ಬಿಜೆಪಿಯಿಂದ ಮತದಾರರ ಧ್ರುವಿಕಕರಣಕ್ಕೆ ಯತ್ನ: ಪಿಎಫ್‌ಐ

Update: 2018-01-16 10:31 GMT

ಬೆಂಗಳೂರು, ಜ.16: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತದಾರರನ್ನು ಧ್ರುವೀಕರಿಸಲು ಬಿಜೆಪಿ ಹೂಡುತ್ತಿರುವ ದುಷ್ಟ ತಂತ್ರಗಳ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಪ್ರಕಟನೆಯಲ್ಲಿ ಜನರನ್ನು ಎಚ್ಚರಿಸಿದ್ದಾರೆ.

ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಸಂಭವಿಸಿದ ಕೆಲವು ಹಠಾತ್ ಘರ್ಷಣೆಗಳ ಹಿಂದೆ ಬಿಜೆಪಿ ಮತ್ತು ಆರೆಸ್ಸೆಸ್ ಕೈವಾಡವಿದೆ. ರಾಜ್ಯ ಚುನಾವಣೆಗೆ ಮುಂಚಿತವಾಗಿ ಪಾಪ್ಯುಲರ್ ಫ್ರಂಟ್‌ನ್ನು ನಿಷೇಧಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಗಳೂ ಪ್ರಕಟವಾಗಿವೆ. ಬಿಜೆಪಿಯು ಕರ್ನಾಟಕದಲ್ಲಿ ಎಲ್ಲಾ ಸರಿ ಅಥವಾ ತಪ್ಪು ಹಾದಿಯಲ್ಲಿ ಅಧಿಕಾರವನ್ನು ಪಡೆದುಕೊಳ್ಳಲು ಉತ್ಸುಕವಾಗಿದೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ. ಪ್ರಗತಿಪರ ಸಂಘಟನೆಯನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಯುಎಪಿಎಯಂತಹ ಕರಾಳ ಕಾನೂನುಗಳನ್ನು ಬಳಸಿಕೊಂಡು ಪಾಪ್ಯುಲರ್ ಫ್ರಂಟ್‌ನ ಕಾರ್ಯಚಟುವಟಿಕೆಗಳನ್ನು ದಮನಿಸುವುದು ಅವರ ಯೋಜನೆಯಾಗಿದೆ ಎಂದವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಆದಾಗ್ಯೂ ಕಾನೂನನ್ನು ಪಾಲಿಸುವ ಸಂಘಟನೆಯಾಗಿ ಪಾಪ್ಯುಲರ್ ಫ್ರಂಟ್ ಈ ರೀತಿಯ ಕಾಯ್ದೆಗಳ ದುರುಪಯೋಗದ ವಿರುದ್ದ ಕಾನೂನು ಪರಿಹಾರವನ್ನು ಕಂಡುಕೊಳ್ಳಲಿದೆ. ಫ್ಯಾಶಿಸ್ಟ್ ಶಕ್ತಿಗಳ ವಂಚನೆಗಳನ್ನು ಸೋಲಿಸಲು ಕರ್ನಾಟಕದ ಜನತೆ ಮುಂದಾಗಬೇಕು ಎಂದವರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News