ರೈತರ ಪ್ರತಿಭಟನೆಯನ್ನು ಪ್ರಚಾರದ ಗಿಮಿಕ್ ಎಂದ ಕೇಂದ್ರ ಕೃಷಿ ಸಚಿವರ ವಿರುದ್ಧ ಪ್ರಕರಣ ದಾಖಲು
ಮುಝಫ್ಫರಪುರ್,ಜೂ.4 : ಕಳೆದ ಶುಕ್ರವಾರದಿಂದ ದೇಶದ ಹಲವೆಡೆ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಕೇವಲ ‘ಪ್ರಚಾರ ಗಿಮಿಕ್' ಎಂದು ಹೇಳಿದ್ದ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಾಟ್ನಾದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸಿಂಗ್ “ದೇಶದಲ್ಲಿ ಸುಮಾರು 12ರಿಂದ 14 ಕೋಟಿ ರೈತರಿರುವುದರಿಂದ ಯಾವುದಾದರೂ ರೈತ ಸಂಘಟನೆಯ ಬಳಿ 1000-2000 ರೈತರಿರುವುದು ಸಹಜ. ಮಾಧ್ಯಮದ ಗಮನ ಸೆಳೆಯಲು ಅವರು ಏನಾದರೂ ಅಸಾಮಾನ್ಯ ಕೆಲಸ ಮಾಡಬೇಕಾಗುತ್ತದೆ,'' ಎಂದಿದ್ದರು.
ನಾಗ್ಪುರದಲ್ಲಿ ಪ್ರತಿಭಟನಾ ನಿರತ ರೈತರು ರಸ್ತೆಗಳಲ್ಲಿ ಹಾಲು ಚೆಲ್ಲಿದರಲ್ಲದೆ ತಮ್ಮಲ್ಲಿದ್ದ ಹಾಲನ್ನು ಸ್ಥಳೀಯರಿಗೂ ನೀಡಿದರು.
ಜೂನ್ 1ರಂದು ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳ ಸಾವಿರಾರು ರೈತರು ಸಾಲ ಮನ್ನಾ, ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರು.