ಚಿತ್ರ ನಟ ಸುದೀಪ್ ರನ್ನು ಭೇಟಿಯಾದ ಶ್ರೀರಾಮುಲು
Update: 2018-07-23 14:18 GMT
ಬೆಂಗಳೂರು, ಜು. 23: ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಹಾಗೂ ಹಾಲಿ ಶಾಸಕರೂ ಆಗಿರುವ ಬಿ.ಶ್ರೀರಾಮುಲು, ಪ್ರಧಾನಿ ಮೋದಿ ನೇತೃತ್ವದ ಸರಕಾರ ನಾಲ್ಕು ವರ್ಷಗಳ ಸಾಧನೆ ಪರಿಚಯಿಸುವ ‘ಸಮರ್ಥನೆಗಾಗಿ ಸಂಪರ್ಕ ಅಭಿಯಾನ’ದ ಹಿನ್ನೆಲೆಯಲ್ಲಿ ಚಿತ್ರನಟ ಸುದೀಪ್ (ಕಿಚ್ಚ) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸೋಮವಾರ ಬೆಳಗ್ಗೆ ಇಲ್ಲಿನ ಜೆಪಿ ನಗರದಲ್ಲಿನ ಸುದೀಪ್ ಅವರ ನಿವಾಸಕ್ಕೆ ತೆರಳಿದ ಶ್ರೀರಾಮುಲು, ಪ್ರಧಾನಿ ಮೋದಿ ಸರಕಾರದ ನಾಲ್ಕು ವರ್ಷದ ಸಾಧನೆಯುಳ್ಳ ಪುಸ್ತಕವನ್ನು ಸುದೀಪ್ ಅವರಿಗೆ ನೀಡಿದ್ದಾರೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆಂದು ಹೇಳಲಾಗಿದೆ.
ಸುದೀಪ್, ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಮತ್ತು ರಾಜುಗೌಡ ಪರ ಪ್ರಚಾರ ಮಾಡಿದ್ದರು. ಇದೀಗ ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಅಥವಾ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶ್ರೀರಾಮುಲು, ನಟ ಸುದೀಪ್ ಅವರಿಗೆ ಆಹ್ವಾನ ನೀಡಿದ್ದಾರೆಂದು ಹೇಳಲಾಗಿದೆ.