''ನಾವೀಗ ಮಾನವರಿಂದ ಮಂಗ ಆಗುತ್ತಿದ್ದೇವೆ''

Update: 2018-01-22 09:01 GMT

ಬೆಂಗಳೂರು, ಜ.22 : ಪ್ರಧಾನಿ ಮೋದಿಯಿಂದ ಹಿಡಿದು ಸಂಘ ಪರಿವಾರದ ಸಂಘಟನೆಗಳ ವಿರುದ್ಧ ಟ್ವೀಟುಗಳನ್ನು ಮಾಡಿ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್ ರೈ ಇದೀಗ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಅವರನ್ನು ಟಾರ್ಗೆಟ್ ಆಗಿಸಿದ್ದಾರೆ.

ಡಾರ್ವಿನನ ಮಂಗನಿಂದ ಮಾನವನೆಂಬ ವಿಕಸನ ಸಿದ್ಧಾಂತ ವೈಜ್ಞಾನಿಕವಾಗಿ ತಪ್ಪು ಎಂಬ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಸಚಿವರನ್ನುದ್ದೇಶಿಸಿ ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘‘ನಮ್ಮ ಪೂರ್ವಜರು ಮಂಗನಿಂದ ಮಾನವನಾಗಿರುವುದನ್ನು ನೋಡಿಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ ಪ್ರೀತಿಯ ಸರ್. ಇಂದು ನಾವೇನು ನೋಡುತ್ತಿದ್ದೇವೆಂದು ನೀವು ಅಲ್ಲಗಳೆಯಲು ಸಾಧ್ಯವೇ ? ಎಲ್ಲವೂ ಉಲ್ಟಾ. ಮಾನವ ಮಂಗನಾಗುತ್ತಿದ್ದಾನೆ. ಇತಿಹಾಸವನ್ನು ಅಗೆದು ನಮ್ಮನ್ನು ಶಿಲಾಯುಗಕ್ಕೆ ಕೊಂಡೊಯ್ಯಲಾಗುತ್ತಿದೆ #ಜಸ್ಟ್ ಆಸ್ಕಿಂಗ್’’ ಎಂದು ಟ್ವೀಟ್ ಮಾಡಿದ್ದಾರೆ.

ರವಿವಾರ ನಟ ನಿರ್ಮಾಪಕ ನಿರ್ದೇಶಕ ಫರ್ಹಾನ್ ಅಖ್ತರ್ ಕೂಡ ಸಿಂಗ್ ಹೇಳಿಕೆಯನ್ನು ಟೀಕಿಸಿ ಮಾಧ್ಯಮಗಳು ಟ್ವೀಟುಗಳ ವಿಚಾರದಲ್ಲಿಯೂ ಬ್ರೇಕಿಂಗ್ ನ್ಯೂಸ್ ಬಳಸುತ್ತಿರುವುದನ್ನು ಅಣಕಿಸಿ ‘‘ಈಗ ಮಂಗಗಳೂ ಡಾರ್ವಿನನ ಸಿದ್ಧಾಂತವನ್ನು ವಿರೋಧಿಸಲು ಆರಂಭಿಸಿವೆ’’ ಎಂದು ಟ್ವೀಟ್ ಮಾಡಿದ್ದರು.

ಮಂಗನಿಂದ ಮಾನವ ಸಿದ್ಧಾಂತ ತಪ್ಪು ಎಂದು ಹೇಳಿರುವ ಸಚಿವರು ತಾವು ದಿಲ್ಲಿ ವಿವಿಯಿಂದ ರಸಾಯನ ಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾಗಿಯೂ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News