ಹಾರ್ದಿಕ್ ಪಟೇಲ್-ಕಾಂಗ್ರೆಸ್ ನಡುವೆ ಟಿಕೆಟ್ ಹಂಚಿಕೆ ಬಿಕ್ಕಟ್ಟು ಮುಂದುವರಿಕೆ
ಅಹ್ಮದಾಬಾದ್, ನ.19: ಹಾರ್ದಿಕ್ ಪಟೇಲ್ ನೇತೃತ್ವದ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ(ಪಾಸ್) ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಮುಂಬರುವ ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಸಂಬಂಧ ಬಿಕ್ಕಟ್ಟು ಮುಂದುವರಿದಿದೆ.
ಹಾರ್ದಿಕ್ ಪಟೇಲ್ ಬಣ 9 ಟಿಕೆಟ್ಗಾಗಿ ಬೇಡಿಕೆ ಇಟ್ಟಿದೆ. ಆದರೆ, ಕಾಂಗ್ರೆಸ್ ಕೇವಲ 4 ಕ್ಷೇತ್ರಗಳಲ್ಲಿ ಟಿಕೆಟ್ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದೆ.
ಪಾಸ್ ಪ್ರತಿನಿಧಿಗಳು ಶುಕ್ರವಾರ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಟಿಕೆಟ್ ಹಂಚಿಕೆ ಹಾಗೂ ಮೀಸಲಾತಿ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಶುಕ್ರವಾರ ಸಂಜೆ ಪಾಸ್ ನಾಯಕರು ಮೀಸಲಾತಿ ವಿಷಯಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳಲು 24 ಗಂಟೆಗಳ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
‘‘ನಾವು ಕಾಂಗ್ರೆಸ್ ಬಳಿ 9 ಟಿಕೆಟ್ಗಾಗಿ ಬೇಡಿಕೆ ಮುಂದಿಟ್ಟಿದ್ದೇವೆ. ಅತ್ಯಂತ ಮುಖ್ಯವಾಗಿ ಪಟೇಲ್ರ ಪ್ರಾಬಲ್ಯವಿರುವ ಅಹ್ಮದಾಬಾದ್, ಉತ್ತರ ಗುಜರಾತ್ ಹಾಗೂ ಸೌರಾಷ್ಟ್ರ ಪ್ರದೇಶದಲ್ಲಿ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದೇವೆ. ಆದರೆ, ಕಾಂಗ್ರೆಸ್ ನಾಲ್ಕು ಸೀಟುಗಳಿಗಿಂತ ಹೆಚ್ಚು ನೀಡಲು ಸಿದ್ಧವಿಲ್ಲ ಎಂದು ಹೇಳಿದೆ’’ ಪಾಸ್ನ ಉನ್ನತ ಮೂಲಗಳು ತಿಳಿಸಿವೆ.