ಜಾನಪದ ಪರಂಪರೆಗೆ ಮರುಳಬೇಕು: ಡಾ.ಬಂಜಗೆರೆ ಜಯಪ್ರಕಾಶ್

Update: 2018-04-29 15:29 GMT

ಬೆಂಗಳೂರು, ಎ.29: ವಿವೇಕವನ್ನು ಸಂಪೂರ್ಣ ನಾಶ ಮಾಡಿಕೊಂಡು ಪಾರಂಪರಿಕ ಜ್ಞಾನ ಕಣ್ಮರೆಯಾಗುವ ಮೊದಲು ಪ್ರತಿಯೊಬ್ಬರೂ ಜಾನಪದ ಪರಂಪರೆಗೆ ಮರುಳಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 3ನೆ ವರ್ಷದ ಯುವ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧಾನ್ಯಗಳಲ್ಲಿ ಜೊಳ್ಳನ್ನು ಬೇರ್ಪಡಿಸಿದ ರೀತಿಯಲ್ಲಿ ಅಂಧಶ್ರದ್ಧೆಗಳನ್ನು ಬೇರ್ಪಡಿಸಬೇಕು ಹಾಗೂ ಪೂರ್ವಿಕರು ಕಟ್ಟಿಕೊಟ್ಟಿರುವ ವಿವೇಕ, ಜ್ಞಾನ ಸಂಪತ್ತನ್ನು ನಮ್ಮದಾಗಿಸಿಕೊಳ್ಳಬೇಕು. ಅದಕ್ಕಾಗಿ ಜಾನಪದ ಕಡೆಗೆ ಮುಖ ಮಾಡಬೇಕಾಗಿದೆ ಎಂದು ಸಲಹೆ ಮಾಡಿದರು.

ನಮ್ಮ ಹಿಂದಿನ ಸಂಸ್ಕೃತಿಯನ್ನು ಮರು ಸ್ಥಾಪಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ನಮ್ಮ ಪಶುಪಾಲಕರು, ರೈತರು, ಕುಶಲ ಕಾರ್ಮಿಕರು ಸೇರಿದಂತೆ ಹಿಂದಿನ ತಲೆ ಮಾರಿನವರ ಕಡೆ ಗಮನ ಹರಿಸಬೇಕು. ಆಧುನಿಕ ಕಾಲದಲ್ಲಿ ಎಲ್ಲವೂ ಸುಗಮವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ನಂಬಿದ್ದಾರೆ. ಆದರೆ, ಕಂಪ್ಯೂಟರ್‌ನಿಂದ ಸಾವಿರ ರೀತಿಯ ಸೀರೆಗಳನ್ನು ಅಲಂಕಾರ ಮಾಡಬಹುದಾದರೂ, ಕೈಮಗ್ಗದಲ್ಲಿ ಕೈಯಿಂದ ಬಿಡಿಸಿದ ಕಲೆ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿತ್ತು. ಅದನ್ನು ಕಂಪ್ಯೂಟರ್‌ನಲ್ಲಿ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ನಮ್ಮ ಪೂರ್ವಿಕರು ಚಕ್ಕೆ, ಲವಂಗ, ಖಾರದ ಪುಡಿ ಸೇರಿದಂತೆ ಸಾಂಬಾರು ಪದಾರ್ಥಗಳನ್ನು ಕಂಡುಹಿಡಿಯಲು ಸಾವಿರಾರು ವರ್ಷಗಳ ಹಿಂದೆ ನೂರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಅಲ್ಲದೆ, ರಾಗಿಯನ್ನು ತಿಂದರೆ ಏನಾಗುತ್ತದೆ ಎಂಬುದನ್ನು ಪತ್ತೆ ಹಚ್ಚಲು ಹಲವು ಜನರು ಜೀವ ತೆತ್ತಿದ್ದಾರೆ. ಅದನ್ನೆಲ್ಲ ಈಗ ಕಂಪ್ಯೂಟರ್ ಯುಗದಲ್ಲಿ ಪತ್ತೆ ಹಚ್ಚಲು ಸಾಧ್ಯವೇ ಎಂದ ಅವರು, ಹಿಂದಿನ ಕಾಲದಲ್ಲಿ ಆಸ್ಪತ್ರೆಗಳ ಅಗತ್ಯವಿರಲಿಲ್ಲ. ಆದರೆ, ಈಗ ಎಲ್ಲಿ ನೋಡಿದರೂ ಆಸ್ಪತ್ರೆಗಳು ತಲೆ ಎತ್ತಿದ್ದು, ಸಿರಿಂಜ್ ಮತ್ತು ಮಾತ್ರೆಗಳನ್ನು ನೀಡುತ್ತಿದ್ದಾರೆ. ಅದರ ಪರಿಣಾಮವನ್ನು ಜನರು ಅನುಭವಿಸುತ್ತಿದ್ದು, ಪರ್ಯಾಯವಾಗಿ ಆಯುರ್ವೇದ, ಯುನಾನಿ ಎಂಬ ಪದ್ಧತಿಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ನಮ್ಮ ಆಹಾರ ಕ್ರಮವನ್ನು ಬಂಡವಾಳ ಮಾಡಿಕೊಂಡ ಬ್ರಿಟಿಷ್ ಕಂಪೆನಿಗಳು ಅಪಾರ ಪ್ರಮಾಣದ ಸಂಪತ್ತನ್ನು ಲೂಟಿ ಮಾಡಿದರು. ಅಲ್ಲದೆ, ಇಂದಿನ ಅಂತಾರಾಷ್ಟ್ರೀಯ ಕಂಪೆನಿಗಳು ನಮ್ಮ ಪ್ರಾಕೃತಿಕ ಸೊಗಡನ್ನು ನಾಶ ಮಾಡಿ ಕಲುಷಿತ ಪದಾರ್ಥಗಳನ್ನು ನೀಡುತ್ತಿದ್ದಾರೆ. ಆದರೆ, ಎರಡು ಸಾವಿರ ವರ್ಷಗಳ ಹಿಂದೆಯೇ ನಮ್ಮ ಜನ ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡುವುದನ್ನು ಹಾಗೂ ಅದರ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಜಾನಪದ ಪರಂಪರೆ ಕರ್ನಾಟಕದ ಜನಸಾಮಾನ್ಯರದ್ದು. ಶಿಷ್ಟ ಕಲೆಗಳಲ್ಲಿನ ಕಲಾ ಸ್ಥೂಪಗಳಲ್ಲಿ ಅದನ್ನು ಸ್ಥಾಪಿಸಲಾಗಿದೆ. ಇದನ್ನು ಜನರೇ ಸೃಷ್ಟಿಸಿದ ಭಾಷೆ, ಸಾಹಿತ್ಯದ ರೂಪವಾಗಿದೆ. ಹೀಗಾಗಿ, ಜಾನಪದವನ್ನು ಪ್ರಥಮವಾಗಿ ಪರಿಗಣಿಸಬೇಕು. ಅಂದರೆ, ದೇಶಿಯತೆಯನ್ನು ಕಾಪಾಡುವುದು, ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಎಂದರ್ಥ ಎಂದ ಅವರು, ಸಾಂಸ್ಕೃತಿಕ ಕ್ರಿಯಾಶೀಲತೆ ಜೀವಂತವಾಗಿರಲು ಜನಸಾಮಾನ್ಯರ ಪಾತ್ರ ಅಪಾರವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿತ್ರ ಸಾಹಿತಿ ದೊಡ್ಡಹುಲ್ಲೂರು ರುಕ್ಕೋಜಿರಾವ್, ಕೈಗಾರಿಕೆ ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಡಾ.ಸಿ.ಕೆ.ಮೂರ್ತಿ, ಡಾ.ಬಿ. ಇಂದಿರಾ ದೇವಿ, ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಹಾಗೂ ಕಸಾಪ ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News