ರಾಜಕೀಯವಾಗಿ ಈಶ್ವರಪ್ಪಗೆ ತೊಂದರೆಯಾದರೆ ಮತ್ತೆ ಹೋರಾಟ: ಬಿಜೆಪಿಗೆ ರಾಯಣ್ಣ ಬ್ರಿಗೇಡ್‌ ಎಚ್ಚರಿಕೆ

Update: 2018-02-15 07:53 GMT

ಬೆಂಗಳೂರು, ಫೆ.15: ರಾಜಕೀಯವಾಗಿ ಕೆ.ಎಸ್. ಈಶ್ವರಪ್ಪಗೆ ತೊಂದರೆಯಾದರೆ ರಾಯಣ್ಣ ಬ್ರಿಗೇಡ್ ಮತ್ತೆ ಗರ್ಜಿಸಲಿದೆ ಎಂದು ಬ್ರಿಗೇಡ್ ಯುವ ಘಟಕದ ಸಂಚಾಲಕ ದೊಡ್ಡಯ್ಯ ಆನೇಕಲ್ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

 ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ನಿವಾಸದಲ್ಲಿ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಈಶ್ವರಪ್ಪಗೆ ಟಿಕೆಟ್ ನೀಡಬಾರದೆಂದು ಯಡಿಯೂರಪ್ಪರ ಬೆಂಬಲಿಗರು ಒತ್ತಾಯಿಸಿದ್ದರು. ಈಶ್ವರಪ್ಪಗೆ ಟಿಕೆಟ್ ನೀಡಿದರೆ ಶಿವಮೊಗ್ಗದಲ್ಲಿ ಬಿಜೆಪಿಗೆ ಸೋಲು ಖಚಿತ. ಅವರ ಬದಲಿಗೆ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನ ಕುಮಾರ್ ವಿರುದ್ಧ ಅಲ್ಪ ಮತಗಳಿಂದ ಸೋತಿರುವ ರುದ್ರೇಗೌಡರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಪಡಿಸಲಾಗಿತ್ತು.

ಈಶ್ವರಪ್ಪಗೆ ಟಿಕೆಟ್ ಕೈತಪ್ಪಬಹುದು ಎಂಬ ಸುಳಿವು ಪಡೆದ ರಾಯಣ್ಣ ಬ್ರಿಗೇಡ್ ಸಾಮಾಜಿಕ ಜಾಲತಾಣದಲ್ಲಿ ಈಶ್ವರಪ್ಪಗೆ ಟಿಕೆಟ್ ಕೈತಪ್ಪಿದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.  ಹಿರಿಯ ನಾಯಕ ಈಶ್ವರಪ್ಪರನ್ನು ಕಡೆಗಣಿಸಿದರೆ ಬಿಜೆಪಿ ಈ ಬಾರಿ ನೂರೈವತ್ತಲ್ಲ 50 ಸೀಟುಗಳನ್ನು ಗೆಲ್ಲುವುದಿಲ್ಲ ಎಂದು ಬ್ರಿಗೇಡ್ ಸದಸ್ಯರು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News