ತೈಲ ಬೆಲೆ ನಿಯಂತ್ರಿಸಲು ಅಬಕಾರಿ ಸುಂಕ ಕಡಿತಕ್ಕೆ ನಿರ್ಧರಿಸಿಲ್ಲ: ಸರಕಾರ

Update: 2018-04-23 16:21 GMT

ಹೊಸದಿಲ್ಲಿ, ಎ.23: ಏರುತ್ತಿರುವ ತೈಲ ದರವನ್ನು ನಿಯಂತ್ರಿಸಲು ಅಬಕಾರಿ ಸುಂಕ ಕಡಿತಗೊಳಿಸುವ ಬಗ್ಗೆ ಸರಕಾರ ತುರ್ತು ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ವಿತ್ತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕದಲ್ಲಿ ಒಂದು ರೂಪಾಯಿ ಕಡಿತವಾದರೂ ಕೇಂದ್ರ ಸರಕಾರದ ಮೇಲೆ ವಾರ್ಷಿಕವಾಗಿ 13,000 ಕೋಟಿ ರೂ.ಗಳ ಹೊಡೆತ ಬೀಳುತ್ತದೆ. ಆದ್ದರಿಂದ ಅಬಕಾರಿ ಸುಂಕ ಕಡಿತವಾದರೆ ಇಳಿಕೆಯ ಹಾದಿಯಲ್ಲಿ ಸಾಗುತ್ತಿರುವ ವಿತ್ತೀಯ ಕೊರತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು . 2018-19ರ ಸಾಲಿಗೆ ವಿತ್ತೀಯ ಕೊರತೆಯ ಗುರಿ ಜಿಡಿಪಿಯ ಶೇ.3.3 ಆಗಿದ್ದು ಸದ್ಯಕ್ಕೆ ಇದು ಅಧಿಕಗೊಳ್ಳಲು ಸರಕಾರ ಬಯಸದು ಎಂದು ಅಧಿಕಾರಿ ತಿಳಿಸಿದ್ದಾರೆ.

ಹಾಲಿ ಹಣದುಬ್ಬರದ ಪ್ರಮಾಣದ ಬಗ್ಗೆ ಸರಕಾರಕ್ಕೆ ಹೆಚ್ಚಿನ ಆತಂಕವಿಲ್ಲ. ಸಾರಿಗೆ ವೆಚ್ಚ ಹೆಚ್ಚಾಗದಂತೆ ಹಾಗೂ ಸರಕುಗಳ ದರದ ಮೇಲೆ ಹೆಚ್ಚಿನ ಪ್ರಭಾವ ಬೀರದಂತೆ ಖಾತರಿ ಪಡಿಸಿಕೊಳ್ಳಬೇಕಿದೆ. ತೈಲ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಕಡಿತವಾದರೆ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎಂದು ಅವರು ತಿಳಿಸಿದ್ದಾರೆ. ತೈಲ ಬೆಲೆಗಳ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಬಗ್ಗೆ ಪೆಟ್ರೋಲಿಯಂ ಸಚಿವಾಲಯ ಅಧಿಕೃತವಾಗಿ ಕೋರಿಕೆ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ. 2014ರ ನವೆಂಬರ್‌ನಿಂದ 2016ರ ಜನವರಿಯವರೆಗೆ ಕೇಂದ್ರ ಸರಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಆದರೆ ಕೇವಲ ಒಂದು ಬಾರಿ ಮಾತ್ರ, ಕಳೆದ ಅಕ್ಟೋಬರ್‌ನಲ್ಲಿ ತೆರಿಗೆ ದರದಲ್ಲಿ 2 ರೂಪಾಯಿ ಕಡಿತ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News