ಈಶ್ವರಪ್ಪ ವಿರುದ್ಧ ಅಮಿತ್ ಶಾ ಅಸಮಾಧಾನ
ಬೆಂಗಳೂರು, ಎ.4: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಮಂಗಳವಾರ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಬೃಹತ್ ಹಿಂದುಳಿದ ಸಮಾವೇಶ ಏರ್ಪಡಿಸಲಾಗಿತ್ತು. ಸುಮಾರು 1 ಲಕ್ಷ ಜನರು ಸೇರುತ್ತಾರೆಂಬ ನಿರೀಕ್ಷೆಯಲ್ಲಿ ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ,ಕೇವಲ 5 ಸಾವಿರ ಜನರು ಆಗಮಿಸಿದ್ದು, ಶಾ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ್ದರು.
ಸಮಾವೇಶದಲ್ಲಿ ಜನ ಸೇರಿಸಲು ಸಾಧ್ಯವಾಗದ್ದಕ್ಕೆ ಗರಂ ಆಗಿದ್ದ ಶಾ ಕಾಗಿನೆಲೆ ಕನಕ ಗುರು ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ಭೇಟಿ ಸಾಧ್ಯವಾಗದಿರುವುದಕ್ಕೆ ಹೆಚ್ಚು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ನಿರಂಜನಾನಂದಪುರಿ ಸ್ವಾಮೀಜಿ ಮಂಗಳವಾರ ಶಾ ಭೇಟಿ ಮಾಡದೇ ದಾವಣಗೆರೆಗೆ ತೆರಳಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕಾಗಿನೆಲೆಗೆ ಭೇಟಿ ನೀಡಿದ್ದ ಶಾ ಅವರನ್ನು ಕಿರಿಯ ಸ್ವಾಮೀಜಿ ಸ್ವಾಗತಿಸಿದ್ದರು.
‘‘ಪೀಠಾಧಿಪತಿಯನ್ನು ಭೇಟಿ ಮಾಡಲು ಸಾಧ್ಯವಾಗದ ಮೇಲೆ ಕಾಗಿನೆಲೆಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದೇಕೆ?ಬಿಜೆಪಿ ಕುರುಬರ ವಿರುದ್ಧವಿಲ್ಲ ಎಂದು ಸ್ವಾಮೀಜಿಗೆ ಮನವರಿಕೆ ಮಾಡಬೇಕು. ಮತ್ತೊಮ್ಮೆ ಸ್ವಾಮೀಜಿ ಭೇಟಿಗೆ ವ್ಯವಸ್ಥೆ ಮಾಡಬೇಕು. ರಾಹುಲ್ ಗಾಂಧಿಗೆ ಸ್ವಾಮೀಜಿ ಭೇಟಿ ಮಾಡಲು ಸಾಧ್ಯವಾಗಿದ್ದು ಹೇಗೆ. ರಾಹುಲ್ಗೆ ಸಾಧ್ಯವಾಗಿದ್ದು, ನಮಗೇಕೆ ಸಾಧ್ಯವಿಲ್ಲ? ಎಂದು ಈಶ್ವರಪ್ಪರನ್ನು ಶಾ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.