ಗೋರಕ್ಷಣೆ ಹೆಸರಲ್ಲಿ ವ್ಯಕ್ತಿಯ ಥಳಿಸಿ ಹತ್ಯೆಗೈದವರನ್ನು ಹೂಮಾಲೆ ಹಾಕಿ ಸ್ವಾಗತಿಸಿದ ಕೇಂದ್ರ ಸಚಿವ!
ರಾಂಚಿ, ಜು.6: ಗೋಸಾಗಾಟದ ಶಂಕೆಯಲ್ಲಿ ವ್ಯಾಪಾರಿಯೊಬ್ಬರನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಂಡ 8 ದೋಷಿಗಳನ್ನು ಕೇಂದ್ರ ಸಚಿವ ಜಯಂತ್ ಸಿನ್ಹಾ ಹೂಮಾಲೆ ಹಾಕಿ ಸ್ವಾಗತಿಸಿರುವುದಾಗಿ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಗೂ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ. ಇಲ್ಲಿನ ರಾಮ್ ಗರ್ ನಲ್ಲಿ ಕಳೆದ ವರ್ಷ ಜೂನ್ 29ರಂದು ಅಲೀಮುದ್ದೀನ್ ಅನ್ಸಾರಿ ಎಂಬವರನ್ನು ಥಳಿಸಿ ಕೊಂದ ಪ್ರಕರಣದಲ್ಲಿ ಇವರು ದೋಷಿಗಳಾಗಿದ್ದಾರೆ.
ಗೋಸಾಗಾಟ ಮಾಡುತ್ತಿದ್ದಾರೆ ಎನ್ನುವ ಶಂಕೆಯಲ್ಲಿ ಅಲೀಮುದ್ದೀನ್ ರನ್ನು ಹತ್ಯೆಗೈಯಲಾಗಿತ್ತು. ಹೈಕೋರ್ಟ್ ಜಾಮೀನು ನೀಡಿದ್ದರಿಂದ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಭಾಗವಹಿಸಿ ಈ 8 ಮಂದಿಯನ್ನು ಸನ್ಮಾನಿಸಿದರು. ರಾಮ್ ಗರ್ ಹತ್ಯೆ ಪ್ರಕರಣದಲ್ಲಿ 12 ಮಂದಿ ಆರೋಪಿಗಳಾಗಿದ್ದಾರೆ. 11 ಮಂದಿಯ ಅಪರಾಧ ಸಾಬೀತಾಗಿದ್ದು, ತ್ವರಿತಗತಿ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. 12ನೆ ವ್ಯಕ್ತಿ ಅಪ್ರಾಪ್ತನಾಗಿದ್ದಾನೆ.