ಸರಕಾರದ ಮುಖ್ಯ ಕಾರ್ಯದರ್ಶಿಗೆ ಸ್ಪೀಕರ್ ರಮೇಶ್ ಕುಮಾರ್ ‘ಪ್ರತಿಭಟನೆ ಪತ್ರ’

Update: 2018-06-06 14:18 GMT

ಬೆಂಗಳೂರು, ಜೂ. 6: ‘ನಿಮ್ಮ ಮತ್ತು ರಾಜಭವನದ ಒಳಗಿರುವ ಅಧಿಕಾರಿಗಳ ದುರಹಂಕಾರ ಹಾಗೂ ಅಜ್ಞಾನದಿಂದ ನಾನು ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದು ರಾಜಭವನದ ಮುಂದೆ ಅರ್ಧಗಂಟೆ ಕಾದಿದ್ದು, ಅಸಹಾಯಕನಾಗಿ ಹಿಂದಿರುಗುತ್ತಿದ್ದೇನೆ’ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಅವರಿಗೆ ಪ್ರತಿಭಟನೆಯನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

‘ತಮ್ಮ ಆಹ್ವಾನದ ಮೇರೆಗೆ ಸಚಿವರ ಪ್ರಮಾಣ ವಚನ ಹಾಗೂ ಪ್ರತಿಜ್ಞಾ ವಿಧಿ ಸ್ಪೀಕಾರ ಸಮಾರಂಭಕ್ಕೆ ಬಂದು ರಾಜಭವನದ ಮುಂದೆ ಅರ್ಧಗಂಟೆ ಕಾದಿದ್ದು, ಅಸಹಾಯಕನಾಗಿ ಹಿಂದಿರುಗಿರುತ್ತೇನೆ. ಈ ಪರಿಸ್ಥಿತಿಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ. ಸಿಎಂ, ಡಿಸಿಎಂ, ಸಭಾಪತಿ ಹೊರತಾಗಿ ಸಂವಿಧಾನಿಕ ಸ್ಥಾನ ವಿಧಾನಸಭಾ ಸ್ಪೀಕರ್ ಅವರದ್ದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಅನಿವಾರ್ಯವಾಗಿ ಹಾಜರಿರಲೇಬೇಕು. ಇಡೀ ಸರಕಾರ ಸ್ಪೀಕರ್ ಹಾಗೂ ಸಭಾಪತಿಗಳಿಗೆ ಒಂದು ಗೌರವಯುತ ವ್ಯವಸ್ಥೆ ಮಾಡುವುದು ಜವಾಬ್ದಾರಿಯಾಗಿರುತ್ತದೆ. ಇವೆಲ್ಲವನ್ನು ಮೀರಿ ರಾಜಭವನದ ಒಳಗೂ ಹಾಗೂ ಹೊರಗೂ ತುಂಬಿದ್ದಂತಹ ವಾಹನಗಳು ಯಾವುವು?

ಯಾರು ಇವರಿಗೆ ಅನುಮತಿ ನೀಡಿದರು ಹಾಗೂ ಸಾರ್ವಜನಿಕ ಜೀವನದಲ್ಲಿ ಇವರ ಸ್ಥಾನಮಾನ ಏನೆಂದು ತಿಳಿದುಕೊಳ್ಳಲು ಕುತೂಹಲನಾಗಿದ್ದೇನೆ. ಕೊನೆಯದಾಗಿ ನಿಮ್ಮ ಈ ಅಕ್ಷಮ್ಯ ಅಪರಾಧಕ್ಕೆ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾ ಪತ್ರ ಮುಕ್ತಾಯಗೊಳಿಸುತ್ತೇನೆ’ ಎಂದು ರಮೇಶ್ ಕುಮಾರ್, ಸಂಚಾರ ದಟ್ಟಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News