ಹುಲಿ ಚರ್ಮ ಮಾರಾಟಕ್ಕೆ ಯತ್ನ: ಮೂವರು ಆರೋಪಿಗಳ ಬಂಧನ
Update: 2018-01-23 13:36 GMT
ಬೆಂಗಳೂರು, ಜ.23: ತಮಿಳುನಾಡಿನ ಅರಣ್ಯದಲ್ಲಿ ಹುಲಿಯನ್ನು ಬೇಟೆಯಾಡಿ ಕೊಂದು, ಚರ್ಮವನ್ನು ಮಾರಾಟ ಮಾಡಲು ಪ್ರಯತ್ನ ನಡೆಸಿದ್ದ ಮೂವರು ಬೇಟೆಗಾರರನ್ನು ನಗರದ ಯಶವಂತಪುರ ಆರ್ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಾಳವಾಡ ತಾಲೂಕಿನ ತಿಗೆನಾರೆ ಬಾಲಕೃಷ್ಣ (28), ಮಹೇಶ್(23), ರಂಗರಾಜು(36) ಇವರುಗಳು ಬಂಧಿತ ಕಳ್ಳ ಹುಲಿ ಬೇಟೆಗಾರರಾಗಿದ್ದು, ಇವರಿಂದ ಹುಲಿ ಚರ್ಮವನ್ನು ಯಶವಂತಪುರ ಆರ್ಎಂಸಿ ಯಾರ್ಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಯಶವಂತಪುರ ಬಸ್ ನಿಲ್ದಾಣದಲ್ಲಿ ಒಂದುಗೋಣಿ ಚೀಲದೊಳಗೆ ಚರ್ಮವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮೂರು ತಿಂಗಳ ಹಿಂದೆ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುರುಳು ಹಾಕಿ ಹುಲಿಯನ್ನು ಬೇಟೆಯಾಡಿ ಸಾಯಿಸಿ ಚರ್ಮ ತೆಗೆದಿದ್ದರು ಎಂದು ತಿಳಿದು ಬಂದಿದೆ.