ಶಾಸಕ ವಿಜಯಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Update: 2018-05-04 12:50 GMT

ಬೆಂಗಳೂರು, ಮೇ 4: ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿದ್ದ ಶಾಸಕ ಬಿ.ಎನ್.ವಿಜಯಕುಮಾರ್ ಅವರ ಹಠಾತ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಸರಳ, ಸಜ್ಜನ ಹಾಗೂ ಸಂಭಾವಿತರಾಗಿದ್ದ ವಿಜಯಕುಮಾರ್ ನನ್ನ ಸನ್ಮಿತ್ರರೂ ಆಗಿದ್ದರು. ವಿಜಯಕುಮಾರ್ ಅವರಲ್ಲಿನ ಕೃತಜ್ಞತಾಭಾವ ಅವರಿಗೆ ಅಧಿಕಾರ ವಲಯದಲ್ಲಿಯೂ ಜನಪ್ರಿಯತೆ ತಂದುಕೊಟ್ಟಿತ್ತು. ಜಯನಗರ ಕ್ಷೇತ್ರದಲ್ಲಿ ಅವರ ಎರಡು ಬಾರಿ ಸತತ ವಿಜಯಕ್ಕೆ ಅವರ ಮೃದುಮಾತು ಹಾಗೂ ಸೌಮ್ಯ ಸ್ವಭಾವವೂ ಕಾರಣವಾಗಿತ್ತು ಎಂಬುದು ಗಮನಾರ್ಹ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ವಿಜಯಕುಮಾರ್ ಅಂತಹವರನ್ನು ಯಾವುದೇ ಒಂದು ಪಕ್ಷಕ್ಕೆ ಸೀಮಿತಗೊಳಿಸಿ ನೋಡುವುದು ಉಚಿತವೂ, ಸಾಧುವೂ ಅಲ್ಲ. ಸಾರ್ವಜನಿಕ ಜೀವನದಲ್ಲಿ ಇಂತಹ ವ್ಯಕ್ತಿಗಳ ಸಂಖ್ಯೆ ಮತ್ತಷ್ಟು ವೃದ್ಧಿಸಲಿ ಎಂಬುದೇ ನನ್ನ ಮನದಾಳದ ಹಾರೈಕೆ ಎಂದು ಸಿದ್ದರಾಮಯ್ಯ ಕೋರಿದ್ದಾರೆ.

ವಿಜಯಕುಮಾರ್ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಅವರ ಹಠಾತ್ ನಿಧನದಿಂದ ಉಂಟಾದ ದುಃಖ ಮತ್ತು ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ದೇವರು ದಯಪಾಲಿಸಲಿ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News