ಬೆಂಗಳೂರು: ಇಬ್ಬರು ಸರಗಳ್ಳತನ ಆರೋಪಿಗಳ ಬಂಧನ

Update: 2018-04-14 18:08 GMT

ಬೆಂಗಳೂರು, ಎ.14: ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಸಂಚರಿಸುವ ಮಹಿಳೆಯನ್ನು ಹಿಂಬಾಲಿಸಿ ಸರಗಳನ್ನು ಅಪಹರಿಸುತ್ತಿದ್ದ ಹಾಗೂ ಬೀಗ ಹಾಕಿರುವ ಮನೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫರ್ಮಾನ್ ಅಲಿ (25) ಮತ್ತು ಬಾಕರ್ ಅಲಿ (30) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: 2017ರ ಡಿ.19ರಂದು ರಾತ್ರಿ 1:30ರ ಸುಮಾರಿಗೆ ರೆಹನಾ ಬೇಗಂ ಎಂಬುವವರು ತಮ್ಮ ಸಹೋದರರ ಜತೆ ಸಾರಾಯಿ ಪಾಳ್ಯದ ತೂಬಾ ಲೇಔಟ್ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು, ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ ಕಳವು ಮಾಡಿದ್ದರು.

ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು, ಈ ಇಬ್ಬರು ಆರೋಪಿಗಳನ್ನು ಬಂಧಿಸಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 22 ಪ್ರಕರಣಗಳನ್ನು ಪತ್ತೆಹಚ್ಚಿ 1.83 ಕೆಜಿ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 31.92 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಈ ಇಬ್ಬರು ಆರೋಪಿಗಳು ಬೈಕ್ ಕಳವು ಮಾಡಿಕೊಂಡು ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವ ಮಹಿಳೆಯರನ್ನು ಗುರುತಿಸಿ ಅವರ ಸರಗಳನ್ನು ಅಪಹರಿಸುತ್ತಿದ್ದರಲ್ಲದೆ ಬೀಗ ಹಾಕಿರುವ ಮನೆಗಳ ಕಳ್ಳತನ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳ ಬಂಧನದಿಂದ ಹೆಣ್ಣೂರು ಠಾಣೆಯ 5, ಇಂದಿರಾನಗರ 4, ರಾಮಮೂರ್ತಿನಗರ 3, ವಿದ್ಯಾರಣ್ಯಪುರ 3, ಬಾಗಲಗುಂಟೆ 2, ಕೊತ್ತನೂರು, ಬಾಣಸವಾಡಿ, ಡಿಜೆ ಹಳ್ಳಿ ಠಾಣೆಯ ತಲಾ ಒಂದೊಂದು ಪ್ರಕರಣಗಳು, ಪುಲಕೇಶಿನಗರ ಠಾಣೆಯ 1, ಬೈಯ್ಯಪ್ಪನಹಳ್ಳಿ ಠಾಣೆಯ 1 ಪ್ರಕರಣ ಸೇರಿ ಒಟ್ಟು 22 ಪ್ರಕರಣಗಳು ಪತ್ತೆಯಾದಂತಾಗಿವೆ. ಪ್ರಕರಣವನ್ನು ಭೇದಿಸಿದ ಪೂರ್ವ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News