ನಟಿ ಜಯಂತಿ ಆರೋಗ್ಯ ಸ್ಥಿತಿ ಗಂಭೀರ

Update: 2018-03-26 14:07 GMT

ಬೆಂಗಳೂರು, ಮಾ.26: ಹಿರಿಯ ಬಹುಭಾಷಾ ನಟಿ ಜಯಂತಿ ತೀವ್ರ ಅಸ್ವಸ್ಥಗೊಂಡು ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಜಯಂತಿ ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆಗೆ ಈಡಾದರು. ತಕ್ಷಣ ಅವರನ್ನು ಸಿಟಿಜನ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ವೈದ್ಯರ ಸಲಹೆ ಮೇರೆಗೆ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಜಯಂತಿ ಪುತ್ರ ಕೃಷ್ಣಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು

ವಿಕ್ರಮ್ ಅಸ್ಪತ್ರೆಯ ವೈದ್ಯ ಡಾ.ಸತೀಶ್ ನೇತೃತ್ವದಲ್ಲಿ ನಟಿ ಜಯಂತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ನಟಿ ಜಯಂತಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ 24ಗಂಟೆಯವರೆಗೆ ಏನನ್ನು ಹೇಳಲಾಗುವುದಿಲ್ಲವೆಂದು ವೈದ್ಯ ಡಾ.ಸತೀಶ್ ತಿಳಿಸಿದರು.

ನಟಿ ಜಯಂತಿಯ ಅನಾರೋಗ್ಯದ ಮಾಹಿತಿ ತಿಳಿದ ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಧಾವಿಸಿ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದಾರೆ. ನಟಿ ಜಯಂತಿಯ ಸಾವಿರಾರು ಅಭಿಮಾನಿಗಳು ಆಸ್ಪತ್ರೆಯಲ್ಲಿ ಮುಂಭಾಗ ನಿಂತು ಶೋಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News