಂಕೀರ್ಣದ ನಿರ್ಮಾಣದ ಕಾರ್ಯ ತ್ವರಿತಗತಿಯಲ್ಲಿ ಸಾಗುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.

ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಮಾತನಾಡಿ, ಅಕಾಡೆಮಿಯ ಅಧ್ಯಕ್ಷ ಸ್ಥಾನದ ಕೊನೆಯ ಕಾರ್ಯಕ್ರಮ ಇದು. ಕಳೆದ ಮೂರುವರೆ ವರ್ಷಗಳ ಅವದಿಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಅಕಾಡೆಮಿಯು ಕೊನೆಯ ದಿನವರೆಗೂ ಹೊಸ ಹೊಸ ಅನುಭವ ಕೊಟ್ಟಿದೆ. ಅಕಾಡೆಮಿಗೆ ಅರ್ಜಿ ಹಾಕಿಕೊಂಡು ಬಂದವನು ನಾನಲ್ಲ. ಆದರೆ ಕಡಿಮೆ ವಯಸ್ಸಿನಲ್ಲಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‌ಗೆ ಮೊರೆಹೋದರು. ನಂತರ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ನನಗಿಷ್ಟವಿಲ್ಲ, ಇಷ್ಟ ಇದ್ದವರಿಗೆ ನೀಡಿ ಎಂದು ಸಚಿವರಿಗೆ ಮನವರಿಕೆ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ ಎಂದರು.

ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಮೂರುವರೆ ವರ್ಷದಲ್ಲಿ ರಾಜ್ಯಾದ್ಯಂತ ಸುತ್ತಾಡಿ ಇಡಿ ದೃಶ್ಯ ಕಲಾವಿದರನ್ನು ಒಂದೇ ವೇದಿಕೆಯಡಿ ಸೇರಿಸಿದ್ದೇನೆ. ಕಲಾವಿದರನ್ನು ಸಮಾಜ ಯಾವ ರೀತಿ ಸ್ವೀಕರಿಸುತ್ತದೆ ಎಂದು ಹತ್ತಿರದಿಂದ ಕಂಡಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲೇಖಕ ರಾಮದಾಸ ಅಡ್ಯಂತಾಯ ದೃಶ್-ಗ್ರಹಿಕೆ ಮತ್ತು ಚಿತ್ರಾಂಗಗಳು, ಕೆ.ವಿ. ಸುಬ್ರಹ್ಮಣ್ಯ ಅವರ ದೃಶ್ಯಧ್ಯಾನ ಸೇರಿದಂತೆ ಅಕಾಡೆಮಿಯ ವಿಶೇಷ 9 ಸಂಚಿಕೆಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಈ ವೇಳೆ ಲೇಖಕ ಜಗನ್ನಾಥ್ ಪ್ರಕಾಶ್, ಅಕಾಡೆಮಿಯ ಮಾಜಿ ಅಧ್ಯಕ್ಷ ಖಂಡೇರಾವ್, ಪತ್ರಕರ್ತ ರಾಜುಮಳವಳ್ಳಿ ಸೇರಿದಂತೆ ಇತರರು ಇದ್ದರು.

ಅಧಿಕಾರ, ಸ್ಥಾನದ ವ್ಯಾಮೋಹಕ್ಕಾಗಿ ಕಲಾವಿದರು ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು. ತಮ್ಮ ಘನತೆ ಮತ್ತು ನೈತಿಕತೆ ಕಾಪಾಡಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಕಲೆಯನ್ನು ತಲುಪಿಸದಿದ್ದರೆ ಯುವಜನ ಕ್ಷಮಿಸೋದಿಲ್ಲ.
-ಎಂ.ಎಸ್.ಮೂರ್ತಿ, ಲಲಿತಕಲಾ ಅಕಾಡೆಮಿಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News