ದಲಿತ ಬಾಲಕಿಯಿಂದ ಮಲ ಹೆಕ್ಕಿಸಿದ ಸವರ್ಣೀಯರು !

Update: 2017-08-22 03:44 GMT

ಛಾತ್ರಾಪುರ (ಮಧ್ಯಪ್ರದೇಶ), ಆ. 22: ಸಮೀಪದ ಲವಕುಶನಗರ್ ತಾಲೂಕಿನ ಗುಧೋರಾ ಎಂಬ ಗ್ರಾಮದ ಶಾಲೆಯ ಆವರಣದ ಹೊರಗೆ ಮಲ ವಿಸರ್ಜನೆ ಮಾಡಿದ ಆರು ವರ್ಷದ ಪುಟ್ಟ ದಲಿತ ಬಾಲಕಿಯ ಕೈಯಿಂದಲೇ ಅದನ್ನು ಹೆಕ್ಕಿಸುವಂತೆ ಒತ್ತಾಯಿಸಿದ ಘಟನೆ ಬೆಳಕಿಗೆ ಬಂದಿದೆ.

ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ, ಶಿಕ್ಷಕರ ಅನುಮತಿ ಪಡೆದು ಮಲಮೂತ್ರ ವಿಸರ್ಜನೆಗಾಗಿ ಶಾಲೆಯ ಮುಂಭಾಗದ ಬಯಲಿನ ತುದಿಗೆ ಹೋಗಿದ್ದಳು.

ಬಾಲಕಿ ಬಯಲಿನಲ್ಲಿ ಮಲ ವಿಸರ್ಜನೆ ಮಾಡುತ್ತಿದ್ದುದನ್ನು ನೋಡಿದ ಪಪ್ಪು ಸಿಂಗ್ ಎಂಬಾತ ಆಕೆಗೆ ಬೆದರಿಕೆ ಹಾಕಿ ಅದನ್ನು ಆಕೆಯ ಕೈಯಿಂದಲೇ ತೆಗೆದು ದೂರ ಬಿಸಾಕುವಂತೆ ಒತ್ತಾಯಿಸಿದ್ದ. ಘಟನೆಯನ್ನು ಬಾಲಕಿ ಪೋಷಕರ ಬಳಿ ಹೇಳಿಕೊಂಡಾಗ ದಲಿತ ಮುಖಂಡರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ ಎಂದು ಲವಕುಶನಗರ ಠಾಣೆ ಮುಖ್ಯಸ್ಥ ಝೆಡ್. ವೈ. ಖಾನ್ ಹೇಳಿದ್ದಾರೆ.

ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 374 (ಕಾನೂನುಬಾಹಿರ ಕಡ್ಡಾಯ ಕೂಲಿ) ಮತ್ತು ಸೆಕ್ಷನ್ 504 (ಶಾಂತಿ ಕದಡುವ ಉದ್ದೇಶದಿಂದ ದುರುದ್ದೇಶಪೂರ್ವಕ ಅವಮಾನ) ಮತ್ತು ಬಾಲನ್ಯಾಯ ಕಾಯ್ದೆಯ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಸಿಂಗ್ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಹೆಣೆದಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News