ನಮ್ಮ ಸಂಸ್ಕೃತಿಯ ಅಸ್ಮಿತೆಗೆ ಧಕ್ಕೆ ಎದುರಾಗಿದೆ: ಎಂ.ಚಿದಾನಂದಮೂರ್ತಿ

Update: 2018-03-06 15:34 GMT

ಬೆಂಗಳೂರು, ಮಾ.6: ಆಧುನೀಕರಣದ ಪ್ರಭಾವದಿಂದಾಗಿ ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯ ಅಸ್ತಿತ್ವ ಹಾಗೂ ಅಸ್ಮಿತೆಗೆ ಧಕ್ಕೆ ಎದುರಾಗಿದ್ದು, ಅದನ್ನು ನಿವಾರಣೆ ಮಾಡಲು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದ್ದಾರೆ.

ನಗರದ ಕಸಾಪದಲ್ಲಿ ಕರುನಾಡ ಸಿರಿ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಇತ್ತೀಚಿನ ಬೆಳವಣಿಗೆಗಳಿಂದ ಕರ್ನಾಟಕ ಪರಂಪರೆಗೆ ಮಾರಕ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನೀಕತೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ದಾಳಿ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯೊಳಗೆ ಹಾಗೂ ಹೊರಗೂ ನಮ್ಮತನ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡ ನಾಡಿನ ಪರಂಪರೆ ಬಹಳಷ್ಟು ವಿಶಾಲವಾಗಿದ್ದು, ಅದರ ಕುರಿತು ಎಲ್ಲರಿಗೂ ಅರಿವು ಮೂಡಿಸಬೇಕು. ಬೇಲೂರು, ಹಳೇಬೀಡು, ಐಹೊಳೆ, ಬಾದಾಮಿ, ಪಟ್ಟದಕಲ್ಲು, ಹಂಪಿ, ಶ್ರವಣಬೆಳಗೊಳ ಸೇರಿದಂತೆ ಕರ್ನಾಟಕದಲ್ಲಿ ಹಲವಾರು ಭವ್ಯ ಪರಂಪರೆಯನ್ನು ಸೂಚಿಸುವ ಸ್ಥಳಗಳಿವೆ. ಆದರೆ, ಎಲ್ಲ ಸ್ಥಳಗಳಿಗೂ ಭೇಟಿ ನೀಡುವ ಜನರು ಕೇವಲ ಹೊರಗಿನಿಂದ ನೋಡುತ್ತಿದ್ದಾರೆ. ಬದಲಿಗೆ, ಎಲ್ಲರೂ ಒಳಗಣ್ಣಿನಿಂದ ನಮ್ಮ ಪರಂಪರೆಯನ್ನು ವೀಕ್ಷಣೆ ಮಾಡಬೇಕು. ಅದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಹಾಗೂ ಅದರ ಸಂರಕ್ಷಣೆಗೆ ಅಗತ್ಯ ನೆರವಾಗಬೇಕು ಎಂದು ಅವರು ನುಡಿದರು.

ಬೆಂಗಳೂರು ನಗರದಲ್ಲಿ ರಾಮಕೃಷ್ಣ ಆಶ್ರಮವಿದೆ ಎಂದು ಅಲ್ಲಿಗೆ ಭೇಟಿ ನೀಡಿದರೆ ಸಾಕಾಗುವುದಿಲ್ಲ. ಅದರ ಹಿಂದಿನ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದ ಅವರು, ಸ್ವಾಮಿ ವಿವೇಕಾನಂದರು ದಕ್ಷಿಣ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೆಳಗಾವಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ತಂಗಿದ್ದರು ಎಂಬುದು ಬಹಳಷ್ಟು ಜನರಿಗೆ ಇದುವರೆಗೂ ತಿಳಿದಿಲ್ಲ. ಹೀಗಾಗಿ, ವಾಸ್ತವ ಅಂಶಗಳ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು. ನಮ್ಮ ಪರಂಪರೆ ಉಳಿಸುವ ಮೂಲಕ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಚಿಂತಕ ಕೆ.ರಾಜ್‌ಕುಮಾರ್ ಮಾತನಾಡಿ, ಪರಂಪರೆ ಎಂಬುದು ಸಹಿಷ್ಣುತೆ ಹಾಗೂ ಸಾಮರಸ್ಯದಲ್ಲಿ ಅಡಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಧರ್ಮ ರಾಜಕಾರಣ ಹೆಚ್ಚಾಗುತ್ತಿದ್ದು, ಜಾತಿ-ಜಾತಿಗಳ ನಡುವೆ ವಿಭಜನೆ ಮಾಡುವ ಮೂಲಕ ಸಾಮರಸ್ಯವನ್ನು ಕದಡಲಾಗುತ್ತಿದೆ. ಮತಬ್ಯಾಂಕ್‌ಗಳನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಜನರನ್ನು ದಿಕ್ಕು ತಪ್ಪಿಸಿ ಸಾಮರಸ್ಯವನ್ನು ಹಾಳು ಮಾಡುವ ಪ್ರಯತ್ನ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇದರಿಂದ ನಮ್ಮ ಪರಂಪರೆ ಅಪಾಯದ ಸ್ಥಿತಿಗೆ ತಲುಪುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮನ್ನಾಳುತ್ತಿರುವ ಸರಕಾರಗಳಿಗೆ ಜನರ ಬಗ್ಗೆ ಕಿಂಚಿತ್ತೂ ಇಚ್ಛಾಶಕ್ತಿಯಿಲ್ಲ. ರಾಜ್ಯ ಸರಕಾರ ನಾಡಗೀತೆಯನ್ನು ಮೊಟಕುಗೊಳಿಸಿದೆ. ಆದರೆ, ಅದನ್ನು ಎಷ್ಟು ಹಾಡಬೇಕು, ಹೇಗೆ ಹಾಡಬೇಕು ಎಂಬುದನ್ನು ಇದುವರೆಗೂ ತಿಳಿಸಿಲ್ಲ. ಅಲ್ಲದೆ, 50 ವರ್ಷಗಳ ಇತಿಹಾಸವುಳ್ಳ ನಾಡಧ್ವಜ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮತ್ತೊಂದು ಕಡೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರಕಾರ ಪಕ್ಕದ ರಾಜ್ಯ ಮಹಾರಾಷ್ಟ್ರದ ಬರ ಪರಿಹಾರಕ್ಕೆ ಹಣ ನೀಡುತ್ತಾರಾದರೂ, ಅದರ ಅರ್ಧದಷ್ಟು ಪಾಲು ಕರ್ನಾಟಕಕ್ಕೆ ನೀಡುವುದಿಲ್ಲ. ಇಂತಹ ರಾಜಕಾರಣಿಗಳಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಯುವುದಾದರೂ ಹೇಗೆ ಎಂದರು.

ರಾಜ್ಯದಲ್ಲಿ 80 ರ ದಶಕದಲ್ಲಿ ಕನ್ನಡ ಚಳವಳಿಗೆ ನೂರಾರು ಜನರು ತಮ್ಮ ಬದುಕನ್ನ ತ್ಯಾಗ ಮಾಡಿದವರಿದ್ದಾರೆ. ಘನತೆ, ಗಂಭೀರ್ಯವನ್ನು ತಂದುಕೊಟ್ಟಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಳವಳಿ ವ್ಯವಹಾರ, ದಂಧೆಯಾಗುತ್ತಿದೆ ಎಂದು ಆರೋಪ ಮಾಡಿದ ಅವರು, ಬಂದ್‌ನಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಅದರಿಂದ ದೇಶದ ಜಿಡಿಪಿಗೆ ಪೆಟ್ಟು ಬೀಳುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತಿ ನಲ್ಲೂರು ಪ್ರಸಾದ್, ಕನ್ನಡ ಸಂಘದ ಮುಖಂಡ ಎಂ.ತಿಮ್ಮಯ್ಯ, ಸಂಘದ ಅಧ್ಯಕ್ಷ ಹನುಮಂತರಾಯಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News