ಸಿನೆಮಾ ನಿರ್ಮಾಪಕನ ಸಂಬಂಧಿಯ ಕೊಲೆ: ಇಬ್ಬರ ಬಂಧನ

Update: 2018-04-19 18:32 GMT

ಬೆಂಗಳೂರು, ಎ.19: ಅಂಜನಿಪುತ್ರ ಸಿನಿಮಾ ನಿರ್ಮಾಪಕ ಕುಮಾರ್ ಅವರ ಸಹೋದರಿ ಪುತ್ರ ರಾಹುಲ್ ಕೊಲೆಗೈದ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಇಲ್ಲಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಗಂಗೊಂಡನಹಳ್ಳಿಯ ಸದ್ದಾಂ ಹುಸೇನ್(21), ಮುಹಮ್ಮದ್ ಶಫೀ(20) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ಕುಮಾರ್ ಅವರ ಸಹೋದರಿ ಪುತ್ರ ರಾಹುಲ್, ಎ.13 ರಂದು ರಾತ್ರಿ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿಗಳು ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದರು. ಮೊಬೈಲ್ ಗಟ್ಟಿಯಾಗಿ ಹಿಡಿದುಕೊಂಡ ರಾಹುಲ್ ಆರೋಪಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದು, ಇದರಿಂದ ರೊಚ್ಚಿಗೆದ್ದ ಇಬ್ಬರು ರಾಹುಲ್ ಕುತ್ತಿಗೆಗೆ ಚಾಕುವಿನಿಂದ ಇರಿದು ಮೊಬೈಲ್ ಕಸಿದು ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಾಹುಲ್ ಮೊಬೈಲ್ ಟವರ್ ಸಂಪರ್ಕ ಆಧರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧಿತರು ಚಂದ್ರಾ ಲೇಔಟ್ ಹಾಗೂ ವಿಜಯನಗರದಲ್ಲಿ ಡಕಾಯತಿ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News