ಮ.ಪ್ರದೇಶ: ಮನೆಗೆಲಸಕ್ಕೆ ಬಾರದ ಸಿಟ್ಟಿನಲ್ಲಿ ದಲಿತ ಮಹಿಳೆಯ ಮೂಗು ಕೊಯ್ದರು...!

Update: 2017-08-18 06:21 GMT

ಭೋಪಾಲ್, ಆ.17: ಕೆಲಸಕ್ಕೆ ಕರೆದಾಗ ಬರಲಿಲ್ಲ ಎಂಬ ಕಾರಣಕ್ಕೆ ದಲಿತ ಮಹಿಳೆಯೋರ್ವಳ ಮೂಗನ್ನು ಕೊಯ್ದು, ಆಕೆಯ ಪತಿಯನ್ನು ಮಾರಣಾಂತಿಕವಾಗಿ ಥಳಿಸಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರೆನ್‌ವಿಜ ಎಂಬ ಗ್ರಾಮದಲ್ಲಿ ಮೇಲ್ವರ್ಗದ ಕುಟುಂಬಕ್ಕೆ ಸೇರಿದ ನರೇಂದ್ರ ಸಿಂಗ್ ಹಾಗೂ ಆತನ ತಂದೆ ಸಾಹಬ್ ಸಿಂಗ್ ಈ ಕೃತ್ಯ ನಡೆಸಿರುವ ಬಗ್ಗೆ ಆರೋಪಿಸಲಾಗಿದೆ ಎಂದು ಸುರ್ಕಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳು ಜೀತದಾಳುಗಳಂತೆ ಈ ದಂಪತಿಯನ್ನು ದುಡಿಸಿಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದೆ ತನ್ನ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ತಡೆಗಟ್ಟಿದ ಆರೋಪಿಗಳು, ಕೆಲಸಕ್ಕೆ ಗೈರುಹಾಜರಾದ ಬಗ್ಗೆ ತಗಾದೆ ಎತ್ತಿ ಮಹಿಳೆಯ ಮೂಗಿಗೆ ಇರಿದಿದ್ದು ಆಕೆಯ ಪತಿಯನ್ನು ಥಳಿಸಿದ್ದಾರೆ. ಬುಧವಾರ ಗ್ರಾಮದಲ್ಲಿ ನಡೆದ ಮಹಿಳಾ ಆಯೋಗದ ಶಿಬಿರದಲ್ಲಿ ಭಾಗವಹಿಸಿದ್ದ ಸಂತ್ರಸ್ತ ಮಹಿಳೆ ಈ ಘಟನೆಯನ್ನು ತಿಳಿಸಿದ್ದಾರೆ ಎಂದು ಮಧ್ಯಪ್ರದೇಶದ ಮಹಿಳಾ ಆಯೋಗದ ಅಧ್ಯಕ್ಷೆ ಲತಾ ವಾಂಖೆಡೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ತಲೆತಪ್ಪಿಸಿಕೊಂಡಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News