ಹಣಕ್ಕಿಂತ ಸಂಬಂಧಪಟ್ಟ ಪಾತ್ರದೊಂದಿಗೆ ನಟನೆ ಮಾಡುವ ಬಗ್ಗೆ ಚಿಂತೆ: ಬಹುಭಾಷಾ ನಟಿ ಸರೋಜಾ ದೇವಿ

Update: 2018-06-10 12:55 GMT

ಬೆಂಗಳೂರು, ಜೂ.10: ಸಿನೆಮಾ ನಟಿಯರಿಗೆ ಹಣಕ್ಕಿಂತ, ಸಂಬಂಧಪಟ್ಟ ಪಾತ್ರದೊಂದಿಗೆ ನಟನೆ ಮಾಡುವ ಬಗ್ಗೆ ಹೆಚ್ಚಾಗಿ ಚಿಂತೆ ಇರುತ್ತದೆ ಎಂದು ಬಹುಭಾಷಾ ನಟಿ ಡಾ.ಬಿ.ಸರೋಜಾದೇವಿ ಇಂದಿಲ್ಲಿ ಅಭಿಪ್ರಾಯಪಟ್ಟರು.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಆಯೋಜಿಸಿದ್ದ, ‘ಪ್ರೊ.ಬರಗೂರು ಮತ್ತು ಶ್ರೀಮತಿ ರಾಜಲಕ್ಷ್ಮೀ ಬರಗೂರು ಪ್ರಶಸ್ತಿ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಚಿಕ್ಕವಳ್ಳಾಗಿದ್ದರೂ ಚೆನ್ನಾಗಿ ಪಾತ್ರ ಮಾಡಿದೆ. ಈಗ ಅದೇ ಪಾತ್ರಕೊಟ್ಟರೂ ಇನ್ನೂ ಚೆನ್ನಾಗಿ ಅಭಿನಯಿಸುತ್ತೇನೆ ಎಂದ ಅವರು, ಧರ್ಮ, ಸತ್ಯ ನ್ಯಾಯಕ್ಕಾಗಿ ಹೋರಾಡಿದ್ದರೆ ಜಯ ಸಿಗುತ್ತದೆ. ತಾಳ್ಮೆ ಇದ್ದರೆ ಸಾಕು ಎಂದು ನುಡಿದರು.

ಈ ನಿರ್ದೇಶಕ ಭಗವಾನ್ ಇದ್ದಾರಲ್ಲಾ, ನನ್ನನ್ನು ಒಂದು ಸಿನಿಮಾಗೂ ಹಾಕಿಕೊಳ್ಳಲಿಲ್ಲ. ಅವರನ್ನು ಕಂಡರೆ ನನಗೆ ಕೋಪ ಎಂದ ಅವರು, ಪುಟ್ಟಣ್ಣ ಕಣಗಾಲ್ ಸಹ ನನ್ನನ್ನು ನಟಿಯಾಗಿ ಪಾತ್ರ ಮಾಡಲು ಕರೆಯಲಿಲ್ಲ. ಒಮ್ಮೆ ಯಾವುದೋ ವಿಷಯಕ್ಕೆ ಪುಟ್ಟಣ ಬಂದಾಗ ಉಪಾಸನೆ, ರಂಗನಾಯಕಿ, ಚಿತ್ರಗಳಿಗೆ ನನ್ನನ್ನು ಆಯ್ಕೆ ಮಾಡಲಿಲ್ಲ. ಯಾರನ್ನು ನಟಿಯರನ್ನಾಗಿ ತೆಗೆದುಕೊಂಡಿದ್ದಿರೋ ಅವರನ್ನೇ ಕೇಳಿ ಎಂದು ದಬಾಯಿಸಿ ಕಳುಹಿಸಿದ್ದನ್ನು ನೆನಪು ಮಾಡಿಕೊಂಡರು.

ಕಾರ್ಯಕ್ರಮದಲ್ಲೇ ಸರೋಜಾ ದೇವಿ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಎಸ್.ಕೆ.ಭಗವಾನ್, ಆಗಿನ ಕಾಲದಲ್ಲಿ ನೀನು ದೊಡ್ಡ ತಾರೆ. ನಿನ್ನ ಕಾಲ್‌ಶೀಟ್ ಪಡೆಯುವುದೇ ಕಷ್ಟವಾಗಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News