ನಿವೃತ್ತಿಗಿಂತ 2 ಗಂಟೆ ಮುಂಚೆ ಲಂಚ ಸ್ವೀಕರಿಸಿದ ಲೆಕ್ಕಾಧಿಕಾರಿ ಬಂಧನ
Update: 2018-06-02 08:43 GMT
ಕೊಲ್ಲಾಪುರ್,ಜೂ.2 : ಮಹಾರಾಷ್ಟ್ರದ ಕೊಲ್ಲಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಯ ಕಚೇರಿಯಲ್ಲಿ ಲೆಕ್ಕಾಧಿಕಾರಿಯೊಬ್ಬರು ಪ್ರಮಾಣಪತ್ರವೊದಗಿಸಲು ರೂ. 1,500 ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಆಶ್ಚರ್ಯಕರವೆಂದರೆ ಆ ಅಧಿಕಾರಿ ಸದಾಶಿವ ದಿನ್ಯಂದಿಯೊ ಸತ್ಪುತೆ (58) ಸೇವೆಯಿಂದ ನಿವೃತ್ತರಾಗಲು ಇನ್ನೇನು ಎರಡೇ ಗಂಟೆಗಳು ಬಾಕಿಯುಳಿದಿವೆ ಎನ್ನುವಾಗ ಬಂಧನಕ್ಕೊಳಗಾಗಿದ್ದಾರೆ.
ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರವೊಂದನ್ನು ನೀಡುವ ವೇಳೆ ಅವರು ಲಂಚ ಸ್ವೀಕರಿಸಿದ್ದರೆನ್ನಲಾಗಿದೆ. ಆರಂಭದಲ್ಲಿ ರೂ. 2,000 ಬೇಡಿಕೆಯಿಟ್ಟಿದ್ದ ಅಧಿಕಾರಿ ನಂತರ ರೂ. 1,500 ಪಡೆಯಲು ಒಪ್ಪಿದ್ದರು. ಈ ಬಗ್ಗೆ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರಿದ್ದರು.