ಆನೇಕಲ್: ಭೀಕರ ರಸ್ತೆ ಅಪಘಾತ; ಇಬ್ಬರು ಸಜೀವ ದಹನ

Update: 2018-07-22 04:57 GMT

ಆನೇಕಲ್, ಜು.22: ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಜೀವ ದಹನಗೊಂಡ ಘಟನೆ ಹೊಸೂರು ಮುಖ್ಯರಸ್ತೆ ಹೆಣ್ಣಾಗರ ಗೇಟ್ ಬಳಿ ಇಂದು ಮುಂಜಾನೆ ನಡೆದಿದೆ.

ಅಪಘಾತದ ತೀವ್ರತೆಗೆ ಉಂಟಾದ ಬೆಂಕಿಯಿಂದ ಬಸ್ ಹಾಗೂ ಕಾರು ಸಂಪೂರ್ಣವಾಗಿ ಭಸ್ಮವಾಗಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸಜೀವ ದಹನವಾಗಿದ್ದು, ಅವರ ಗುರುತು ಪತ್ತೆ ಸಾಧ್ಯವಾಗಿಲ್ಲ.

ಈ ದುರಂತವು ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ. ಬೆಂಗಳೂರು ಕಡೆಯಿಂದ ಹೊಸೂರಿನತ್ತ ಸಂಚರಿಸುತ್ತಿದ್ದ ಕಾರು ಹೆಣ್ಣಾಗರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಢಿಕ್ಕಿಯಾಗಿ ಬಳಿಕ ಬಸ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಉಂಟಾದ ಬೆಂಕಿಯಿಂದ ಎರಡೂ ವಾಹನಗಳು ಸಂಪೂರ್ಣ ಭಸ್ಮವಾಗಿವೆ. ಘಟನೆಯ ವೇಳೆ ಬಸ್ಸಿನಲ್ಲಿ ಕೆಲವು ಪ್ರಯಾಣಿಕರಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ..
 ಘಟನಾ ಸ್ಥಳಕ್ಕೆ ಸೂರ್ಯ ನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News