ಕರ್ನಾಟಕ ಮಾದರಿಯಲ್ಲೇ ‘ಕೇಂದ್ರ ಆರೋಗ್ಯ ಪ್ರವಾಸ ನೀತಿ’ ಜಾರಿ: ಸತ್ಯಜಿತ್ ರಾಜನ್

Update: 2017-10-12 16:12 GMT

ಬೆಂಗಳೂರು, ಅ.12: ರಾಜ್ಯ ಸರಕಾರದ ಮಾದರಿಯಲ್ಲೇ ಕೇಂದ್ರ ಸರಕಾರವು ಮುಂದಿನ ವರ್ಷದಿಂದ ‘ಆರೋಗ್ಯ ಪ್ರವಾಸ ನೀತಿ’ಯನ್ನು ರೂಪಿಸಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಮಹಾ ನಿರ್ದೇಶಕ ಸತ್ಯಜಿತ್ ರಾಜನ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಎಫ್‌ಕೆಸಿಸಿಐ ಸಹಯೋಗದೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ 'ಅನುಕೂಲಕರ ಆರೋಗ್ಯ ಭಾರತ-2017' ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಆರೋಗ್ಯ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಹೀಗಾಗಿ ರಾಜ್ಯ ಸರಕಾರ ಆರೋಗ್ಯ ಪ್ರವಾಸ ನೀತಿ ರೂಪಿಸಿ ಅನುಕೂಲ ಕಲ್ಪಿಸಿದೆ. ಅದೇ ಮಾದರಿಯಲ್ಲಿ ಕೇಂದ್ರ ಸರಕಾರವೂ ಸುಧಾರಿತ ನೀತಿಯನ್ನು ರೂಪಿಸಲು ಕ್ರಮ ಕೈಗೊಂಡಿದೆ ಎಂದರು.

ವಿದೇಶಿಗರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು, ಹೈದರಾಬಾದ್, ಕೋಲ್ಕತ್ತ, ಚೆನ್ನೈ ಸೇರಿ 6 ಕಡೆ ಪ್ರವಾಸೋದ್ಯಮ ಸೌಲಭ್ಯ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದ ಅವರು, ಈ ಕೇಂದ್ರಗಳ ಮೂಲಕ ವಿದೇಶಿಗರು ಆರೋಗ್ಯ ಪ್ರವಾಸದ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು ಎಂದು ವಿವರಿಸಿದರು.

ತಮ್ಮ ದೇಶದಲ್ಲೇ ಕುಳಿತು ಭಾರತದ ವೈದ್ಯರನ್ನು ಸಂಪರ್ಕಿಸಬಹುದು. ಸಮಯ ನಿಗದಿಪಡಿಸಿಕೊಂಡು ಸುಲಭವಾಗಿ ವೀಸಾ ಪಡೆದುಕೊಳ್ಳಬಹುದು ಎಂದ ಅವರು, ಈ ಸೌಲಭ್ಯ ಕೇಂದ್ರಗಳಿಗೆ ಮತ್ತಷ್ಟು ಅನುಕೂಲ ಒದಗಿಸಲು ವಿದೇಶಾಂಗ ಇಲಾಖೆ ಜತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಆರೋಗ್ಯ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, 70 ದೇಶಗಳಿಂದ 700 ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೇಶದಲ್ಲಿ ಉತ್ತಮವಾದ ಚಿಕಿತ್ಸಾ ಸೌಲಭ್ಯವಿದೆ. ಚಿಕಿತ್ಸೆ ಪಡೆದು ಸುಧಾರಿಸಿಕೊಂಡವರು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಕರ್ನಾಟಕ ಸರಕಾರ ಉತ್ತಮ ನೀತಿ ರೂಪಿಸಿದೆ. ಅಲೋಪತಿಯ ಜತೆ ಆಯುಷ್ ಚಿಕಿತ್ಸಾ ಸೌಲಭ್ಯಗಳು ಲಭ್ಯವಾಗಲಿವೆ ಎಂದರು.

ಭಾರತದಲ್ಲಿ ಪ್ರತೀ ಕುಟುಂಬವೂ ತನ್ನ ಆದಾಯದ ಮೂರನೇ ಒಂದು ಭಾಗವನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಪ್ರವಾಸೋದ್ಯಮದ ಅಭಿವೃದ್ಧಿಪಡಿಸಿದರೆ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಲಾಭ ಬರಲಿದ್ದು, ಆರ್ಥಿಕತೆಯಲ್ಲೂ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News