ಮಕ್ಕಳ ಕಳ್ಳರೆಂಬ ಶಂಕೆ: ಗುಂಪಿನಿಂದ ದಾಳಿಗೊಳಗಾಗಲಿದ್ದ ಸಾಧುಗಳನ್ನು ರಕ್ಷಿಸಿದ ಸೈನಿಕರು
Update: 2018-07-06 11:22 GMT
ಗುವಾಹಟಿ, ಜು.6: ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಮೂವರು ಸಾಧುಗಳಿಗೆ ಗುಂಪೊಂದು ಹಲ್ಲೆ ನಡೆಸಿದ್ದು, ಸೈನಿಕರು ಅವರನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮೂವರು ಸಾಧುಗಳು ಉತ್ತರ ಪ್ರದೇಶದವರಾಗಿದ್ದು, ಇವರು ಕಾರನ್ನು ಗುಂಪೊಂದು ತಡೆದಿತ್ತು. ನಂತರ ಅವರನ್ನು ಕಾರಿನಿಂದ ಹೊರಗೆಳೆದಾಗಿ ಮಾತಿಕ ಚಕಮಕಿ ನಡೆದಿತ್ತು.
ಗುಂಪಿನಲ್ಲಿ ಜನರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಕೆಲ ನಾಗರಿಕರು ಸ್ಥಳೀಯ ಸೇನಾ ಘಟಕಕ್ಕೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಸೈನಿಕರು ಸಾಧುಗಳನ್ನು ರಕ್ಷಿಸಿದ್ದಾರೆ. ಸೇನಾ ಕ್ಯಾಂಪ್ ಗೆ ಸಾಧುಗಳನ್ನು ಕರೆದೊಯ್ಯಲಾಗಿದ್ದು, ನಂತರ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ.