ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ಗಳಿಗೆ ಹೈಕೋರ್ಟ್ ತಡೆ

Update: 2017-09-22 15:32 GMT

ಬೆಂಗಳೂರು, ಸೆ.22: ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಜಮೀನು ಪೈಕಿ 257 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಕಾನೂನು ಬಾಹಿರವಾಗಿ ಆದೇಶಿಸಿದ ಆರೋಪ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ದಾಖಲಿಸಿದ್ದ ಎಫ್‌ಐಆರ್‌ಗಳಿಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಇದರಿಂದ ಪ್ರಕರಣ ಸಂಬಂಧ ಎಸಿಬಿಯ ತನಿಖೆಯ ಭೀತಿ ಎದುರಿಸುತ್ತಿದ್ದ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ನಿರಾಳ ಸಿಕ್ಕಿದಂತಾಗಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿದ್ದ ಪ್ರತ್ಯೇಕ ಎರಡು ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಸುಧೀರ್ಘವಾದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಿ ಆದೇಶಿಸಿತು.

ಯಡಿಯೂರಪ್ಪ ವಿರುದ್ಧ ದೂರುದಾರ ಡಿ.ಅಯ್ಯಪ್ಪ 2017ರ ಜೂ.7ರಂದು ದೂರು ದಾಖಲಿಸಿದ್ದರು. ಯಡಿಯೂರಪ್ಪ ವಿರುದ್ಧ ಪ್ರಜ್ಞಾಪೂರ್ವಕ ಅಪರಾಧ ಕೃತ್ಯ ಎಸಗಿದ ಆರೋಪವು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ದೂರು ತಿಳಿಸುತ್ತದೆ. ಹಾಗೆಯೇ, ಆರೋಪವನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವ ಪೂರಕ ದಾಖಲೆಗಳನ್ನೂ ದೂರುದಾರರು ತಮ್ಮ ದೂರಿನ ಜೊತೆಗೆ ಸಲ್ಲಿಸಿದ್ದರು. ಇಂತಹ ಸಂದರ್ಭದಲ್ಲಿ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿರುವುದಿಲ್ಲ ಹಾಗೂ ದೂರುದಾಖಲಿಸಿದ ಕೂಡಲೇ ಎಫ್‌ಐಆರ್ ದಾಖಲಿಸುವುದು ತನಿಖಾಧಿಕಾರಿಯ ಕರ್ತವ್ಯ. ಆದರೆ, ಎಫ್‌ಐಆರ್ ದಾಖಲಿಸುವಲ್ಲಿ ಎಸಿಬಿ ತನಿಖಾಧಿಕಾರಿಗಳು ಒಂಬತ್ತು ವಾರಗಳ ಕಾಲ (ಆ.10ರಂದು ಮೊದಲ ಹಾಗೂ ಆ.17ರಂದು ಎರಡನೆ ಎಫ್‌ಐಆರ್ ದಾಖಲು) ತಡ ಮಾಡಿದ್ದಾರೆ ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ದೂರುದಾಖಲಾದ ದಿನದಿಂದ ಏಳು ದಿನದಲ್ಲಿ ಎಫ್‌ಐಆರ್ ದಾಖಲಿಸಬೇಕು. ಪೂರಕ ದಾಖಲೆಗಳ ಸಂಗ್ರಹಕ್ಕಾಗಿ ಪ್ರಾಥಮಿಕ ತನಿಖೆ ನಡೆಸಿದ ಪಕ್ಷದಲ್ಲಿ ಆರು ವಾರಗಳ ಕಾಲ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಬಹುದು. ಆದರೆ, ವಿಳಂಬಕ್ಕೆ ಸಕಾರಣ ನಮೂದಿಸಬೇಕು. ನಗರಾಭಿವೃದ್ಧಿ ಇಲಾಖೆ ಮತ್ತು ವಸತಿ ಇಲಾಖೆಯಿಂದ ಅಗತ್ಯ ದಾಖಲೆಗಳನ್ನು ದೂರುದಾರ ಸಲ್ಲಿಸಿದ್ದರೂ ಪೂರಕ ದಾಖಲೆ ಸಂಗ್ರಹಕ್ಕಾಗಿ ಪ್ರಾಥಮಿಕ ತನಿಖೆ ನಡೆಸಿದ್ದರಿಂದ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಎಸಿಬಿ ಹೇಳಿದ್ದು, ಅದನ್ನು ಒಪ್ಪಲಾಗದು ಎಂದು ಪೀಠ ಹೇಳಿದೆ.

ದೂರುದಾರ ಸಲ್ಲಿಸಿದ ದಾಖಲೆಗಳನ್ನು ಹೊರತುಪಡಿಸಿ ಬೇರೆ ದಾಖಲೆಗಳನ್ನು ಪ್ರಾಥಮಿಕ ತನಿಖೆ ವೇಳೆ ಸಂಗ್ರಹಿಸಿಲ್ಲ. ಇನ್ನು ಎಫ್‌ಐಆರ್ ವಿಳಂಬವಾಗಿ ದಾಖಲಿಸಲು ಸೂಕ್ತ ಕಾರಣವನ್ನೂ ಪ್ರಾಥಮಿಕ ತನಿಖಾ ವರದಿ, ಕೇಸ್ ಡೈರಿಯಲ್ಲಿ ಅಥವಾ ಎಫ್‌ಐಆರ್‌ನಲ್ಲೂ ತಿಳಿಸಿಲ್ಲ. ಹೀಗಾಗಿ ವಿಳಂಬವಾಗಿ ಎಫ್‌ಐಆರ್ ದಾಖಲಿಸುವುದರಲ್ಲಿ ಸಾಕಷ್ಟು ಅನುಮಾನಗಳಿವೆ. ಇಂತಹ ಅನುಮಾನಗಳಿದ್ದಲ್ಲಿ ಎಫ್‌ಐಆರ್ ದಾಖಲಿಸಿದ್ದ ವಿಳಂಬವನ್ನು ಪ್ರತಿರೋಧಿಸುವ ಹಕ್ಕು ಅರ್ಜಿದಾರರಿಗೆ ಇರುತ್ತದೆ. ಈ ಪರಿಸ್ಥಿತಿಯಲ್ಲಿ ಪ್ರಕರಣದ ತನಿಖೆ ಮುಂದುವರಿಸಲು ಎಸಿಬಿಗೆ ಅನುಮತಿ ನೀಡಿದರೆ ಯಡಿಯೂರಪ್ಪ ಅವರಿಗೆ ಪಕ್ಷಪಾತ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ಗೆ ತಡೆ ನೀಡಿ ತನಿಖೆ ಮುಂದುವರಿಸದಂತೆ ಎಸಿಬಿಗೆ ನಿರ್ದೇಶಿಸಿದೆ. ಮಧ್ಯಂತರ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಮಧ್ಯಂತರ ಮನವಿಗೆ ಮಾತ್ರ ಅನ್ವಯಿಸುತ್ತದೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ತಡೆ ನೀಡಿದಕ್ಕೆ ಕೋರ್ಟ್ ನೀಡಿದ ಇತರೆ ಕಾರಣಗಳು:

*ಎಸಿಬಿಯ ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಜ್ಞಾಪೂರ್ವಕ ಅಪರಾಧ ಕೃತ್ಯ ಎಸಗಿರುವುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವಂತಹ ಸೂಕ್ತಾ ಸಾಕ್ಷ್ಯಾಧಾರಗಳು ಕಂಡುಬರುವುದಿಲ್ಲ.

*ಯಡಿಯೂರಪ್ಪ ಭೂಮಾಲಕರಿಂದ ಹಣಕ್ಕೆ ಬೇಡಿಕೆಯಿಟ್ಟು ಜಮೀನು ಡಿನೋಟಿಫಿಕೇಷನ್‌ಗೆ ಆದೇಶಿಸಿರುವುದರ ಬಗ್ಗೆ ದಾಖಲೆಗಳು ಕಂಡುಬಂದಿಲ್ಲ.

*ಯಡಿಯೂರಪ್ಪ ಲಂಚ ಪಡೆದು ಡಿನೋಟಿಫಿಕೇಷನ್ ಮಾಡಿ ಲಾಭ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಮಾಡಿರುವ ಆರೋಪಕ್ಕೆ ನ್ಯಾಯಪೀಠ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ.

* ಒಂದೇ ದೂರಿನ ಆಧರಿಸಿ ಪ್ರಕರಣದಲ್ಲಿ ಎರಡನೇ ದೂರು ದಾಖಲಿಸಿರುವುದು ಸರಿಯಲ್ಲ.

*ತನಿಖೆ ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿರಬೇಕು. ಕಳಂಕಿತ ತನಿಖೆಯು ಕ್ರಿಮಿನಲ್ ನ್ಯಾಯದ ಪೂರ್ವಗಾಮಿಯಾಗಲಿದೆ.

 * ತನಿಖಾಧಿಕಾರಿ ಅಮಾಯಕ ಪ್ರಜೆಗಳು ರಕ್ಷಕರಾಗಿರುತ್ತಾರೆ. ಹೀಗಾಗಿ ಅವರು ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಸಾಕ್ಷ್ಯಾಧಾರಗಳು ತೃಪ್ತಿಕರವಾಗಿರದಿದ್ದಲ್ಲಿ ತನಿಖೆ ಹಾಗೂ ಪ್ರಾಸಿಕ್ಯೂಷನ್ ಹೆಸರಿನಲ್ಲಿ ಯಾರಿಗೂ ಕಿರುಕುಳ ನೀಡಬಾರದು.

* ಸಾಕ್ಷ್ಯಾಧಾರಗಳ ಕೊರತೆಯ ನಡುವೆ ತನಿಖೆ ಮುಂದುವರಿಸುವುದು ಅರ್ಜಿದಾರರಿಗೆ ತೊಂದರೆ ನೀಡಲಿದೆ. ಹಾಗೆಯೇ, ನ್ಯಾಯದ ವಿಫಲತೆ ಸಾಧಿಸುತ್ತದೆ ಮತ್ತು ಅರ್ಜಿದಾರರಿಗೆ ಪಕ್ಷಪಾತ ಬಗೆದಂತಾಗುತ್ತದೆ. ನ್ಯಾಯಸಮ್ಮತ ತನಿಖೆಯು ಅರ್ಜಿದಾರರಿಗೆ ಸಂವಿಧಾನದಡಿ ನೀಡಿರುವ ಹಕ್ಕು.

*ಯಡಿಯೂರಪ್ಪ200 ಕೋಟಿ ರೂ. ಮೌಲ್ಯದ (ಈಗ ನಾಲ್ಕು ಪಟ್ಟು ಹೆಚ್ಚಿನ ಮೌಲ್ಯದ) ಜಮೀನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಆರೋಪ ಕುರಿತು ಈ ಹಂತದಲ್ಲಿ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿದರೆ, ಅರ್ಜಿದಾರ ಹಕ್ಕಿನ ಕುರಿತು ನ್ಯಾಯಾಲಯವು ಪೂರ್ವಗ್ರಹ ಪೀಡಿತವಾಗಿದೆ ಎಂದು ಬಿಂಬಿತವಾಗುತ್ತದೆ.

*ಆಶಾ ಪರದೇಶಿ ಎಂಬುವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಆದೇಶ ಮಾಡಲಾಗಿದೆ. ಅವರು ಭೂ ಮಾಲಕರಲ್ಲ ಎಂದು ದೂರಲಾಗಿದೆ. ಆದರೆ, ಮಾರಾಟ ಕ್ರಯಪತ್ರಗಳನ್ನು ಪರಿಶೀಲಿಸಿದರೆ ಆಶಾ ಪರದೇಶಿ ಭೂಮಿಯ ಮಾಲಕರಾಗಿದ್ದರು ಎಂದು ತಿಳಿಯುತ್ತದೆ.


ಇದು ಸತ್ಯಕ್ಕೆ ಸಂದ ಜಯ:

‘ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನನ್ನ ಮೇಲಿನ ಸುಳ್ಳು ಕೇಸಿನ ತನಿಖೆಗೆ ಹೈಕೋರ್ಟ್ ನೀಡಿರುವ ತಡೆಯನ್ನು ನಾನು ಸ್ವಾಗತಿಸುತ್ತೇನೆ. ಮೊದಲಿನಿಂದಲೂ ನ್ಯಾಯ ಸಿಗುವ ವಿಶ್ವಾಸವಿತ್ತು. ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಧೀಶರು ಪ್ರಕರಣಕ್ಕೆ ತಡೆ ನೀಡಿ ತೀರ್ಪು ನೀಡಿದ್ದಾರೆ. ಕೇವಲ ರಾಜಕೀಯ ದುರದ್ದೇಶದಿಂದ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಮತ್ತು ಕೆಲ ಐಪಿಎಸ್ ಅಧಿಕಾರಿಗಳ ನನ್ನನ್ನು ಸಿಲುಕಿಸಲು ಸಂಚು ರೂಪಿಸಿದ್ದರು. ಆ ದುರುದ್ದೇಶದ ಸಂಚು ವಿಫಲವಾಗಿರುವುದರ ಜೊತೆಗೆ ರಾಜ್ಯದ ಜನತೆಗೆ ಸತ್ಯ ಏನೆಂಬುದು ಗೊತ್ತಾಗಿದೆ.’

-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News