ಪ್ರಧಾನಿ ಒಂದಲ್ಲ ನೂರು ಬಾರಿ ರಾಜ್ಯಕ್ಕೆ ಬರಲಿ, ನಮಗೇನೂ ತೊಂದರೆ ಇಲ್ಲ: ಸಿದ್ದರಾಮಯ್ಯ

Update: 2018-02-13 10:49 GMT

ಬೆಂಗಳೂರು, ಫೆ.13: ಪ್ರಧಾನಿ ನರೇಂದ್ರ ಮೋದಿ ಒಂದಲ್ಲ ನೂರು ಬಾರಿ ರಾಜ್ಯಕ್ಕೆ ಬರಲಿ.‌ ಅದರಿಂದ‌ ನಮಗೇನೂ ತೊಂದರೆ ಇಲ್ಲ. ಅವರದ್ದು ಒಂದು ರಾಜಕೀಯ ಪಕ್ಷ. ಹೀಗಾಗಿ ಬರುತ್ತಾರೆ. ಕಳೆದ ಬಾರಿ ಅವರು ಬೆಂಗಳೂರಿಗೆ ಬಂದಾಗ ನಮ್ಮದು ಹತ್ತು ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಮುಂದಿನ ಬಾರಿ ಬರುವಾಗ ಅದಕ್ಕೆ ದಾಖಲೆ ತರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. 

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಯಾವುದೇ ಕಮಿಷನ್ ವ್ಯವಹಾರ ಇಲ್ಲ. ಅಂತಹ ವ್ಯವಹಾರ ಏನಾದರೂ ನಡೆದಿದ್ದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಆ ಸರ್ಕಾರ ನೂರು ಪರ್ಸೆಂಟ್ ಕಮಿಷನ್ ಸರ್ಕಾರವಾಗಿತ್ತು ಎಂದು ಲೇವಡಿ ಮಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಂಸ ಸೇವಿಸಿ ದೇವಾಲಯಕ್ಕೆ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಆಹಾರ ಪದ್ಧತಿ ಎಂಬುದು ವೈಯಕ್ತಿಕ. ಅದು ಅವರವರಿಗೆ ಸೇರಿದ್ದು. ಇಷ್ಟಕ್ಕೂ ಮಾಂಸ ತಿಂದು ದೇವಾಲಯಕ್ಕೆ ಹೋದರು ಎಂಬುದು ವಿಷಯವೇ ಅಲ್ಲ. ಅದಲ್ಲದೇ, ಯಡಿಯೂರಪ್ಪ ಆರೋಪ ಮಾಡಿರುವಂತೆ ರಾಹುಲ್ ಗಾಂಧಿ ದೇವಾಲಯಕ್ಕೆ ಹೋಗುವ ಮೊದಲು ಮಾಂಸದ ಆಹಾರ ಸೇವನೆ ಮಾಡಿಯೂ ಇಲ್ಲ. ರಾಹುಲ್ ಗಾಂಧಿಯವರೇ  ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. 

ರಾಹುಲ್ ಗಾಂಧಿಯವರ ಎರಡನೇ ಹಂತದ ರಾಜ್ಯ ಪ್ರವಾಸ ಮುಂಬೈ-ಕರ್ನಾಟಕ ಭಾಗದಲ್ಲಿ‌ ಫೆ.24ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಅವರ ಪ್ರವಾಸದಿಂದ ಪಕ್ಷಕ್ಕೆ ಲಾಭವಾಗಲಿದೆ. ರಾಹುಲ್ ಗಾಂಧಿಯವರು ಹೋದ ಕಡೆ ಕಾಂಗ್ರೆಸ್ ಸೋಲುತ್ತದೆ ಎಂಬ ಬಿಜೆಪಿಯವರ ಹೇಳಿಕೆ ಸರಿಯಲ್ಲ. ಹಾಗಾದರೆ ಗುಜರಾತ್ ನಲ್ಲಿ ನಮ್ಮ ಪಕ್ಷ ಗೆಲುವಿನ ಸಮೀಪ ಹೋಗಲು ಹೇಗೆ ಸಾಧ್ಯವಾಯಿತು ? ಅವರು‌ ಎಐಸಿಸಿ ಅಧ್ಯಕ್ಷರಾದ ‌ಬಳಿಕ ನಮಗೆ ಇನ್ನೂ ಹೆಚ್ವಿನ ಬಲ ಬಂದಿದೆ ಎಂದರು.

ದೇಶದಲ್ಲಿ ನಾನು ಆರನೇ ಶ್ರೀಮಂತ ಮುಖ್ಯಮಂತ್ರಿ, 13 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದೇನೆ ಎಂದು ಸಮೀಕ್ಷೆಯೊಂದು ಹೇಳಿದೆ. ಅದು ನಮ್ಮ ಅವಿಭಕ್ತ ಕುಟುಂಬದ ಆಸ್ತಿಯ ಲೆಕ್ಕ. ಕಳೆದ ಚುನಾವಣೆಯಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ, ತಮ್ಮಂದಿರ ಎಲ್ಲಾ ಅಸ್ತಿಯ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೆ. ನನ್ನ ಅಣ್ಣನ ನಿಧನದ ಬಳಿಕ ನಾನೇ ಮನೆಯ ಯಜನಮಾನನಾಗಿದ್ದೆ. ಈಗ ಕುಟುಂಬದ ಆಸ್ತಿಯನ್ನು ವಿಭಜಿಸಲಾಗಿದೆ.‌ ಜೊತೆಗೆ ಆರೂವರೆ ಕೋಟಿ ಜನರು ನನ್ನ ಆಸ್ತಿಯಾಗಿದ್ದಾರೆ ಎಂದರು.

ಮಹಾದಾಯಿ ವಿಚಾರದಲ್ಲಿ  ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದೆ. ನಾವು ಯಾವುದೇ ಕಾಮಗಾರಿ ನಡೆಸಿಲ್ಲ, ನ್ಯಾಯಾಂಗ ನಿಂದನೆ ಆಗಿಲ್ಲ ಎಂದು ನಾವು ಮೊದಲೇ ಹೇಳಿದ್ದರೂ ಕೇಳಲಿಲ್ಲ. ಈಗ ಅವರಿಗೆ ಗೊತ್ತಾಗಿ ಅವರಾಗಿಯೇ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News