ಬೆಂಗಳೂರು: ಮೆಟ್ರೋ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗೆ ಬಿದ್ದ ಲಾರಿ; ಚಾಲಕನಿಗೆ ಗಂಭೀರ ಗಾಯ

Update: 2018-01-13 14:38 GMT

ಬೆಂಗಳೂರು, ಜ.13: ಮೆಟ್ರೋ ಕಾಮಗಾರಿಗಾಗಿ ತೆಗೆದಿದ್ದ ಹಳ್ಳಕ್ಕೆ ಟಿಪ್ಪರ್ ಲಾರಿ ಉರುಳಿ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಳೆ ಮದ್ರಾಸ್ ರಸ್ತೆಯ ಟಿನ್‌ಫ್ಯಾಕ್ಟರಿ ಬಳಿ ನಡೆದಿದೆ.

 ಘಟನೆಯಲ್ಲಿ ತಮಿಳುನಾಡು ಮೂಲದ ಚಾಲಕ ಮಣಿ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮರಳು ತುಂಬಿಕೊಂಡು ಹೊಸಕೋಟೆ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಶನಿವಾರ ಬೆಳಗಿನ ಜಾವ 4:30 ರ ಸಮಯದಲ್ಲಿ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದ ಸಮೀಪ ಅಳವಡಿಸಿದ್ದ ಮೆಟ್ರೋ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ಪಕ್ಕದಲ್ಲಿ ಕಾರ್ಮಿಕರು ಮಲಗಿದ್ದ ಕಂಟೇನರ್‌ಗೆ ಗುದ್ದಿ ಗುಂಡಿಗೆ ಬಿದ್ದಿದೆ.
 ಲಾರಿ ಹಾಗೂ ಕಂಟೇನರ್ ಅನ್ನು ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಿ, ಬಿಎಂಆರ್‌ಸಿಎಲ್ ಸಿಬ್ಬಂದಿ ಹೊರತೆಗೆದು ಕಂಟೇನರ್‌ನಲ್ಲಿ ಮಲಗಿದ್ದ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News