ಬಿಜೆಪಿಯನ್ನು ಸೋಲಿಸಲು ಶಿವನ ಮೊರೆ ಹೋದ ಕಾಂಗ್ರೆಸ್ ನಾಯಕ ಕಮಲ್ ನಾಥ್ !

Update: 2018-07-14 07:13 GMT

ಭೋಪಾಲ್, ಜು. 14: ಮಧ್ಯ ಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರದ ‘ದುರಾಡಳಿತ’ಕ್ಕೆ ಅಂತ್ಯ ಹಾಡುವಂತೆ ಕೋರಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್  ಶಿವನಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕಮಲ್ ನಾಥ್ ಭಗವಾನ್ ಮಹಾಕಾಳೇಶ್ವರ (ಶಿವ)ನಿಗೆ ಬರೆದ ಪತ್ರವನ್ನು ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

ಬಿಜೆಪಿ ಸರಕಾರವನ್ನು ಒದ್ದೋಡಿಸಲು ಮಧ್ಯ ಪ್ರದೇಶದ ಜನರಿಗೆ ಸಹಾಯ ಮಾಡುವಂತೆ ಈ ಪತ್ರದಲ್ಲಿ ಕೋರಲಾಗಿದೆ. ರಾಜ್ಯದಲ್ಲಿ ಈಗಿನ ಸರಕಾರದ ಅಡಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಯುವತಿಯರು ಅತ್ಯಾಚಾರಗೊಳಗಾಗುತ್ತಿದ್ದಾರೆ ಹಾಗೂ ಭ್ರಷ್ಟಾಚಾರ ಮತ್ತು ನಿರುದ್ಯೋಗ ಹೆಚ್ಚಾಗಿದೆ’’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಮುಖ್ಯಮಂತ್ರಿ ಚೌಹಾಣ್ ನೀಡಿರುವ ಆಶ್ವಾಸನೆಗಳು ಈಡೇರಿಲ್ಲ ಅವರು ತಮ್ಮ ಕೆಟ್ಟ ಕಾರ್ಯಗಳಿಗಾಗಿ ಬೆಲೆ ತೆರಬೇಕಾದ ಸಂದರ್ಭ ಬಂದಿದೆ ಎಂದೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವನಿಗೆ ಬರೆದ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ ಶಿವನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.

ಆದರೆ ರಾಜ್ಯ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಭಗವಂತನಿಗೆ ಕಮಲ್ ನಾಥ್ ಬರೆದ ಪತ್ರವನ್ನು ಅಣಕವಾಡಿದ್ದಾರೆ. ದೇವರಿಗೆ ಎಲ್ಲವೂ ತಿಳಿದಿರುವುದರಿಂದ ಅವರು ಪತ್ರ ಬರೆಯುವ ಅಗತ್ಯವಿರಲಿಲ್ಲ ಎಂದು ಅಗರ್ವಾಲ್ ಹೇಳಿದ್ದಾರೆ. ಮುಖ್ಯಮಂತ್ರಿ ಚೌಹಾಣ್ ನಡೆಸಲಿರುವ ಜನ ಆಶೀರ್ವಾದ ಯಾತ್ರೆಯ ಹಾದಿಯಲ್ಲಿಯೇ ಕಾಂಗ್ರೆಸ್ ಕೂಡ ಸಾರ್ವಜನಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷದ ಈ ಜನ ಜಾಗರಣ್ ಅಭಿಯಾನವನ್ನು ಜುಲೈ 18ರಂದು ಉಜ್ಜಯನಿಯಲ್ಲಿ  ಕಮಲ್ ನಾಥ್ ಉದ್ಘಾಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News