ಅಮರಾವತಿ ಚಂದ್ರಶೇಖರ್ ವಿರುದ್ಧ ಅಂಬರೀಶ್ ಆಕ್ರೋಶ

Update: 2018-04-23 17:06 GMT

ಬೆಂಗಳೂರು, ಎ.23: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ಇನ್ನೂ ಮೌನ ತಾಳಿರುವ ಮಾಜಿ ಸಚಿವ ಅಂಬರೀಶ್ ನಡೆ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಇದೇ ವೇಳೆ ಅಣ್ಣ ಸ್ಪರ್ಧಿಸದಿದ್ದರೆ ನಾನೇ ಮಂಡ್ಯದಿಂದ ಕಣಕ್ಕಿಳಿಯಲಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿರುವ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ಅಂಬರೀಶ್ ತೀವ್ರ ಆಕ್ರೋಶಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಸ್ಪರ್ಧೆಗೆ ಸಂಬಂಧಿಸಿದಂತೆ ಮೂಡಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಮಂಗಳವಾರ ಬೆಳಗ್ಗೆ 10.30ಕ್ಕೆ ನಗರದ ಗಾಲ್ಫ್‌ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದಿರುವ ಅಂಬರೀಶ್, ತಮ್ಮ ಮುಂದಿನ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟಣೆ ನೀಡಲಿದ್ದಾರೆ ಎನ್ನಲಾಗಿದೆ.

'ಅಣ್ಣ, ನಿನಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ನೀನೆ ಬಂದು ಸ್ಪರ್ಧೆ ಮಾಡಬೇಕು. ಇಲ್ಲದಿದ್ದರೆ, ಆಕಾಂಕ್ಷಿಗಳಾಗಿರುವ ನಮ್ಮ ಪೈಕಿ ಯಾರ ಹೆಸರನ್ನು ಹೇಳುತ್ತಿಯೋ ಅವರೇ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ನಾನು ಸ್ಪರ್ಧಿಸಲು ಆಸಕ್ತನಾಗಿದ್ದೇನೆ ಎಂದು ಅಮರಾವತಿ ಚಂದ್ರಶೇಖರ್ ಹೇಳಿದ ಮಾತು ಅಂಬರೀಶ್‌ರನ್ನು ಕೆರಳಿಸಿದೆ ಎಂದು ತಿಳಿದು ಬಂದಿದೆ.

ನಾನು ಯಾರ ಹೆಸರನ್ನೂ ಸೂಚಿಸುವುದಿಲ್ಲ. ಇಂತಹವರಿಗೆ ಟಿಕೆಟ್ ಕೊಡಿ ಎಂದು ನಾನು ಏಕೆ ಕೇಳಲಿ, ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅಂಬರೀಶ್ ಎಂದು ಹೇಳಿದ್ದಾರೆ ಎನ್ನಲಾಗಿದೆ.

ತರಾಟೆ: 'ಊರು ತುಂಬ ಅಂಬರೀಶ್ ನನ್ನನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿದ್ದಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದೀಯಾ. ಇವತ್ತು ಬೆಳಗ್ಗೆ ಕೊರಟಗೆರೆಗೆ ಹೋಗಿ ಪರಮೇಶ್ವರ್ ಅವರ ಬಳಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ನನಗೆ ಮಂಡ್ಯ ಟಿಕೆಟ್ ಕೊಡಿ ಎಂದು ಕೇಳಿದ್ದೀಯಾ. ಡಿ.ಕೆ.ಶಿವಕುಮಾರ್ ಬಳಿ ಹೋಗಿಯೂ ಇದನ್ನೆ ಹೇಳಿದ್ದೀಯಾ. ನಾನು ಯಾವಾಗ ನಿನಗೆ ಚುನಾವಣೆಯಲ್ಲಿ ನಿಲ್ಲೋಕೆ ಹೇಳಿದ್ದೆ' ಎಂದು ಅಮರಾವತಿ ಚಂದ್ರಶೇಖರ್‌ಗೆ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News