ಶಾಲೆಯಲ್ಲಿಯೇ ಶಿಕ್ಷಕಿಗೆ ಬೆಂಕಿಯಿಟ್ಟ ಪತಿ!

Update: 2017-08-16 12:56 GMT

ಬೆಂಗಳೂರು, ಆ.16: ಶಾಲೆಯಲ್ಲಿಯೇ ಮಕ್ಕಳ ಎದುರು ಶಿಕ್ಷಕಿ ಮೇಲೆ ಆಕೆಯ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ದಾರುಣ ಘಟನೆ ಇಲ್ಲಿನ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿ ತಾಲೂಕಿನ ಶಂಭಯ್ಯನಪಾಳ್ಯದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುನಂದಾ(45) ಎಂಬುವರ ಮೇಲೆ ಪತಿ ರೇಣುಕಾನಂದ ಎಂಬಾತ ಕೊಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

ಕುಣಿಗಲ್ ಮೂಲದ ರೇಣುಕಾನಂದ, ಶಿಕ್ಷಕಿ ಸುನಂದಾ ಅವರ ಎರಡನೆ ಪತಿಯಾಗಿದ್ದು, ಇತ್ತೀಚಿಗೆ 2 ಲಕ್ಷ ರೂ. ಹಣ, ಚಿನ್ನಾಭರಣ ನೀಡುವಂತೆ ಒತ್ತಾಯಿಸಿದ್ದ. ಆದರೆ, ಹಣವಿಲ್ಲವೆಂದು ತಿಳಿಸಿದ್ದ ಸುನಂದಾ ಅವರು ಮಗನನ್ನು ಇತ್ತೀಚೆಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ದಾಖಲಿಸಿದ್ದರು ಎನ್ನಲಾಗಿದೆ.

 ಮಗನನ್ನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ್ದಕ್ಕೆ ಆಕ್ರೋಶಗೊಂಡಿದ್ದ ರೇಣುಕಾನಂದ ಬುಧವಾರ 10 ಗಂಟೆ ಸುಮಾರಿಗೆ ಪೆಟ್ರೋಲ್ ತೆಗೆದುಕೊಂಡು ಶಾಲೆ ಬಳಿ ಬಂದು ಶಿಕ್ಷಕಿ ಸುನಂದಾ ಅವರ ಜೊತೆ ಜಗಳವಾಡಿದ್ದಾನೆ. ಅಲ್ಲದೆ, ಶಾಲೆಯಲ್ಲಿಯೇ ಸುನಂದಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಘಟನೆ ವೇಳೆ ಸ್ಥಳದಲ್ಲಿದ್ದ ಸಹ ಶಿಕ್ಷಕರು ಬೆಂಕಿ ನಂದಿಸಿ ಮಾಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಶೇ.40 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿರುವ ಶಿಕ್ಷಕಿ ಸುನಂದಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News