ಕಮಲ್ ಜತೆ ಮೈತ್ರಿ: ರಜನಿ ಹೇಳಿದ್ದೇನು?

Update: 2018-01-18 04:04 GMT

ಚೆನ್ನೈ, ಜ. 18: ಯಾವುದೇ ಕ್ಷಣದಲ್ಲಿ ಚುನಾವಣೆ ನಡೆದರೂ ಎದುರಿಸಲು ತಮ್ಮ ಪಕ್ಷ ಸಿದ್ಧ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಘೋಷಿಸಿದ್ದಾರೆ. ಆದರೆ ಕಮಲ್ ಹಾಸನ್ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸಂಬಂಧ ಮಾಧ್ಯಮದವರಿಂದ ಎದುರಾದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಆಶ್ವಾಸನೆಯೊಂದಿಗೆ ಉಭಯ ನಟರು ಪ್ರತ್ಯೇಕ ಪಕ್ಷ ಹುಟ್ಟು ಹಾಕಿದ್ದಾರೆ. ತಮಿಳುನಾಡಿಗೆ ಪಾರದರ್ಶಕ ಮತ್ತು ಜವಾಬ್ದಾರಿಯುತ ಸರ್ಕಾರ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.

"ಕಮಲ್‌ ಹಾಸನ್ ಅವರು ನನಗಿಂತ ಮೊದಲೇ ರಾಜಕೀಯ ಪಕ್ಷ ಹುಟ್ಟು ಹಾಕುತ್ತಾರೆ ಎಂದು ನಾನು ಯೋಚಿಸಿದ್ದೆ. ಅವರಿಗೆ ಶುಭವಾಗಲಿ" ಎಂದು ಹಾರೈಸಿದರು. ಕೌಲಾಲಂಪುರದಲ್ಲಿ ಉಭಯ ನಟರು ಸಮಾರಂಭವೊಂದರಲ್ಲಿ ಜತೆಯಾಗಿ ಭಾಗವಹಿಸಿದ್ದು, ರಾಜಕೀಯ ವಲಯದಲ್ಲಿ ಊಹೆಗಳಿಗೆ ಕಾರಣವಾಗಿತ್ತು.

ಆದರೆ ತಮ್ಮ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ರಜನಿಕಾಂತ್ ಇದೀಗ ಸ್ಪಷ್ಟಪಡಿಸಿದ್ದಾರೆ. "ಮುಂದಿನ ಆರು ತಿಂಗಳಲ್ಲಿ ಚುನಾವಣೆ ನಡೆಸಿದರೂ ನಾವು ಎದುರಿಸಲು ಸಜ್ಜಾಗಿದ್ದೇವೆ" ಎಂದು ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸದಲ್ಲಿರುವ ಅವರು ಹೇಳಿದರು. ತಮಿಳುನಾಡಿನ ಮರುಶೋಧ ಹೆಸರಿನಲ್ಲಿ ಪ್ರವಾಸ ಆರಂಭಿಸಿರುವ ಅವರು ಫೆಬ್ರವರಿ 21 ಅಂದರೆ ತಮ್ಮ ಹುಟ್ಟುಹಬ್ಬದ ದಿನದವರೆಗೆ ಪ್ರವಾಸ ಕೈಗೊಳ್ಳುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News