ಬೆಂಗಳೂರು: ಗೂಂಡಾ ಕಾಯ್ದೆಯಡಿ ವ್ಯಕ್ತಿಯ ಬಂಧನ
Update: 2018-04-14 18:26 GMT
ಬೆಂಗಳೂರು, ಎ.14: ಕೊಲೆ ಪ್ರಕರಣ ಸಂಬಂಧ ರೌಡಿ ಸೂರ್ಯ (37) ಎಂಬಾತನನ್ನು ಗೂಂಡಾ ಕಾಯ್ದೆಯಡಿ ಇಲ್ಲಿನ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೂರ್ಯ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 13 ಪ್ರಕರಣಗಳು ದಾಖಲಾಗಿದ್ದು, ತಾವರೆಕೆರೆ ಠಾಣೆಯಲ್ಲಿ 2, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಸೇರಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಹಲವಾರು ಬಾರಿ ಈತನಿಗೆ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಈತ ತನ್ನ ರೌಡಿ ಚಟುವಟಿಕೆಗಳನ್ನು ಮುಂದುವರಿಸಿದ್ದನು.
ಸಾಕ್ಷಿದಾರರಿಗೆ ಹಾಗೂ ದೂರು ಕೊಟ್ಟವರಿಗೆ ಬೆದರಿಕೆ ಒಡ್ಡುತ್ತಿದ್ದುದರಿಂದ ಪಶ್ಚಿಮ ಭಾಗದಲ್ಲಿ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಗೂಂಡಾ ಕಾಯ್ದೆಯಡಿ ಈತನನ್ನು ಬಂಧಿಸಲು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಂಗೇರಿ ಠಾಣೆ ಪೊಲೀಸರು ಗೂಂಡಾಕಾಯ್ದೆಯಡಿ ಈತನನ್ನು ಬಂಧಿಸಿದ್ದಾರೆ.