ಬಿಜೆಪಿಗರು ಮೊದಲು ಜಾತಿ ಕನ್ನಡಕ ಕಳಚಿಡಲಿ: ಸಿದ್ದರಾಮಯ್ಯ

Update: 2018-01-28 08:46 GMT

ಬೆಂಗಳೂರು, ಜ.28: ಬಿಜೆಪಿಯವರು ಜಾತಿ ಕನ್ನಡಕ ಹಾಕಿಕೊಂಡಿದ್ದಾರೆ. ಅವರು ಎಲ್ಲವನ್ನೂ ಅದರಿಂದಲೇ ನೋಡುತ್ತಾರೆ. ಮೊದಲು ಜಾತಿ ಕನ್ನಡಕವನ್ನು ಕಳಚಿ, ಮಾನವೀಯ ದೃಷ್ಟಿಯಿಂದ ನೋಡುವುದನ್ನು ಕಲಿಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ರವಿವಾರ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಿದ್ದರು. 

ಕೋಮು ಗಲಭೆ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ಮಾತ್ರ ಕೈ ಬಿಡಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿಯ ಆರೋಪ ಸರಿಯಲ್ಲ. ಈ ವಿಷಯಕ್ಕೆ ರಾಜಕೀಯ ಬಣ್ಣ ನೀಡುವುದೂ ಸಮಂಜಸವಲ್ಲ. ಯಾವುದೇ ಜಾತಿ, ಧರ್ಮದವರಾಗಿರಲಿ ಜನಪರ ಹೋರಾಟಗಳಲ್ಲಿ ಭಾಗಿಯಾಗಿರುವ ನಿರಪರಾಧಿಗಳ ವಿರುದ್ಧ ಕೇಸು ದಾಖಲಾಗಿದ್ದರೆ ವಾಪಸ್ ಪಡೆಯುತ್ತೇವೆ. ಅಲ್ಪಸಂಖ್ಯಾತರ ವಿಷಯ ಮಾತ್ರ ಏಕೆ ಪ್ರಸ್ತಾಪವಾಗುತ್ತಿದೆ ಎಂದು ಪ್ರಶ್ನಿಸಿದರು. 

ಅಲ್ಪಸಂಖ್ಯಾತರ ಸ್ಥಿತಿಗತಿ ಮತ್ತು ಅವರ ಅಭಿವೃದ್ಧಿ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಾಚಾರ್ ಸಮಿತಿ ನೇಮಕವಾಗಿತ್ತು. ಜತೆಗೆ ರಂಗನಾಥ ಮಿಶ್ರಾ ಅವರ ಸಮಿತಿಯೂ ರಚನೆಯಾಗಿತ್ತು. ಬಿಜೆಪಿಯವರು ಕೇವಲ ಅಲ್ಪಸಂಖ್ಯಾತರ ಬಗ್ಗೆಯೇ ಬೊಟ್ಟು ಮಾಡಿ ಹೇಳುವುದು ಏಕೆ. ಬಿಜೆಪಿಯವರು ಮೊದಲು ಜಾತಿ ಎಂಬ ಕನ್ನಡಕವನ್ನು ಕಳಚಿ, ಮಾನವೀಯ ದೃಷ್ಟಿಯಿಂದ ನೋಡುವುದನ್ನು ಕಲಿಯಲಿ ಎಂದು ಮುಖ್ಯಮಂತ್ರಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News