ಡಿಎಸ್ಪಿಗೆ 'ಮುರ್ದಾಬಾದ್' ಹೇಳಿಸಿದರೇ ಕೇಂದ್ರ ಸಚಿವ ಗಿರಿರಾಜ್ ಸಿಂಗ್?

Update: 2018-03-18 16:55 GMT

ಪಾಟ್ನಾ, ಮಾ.18: ಆಕ್ರೋಶ ಭರಿತ ಗುಂಪಿಗೆ ಡಿಎಸ್ಪಿ ವಿರುದ್ಧ ಘೋಷಣೆ ಕೂಗಲು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳುತ್ತಿದ್ದಾರೆ ಎನ್ನಲಾದ ವಿಡಿಯೋ ಒಂದನ್ನು ರಾಷ್ಟ್ರೀಯ ಜನತಾದಳ ಮುಖಂಡ ತೇಜಸ್ವಿ ಯಾದವ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಹಾರದಲ್ಲಿರುವ ತಮ್ಮ ಸರಕಾರದ ವಿರುದ್ಧವೇ ಘೋಷಣೆ ಕೂಗಲು ಗಿರಿರಾಜ್ ಸಿಂಗ್ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದರು ತೇಜಸ್ವಿ ಯಾದವ್, ಮುಖ್ಯಮಂತ್ರಿ ಅಸಹಾಯಕರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.  

"ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ತಮ್ಮದೇ ಸರ್ಕಾರದ ವಿರುದ್ಧ ಗುಂಪಿಗೆ ಪ್ರಚೋದನೆ ನೀಡುತ್ತಿದ್ದಾರೆ. ಡಿಎಸ್ಪಿ ವಿರುದ್ಧ ಘೋಷಣೆ ಕೂಗುವಂತೆ ಗುಂಪಿಗೆ ಸೂಚಿಸಿದ್ದಾರೆ. ನಿತೀಶ್ ಕುಮಾರ್ ಗೃಹ ಖಾತೆಯನ್ನೂ ನಿರ್ವಹಿಸುತ್ತಿದ್ದು, ಗಿರಿರಾಜ್ ಸಿಂಗ್ ಅವರು ಬಹಿರಂಗವಾಗಿ ಬಿಹಾರ ಸಿಎಂ ವಿರುದ್ಧ ಇದ್ದಾರೆ. ನಿತೀಶ್ ಅಸಹಾಯಕರಾಗಿದ್ದು, ಬಿಜೆಪಿ ಇಡೀ ಬಿಹಾರವನ್ನು ನಾಶಮಾಡಲು ಹೊರಟಿದೆ" ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.

ಇಲ್ಲಿನ ದರ್ಬಾಂಗದಲ್ಲಿ ವೃದ್ಧರೊಬ್ಬರ ತಲೆ ಕಡಿದ ಪ್ರಕರಣಕ್ಕೆ ಸಂಬಂಧಿಸಿ ಸುಶೀಲ್ ಕುಮಾರ್ ಮೋದಿ ಹಾಗು ಗಿರಿರಾಜ್ ಸಿಂಗ್ ತದ್ವಿರುದ್ಧ ಹೇಳಿಕೆ ನೀಡಿದ್ದರು. ನಗರದ ವೃತ್ತಕ್ಕೆ ಮೋದಿ ಚೌಕ್ ಎಂದು ಹೆಸರಿಟ್ಟದ್ದೇ ಈ ಕೊಲೆಗೆ ಕಾರಣ ಎಂದು ಗಿರಿರಾಜ್ ಸಿಂಗ್ ಹೇಳಿದ್ದರೆ, ಸುಶೀಲ್ ಕುಮಾರ್ ಮೋದಿ ಈ ಆರೋಪಗಳೆಲ್ಲಾ ಸುಳ್ಳು. ಭೂವಿವಾದವೇ ಈ ಕೊಲೆಗೆ ಕಾರಣ ಎಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News