ಅನ್ಯ ಜಾತಿ ಹುಡುಗನನ್ನು ಪ್ರೀತಿಸಿದ್ದಕ್ಕೆ ಕೊಲೆ ಮಾಡಿದ ತಂದೆ ಬಂಧನ

Update: 2017-11-23 14:39 GMT

ಬೆಂಗಳೂರು, ನ.23: ಅನ್ಯಜಾತಿಯ ಹುಡುಗನನ್ನು ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಅಪ್ರಾಪ್ತ ಮಗಳನ್ನು ಹೊಡೆದು ಕೊಲೆ ಮಾಡಿ ಬೆಂಕಿ ಹಚ್ಚಿರುವ ಘಟನೆ ನಗರದ ತ್ಯಾಮಗೊಂಡ್ಲು ಪ್ರದೇಶದಲ್ಲಿ ನಡೆದಿದೆ.

ತ್ಯಾಮಗೊಂಡ್ಲುವಿನ ಲಕ್ಕಪ್ಪನಹಳ್ಳಿಯ ಚಿಕ್ಕ ನರಸಿಂಹಯ್ಯ(45) ಬಂಧಿತ ಆರೋಪಿಯಾಗಿದ್ದು, ಮಂಡಿಗೇರಿಯ ಸರಕಾರಿ ಶಾಲೆಯಲ್ಲಿ 10ನೆ ತರಗತಿ ಓದುತ್ತಿದ್ದ ಮಗಳು ಲಕ್ಷ್ಮೀದೇವಿ(16)ಯನ್ನು ತಂದೆ ಚಿಕ್ಕ ನರಸಿಂಹಯ್ಯ ಕಟ್ಟಿಗೆಯಿಂದ ಹೊಡೆದು ಕೊಲೆಮಾಡಿ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಸುಟ್ಟು ಹಾಕಿದ್ದ. ಇದೀಗ ಆರೋಪಿ ತಂದೆಯನ್ನು ತ್ಯಾಮಗೊಂಡ್ಲು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಮನೆಯಲ್ಲಿದ್ದ ಬಾಲಕಿ ಹಲವು ದಿನಗಳಿಂದ ಕಾಣಿಸಿರಲಿಲ್ಲ. ಗ್ರಾಮದ ಹಿರಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಚಿಕ್ಕ ನರಸಿಂಹಯ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತಳಾದ ಲಕ್ಷ್ಮೀ ದೇವಿಯು ಅದೇ ಗ್ರಾಮದ ಲಕ್ಷ್ಮಿನಾರಾಯಣ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರು ಒಂದೂವರೆ ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ಕರೆ ತಂದಿದ್ದರು.

ಲಕ್ಷ್ಮಿದೇವಿ ಅಪ್ರಾಪ್ತಳಾಗಿದ್ದರಿಂದ ಪೋಷಕರ ಸುಪರ್ದಿಗೆ ನೀಡಿ ಯುವಕನ ವಿರುದ್ಧವೂ ಯಾವುದೇ ಪ್ರಕರಣ ದಾಖಲಿಸದೇ ಬುದ್ಧಿ ಹೇಳಿ ಕಳುಹಿಸಲಾಗಿತ್ತು.
ಆದರೆ, ಮಗಳ ವರ್ತನೆಯಿಂದ ಆಕ್ರೋಶಗೊಂಡು ಲಕ್ಷ್ಮೀದೇವಿಯನ್ನು ಮನೆಗೆ ಕರೆದುಕೊಂಡು ಬಂದ ಕೆಲ ದಿನಗಳು ಸುಮ್ಮನಿದ್ದು, ಶಾಲೆಗೂ ಕಳುಹಿಸದೇ ಮನೆಯಲ್ಲಿ ಚೆನ್ನಾಗಿ ಹೊಡೆದು ಸಾಯಿಸಿ, ನಂತರ ಆಕೆಯ ಶವವನ್ನು ಸುಟ್ಟು ಹಾಕಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News