ಕನ್ನಡ ಕಾಯಕಶ್ರೀ ಪ್ರಶಸ್ತಿಗೆ ಗೊರುಚ ಆಯ್ಕೆ
Update: 2018-01-23 12:39 GMT
ಬೆಂಗಳೂರು, ಜ.23: ವಿಮಾನ ಕನ್ನಡ ಸಂಘ ಪ್ರತಿವರ್ಷ ಕೊಡಮಾಡುವ ಕನ್ನಡ ಕಾಯಕ ಶ್ರೀ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.
ನಾಡು, ನುಡಿಗಾಗಿ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷ ಕನ್ನಡ ಕಾಯಕಶ್ರೀ ಪ್ರಶಸ್ತಿ ನೀಡುತ್ತಿದ್ದು, ಈಗಾಗಲೆ ಈ ಪ್ರಶಸ್ತಿಯನ್ನು ಹಿರಿಯ ಚಿತ್ರನಟ ಕೆ.ಎಸ್.ಅಶ್ವತ್ಥ್, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸೇರಿದಂತೆ 10 ಮಂದಿಗೆ ನೀಡಲಾಗಿದೆ. ಈ ಬಾರಿ ಡಾ.ಗೊ.ರು.ಚನ್ನಬಸಪ್ಪರಿಗೆ ನೀಡಲಾಗುತ್ತಿದೆ ಎಂದು ಅಧ್ಯಕ್ಷ ರಾಮಸ್ವಾಮಿ ತಿಳಿಸಿದರು.
ಜ.28ರಂದು ನಗರದ ಹಳೆ ವಿಮಾನ ನಿಲ್ದಾಣ ಡಾ.ವಿ.ಎಂ.ಘಾಟ್ಗೆ ಸಭಾಂಗಣದಲ್ಲಿ ನಡೆಯುವ ವಿಮಾನ ಕನ್ನಡ ಸಂಘದ 12ನೆ ವಾರ್ಷಿಕೋತ್ಸವದಲ್ಲಿ ಹಿರಿಯ ಕವಿ ಡಾ.ಜಿ.ಎಸ್.ಸಿದ್ದಲಿಂಗಯ್ಯರವರು ಡಾ.ಗೊ.ರು.ಚನ್ನಪ್ಪರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಹೋರಾಟಗಾರ ರಾ.ನಂ.ಚಂದ್ರಶೇಖರ ಅಭಿನಂದನಾ ನುಡಿಗನ್ನಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.