ವಿಧಾನಸಭೆಯಲ್ಲಿ ಹಲವು ವಿಧೇಯಕಗಳಿಗೆ ಅಂಗೀಕಾರ

Update: 2018-02-21 13:08 GMT

ಬೆಂಗಳೂರು, ಫೆ.21: 2018ನೆ ಸಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ವಿಧೇಯಕ, ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಆಧಾರ್(ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ಲಭ್ಯವಾಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯವಿಧೇಯಕವನ್ನು ಮಂಡಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶೈಕ್ಷಣಿಕ ಸೊಸೈಟಿಯು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದೆ ಬಂದಿದೆ ಎಂದರು.

ವಿಜ್ಞಾನ, ಗಣಕವಿಜ್ಞಾನ, ಮಾಹಿತಿ ತಂತ್ರಜ್ಞಾನ, ಇಂಜಿನಿಯರಿಂಗ್, ತಾಂತ್ರಿಕ ಕೋರ್ಸ್, ವೈದ್ಯಕೀಯ ವಿಜ್ಞಾನ ಸೇರಿದಂತೆ ಹಲವು ಕೋರ್ಸ್‌ಗಳ ಬಗ್ಗೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಉದ್ದೇಶಿಸಿದೆ. ಇದೊಂದು ಪ್ರತಿಷ್ಠಿತಶೈಕ್ಷಣಿಕ ಸೊಸೈಟಿಯಾಗಿದ್ದು, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ. ಆದುದರಿಂದ, ಈ ವಿಧೇಯಕಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ನಮ್ಮ ಸರಕಾರದ ಅವಧಿಯಲ್ಲಿ ಖಾಸಗಿ ವಿವಿಗಳ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದಾಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ನವರು ವಿರೋಧ ಮಾಡಿದರು. ಆದರೆ, ಈಗ ಅವರೇ ಖಾಸಗಿ ವಿವಿಗಳ ವಿಧೇಯಕಗಳನ್ನು ತರುತ್ತಿದ್ದಾರೆ. ವಿಪಕ್ಷದಲ್ಲಿದ್ದಾಗ ಒಂದು ರೀತಿ, ಆಡಳಿತ ಪಕ್ಷದಲ್ಲಿದ್ದಾಗ ಒಂದು ರೀತಿ ವರ್ತಿಸಬಾರದು ಎಂದರು.

ಬಿಜೆಪಿ ಸದಸ್ಯ ಎಸ್.ಸುರೇಶ್‌ಕುಮಾರ್ ಮಾತನಾಡಿ, ರಾಜ್ಯದ 9 ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾಗಲಿ, ಉನ್ನತ ಶಿಕ್ಷಣ ಸಚಿವರಾಗಲಿ ಭಾಗವಹಿಸಲಿಲ್ಲ. ರ್ಯಾಂಕ್ ಪಡೆದ ಮಕ್ಕಳಿಗೆ ಚಿನ್ನದ ಪದಕವನ್ನು ನೀಡಲಿಲ್ಲ. ಅಷ್ಟೇ ಅಲ್ಲ ಸುಮಾರು 400 ಪ್ರಥಮ ದರ್ಜೆ ಕಾಲೇಜುಗಳಿಗೆ ಖಾಯಂ ಪ್ರಾಂಶುಪಾಲರೇ ಇಲ್ಲ. ಸರಕಾರ ಈ ಬಗ್ಗೆಯೂ ಗಮನ ಹರಿಸಬೇಕು ಎಂದರು. ವಿಧೇಯಕದ ಮೇಲೆ ಕೆಜೆಪಿ ಸದಸ್ಯ ಬಿ.ಆರ್.ಪಾಟೀಲ್ ಸೇರಿದಂತೆ ಇನ್ನಿತರರು ಚರ್ಚೆ ನಡೆಸಿದ ಬಳಿಕ ಅದಕ್ಕೆ ಅಂಗೀಕಾರ ಸಿಕ್ಕಿತ್ತು.

ಖಾಜಾಬಂದಾ ನವಾಜ್ ಶಿಕ್ಷಣ ಸಂಘವು ವಿಜ್ಞಾನ, ಇಂಜಿನಿಯರಿಂಗ್, ತಂತ್ರಜ್ಞಾನ, ವಾಣಿಜ್ಯ, ಅರ್ಥಶಾಸ್ತ್ರ, ಕಾನೂನು, ವೈದ್ಯಕೀಯ, ಔಷಧ, ಆರೋಗ್ಯ, ರಕ್ಷಣಾಕ್ಷೇತ್ರದ ಹಲವು ಕೋರ್ಸ್‌ಗಳನ್ನು ಆರಂಭಿಸಲು ಖಾಸಗಿ ವಿವಿ ಆರಂಭಿಸಲು ಉದ್ದೇಶಿಸಿದೆ. ಉನ್ನತ ಶಿಕ್ಷಣದ ಪ್ರಮಾಣವನ್ನು ಹೆಚ್ಚಿಸಲು ಇದರಿಂದ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಧೇಯಕಕ್ಕೆ ಅನುಮೋದನೆ ನೀಡುವಂತೆ ಬಸವರಾಜ ರಾಯರಡ್ಡಿ ಕೋರಿದಾಗ, ವಿಧಾನಸಭೆಯು ಯಾವುದೆ ಚರ್ಚೆ ಇಲ್ಲದೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ, ಕರ್ನಾಟಕ ಆಧಾರ್ (ಹಣಕಾಸು, ಇತರೆ ಸಬ್ಸಿಡಿಗಳು, ಪ್ರಯೋಜನಗಳು, ಸೇವೆಗಳ ಉದ್ದೇಶಿತ ವಿತರಣೆ) ವಿಧೇಯಕಕ್ಕೂ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿತು.
ವಿಧೇಯಕದ ಉದ್ದೇಶವನ್ನು ವಿವರಿಸಿದ ಎಚ್.ಕೆ.ಪಾಟೀಲ್. ಸರಕಾರದ ವಿವಿಧ ರೀತಿಯ ಸಬ್ಸಿಡಿ, ಸೇವೆಗಳು, ಪ್ರಯೋಜನಗಳು, ಅನುದಾನಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ನೀಡಲು ಈ ವಿಧೇಯಕ ಸಹಕಾರಿಯಾಗಲಿದೆ. ಸೇವೆಗಳ ಉತ್ತಮ ನಿರ್ವಹಣೆ, ದಕ್ಷತೆ, ಪಾರದರ್ಶಕತೆಗೂ ಅವಕಾಶ ಕಲ್ಪಿಸಲಿದೆ. ಆದುದರಿಂದ, ಈ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಕೋರಿದರು.

ಆಧಾರ್‌ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಒಂದು ಕಾಯ್ದೆ ಮಾಡಿದೆ. ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿಯೂ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಎಚ್.ಕೆ.ಪಾಟೀಲ್, ಈಗಾಗಲೆ ರಾಜ್ಯದಲ್ಲಿ ಸುಮಾರು ಶೇ.96ರಷ್ಟು ಮಂದಿಗೆ ಆಧಾರ್ ನೋಂದಣಿಯಾಗಿದೆ. ಇನ್ನುಳಿದ ಶೇ.4ರಷ್ಟು ಮಂದಿಗೂ ಆಧಾರ್ ಸಂಖ್ಯೆ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಆನಂತರ, ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧೇಯಕವನ್ನು ಸಭೆಯ ಮತಕ್ಕೆ ಹಾಕಿದರು. ಅಲ್ಲಿ, ವಿಧೇಯಕಕ್ಕೆ ಸರ್ವಾನುಮತದ ಅಂಗೀಕಾರ ಸಿಕ್ಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News