ದೆಹಲಿ: ಮತ್ತೆ ಮೂವರು ಸ್ವಚ್ಛತಾ ಕಾರ್ಮಿಕರು ಬಲಿ
ನೋಯ್ಡ, ಸೆ. 22: ನೋಯ್ಡದ ಒಳಚರಂಡಿ ಲೈನ್ ದುರಸ್ತಿ ವೇಳೆ ಮೂವರು ಸ್ವಚ್ಛತಾ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ. ರಾಜಧಾನಿಯಲ್ಲಿ ಪೌರಕಾರ್ಮಿಕರ ಸಾವಿನ ಸರಣಿ ಇದರೊಂದಿಗೆ ಮುಂದುವರಿದಿದೆ.
ನೋಯ್ಡ ಸ್ಥಳೀಯ ಸಂಸ್ಥೆಗೆ ಖಾಸಗಿ ಗುತ್ತಿಗೆದಾರರು ನಿಯೋಜಿಸಿದ್ದ ಸಿಬ್ಬಂದಿ, ಗುರುವಾರ ಸಂಜೆ ಕೆಲಸ ನಿರ್ವಹಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮ್ಯಾನ್ಹೋಲ್ ಮತ್ತು ಒಳಚರಂಡಿ ಪೈಪ್ಲೈನ್ ನಡುವೆ ಕೆಲಸ ಮಾಡುತ್ತಿದ್ದಾಗ ಸಿಕ್ಕಿಹಾಕಿಕೊಂಡ ಇವರನ್ನು ಹೊರತೆಗೆಯಲು ಮೂರು ಗಂಟೆ ಕಾಲ ಪರಿಹಾರ ತಂಡ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.
ಮೃತ ಯುವಕರನ್ನು ರಾಜೇಶ್ (28), ವಿಕಾಸ್ (24) ಮತ್ತು ರವೀಂದ್ರ (25) ಎಂದು ಗುರುತಿಸಲಾಗಿದೆ. ಆದರೆ ಯಾರಿಗೂ ಮಾಸ್ಕ್ ಅಥವಾ ಇತರ ಸುರಕ್ಷಾ ಸಾಧನಗಳಿರಲಿಲ್ಲ ಎಂದು ಹೇಳಲಾಗಿದೆ. ರಾಜಧಾನಿಯಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ 12 ಮಂದಿ ಮೃತಪಟ್ಟಂತಾಗಿದೆ. ಕಾನೂನುಪ್ರಕಾರ, ಜಾಡಮಾಲಿ ಪದ್ಧತಿ ಅನುಸರಿಸುವುದು ನಿಷಿದ್ಧ.