ಧಾರವಾಡ: ಆ.15 ರಿಂದ 18ರವರೆಗೆ ಹಸಿರು ಕರ್ನಾಟಕ ಕಾರ್ಯಕ್ರಮ

Update: 2018-08-08 14:54 GMT

ಧಾರವಾಡ, ಆ.8: 2018-19ನೆ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಘೋಷಿಸಿರುವ ‘ಹಸಿರು ಕರ್ನಾಟಕ’ ಯೋಜನೆಯನ್ನು ಆ.15ರಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಎಂ.ದೀಪಾ ಸೂಚಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಯ ಆಶಯದಂತೆ ಆಯವ್ಯಯದಲ್ಲಿ ಘೋಷಿಸಿರುವ ‘ಹಸಿರು ಕರ್ನಾಟಕ’ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಯಾ ಇಲಾಖೆ, ಸಂಸ್ಥೆಗಳ ಮುಖ್ಯಸ್ಥರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಅರಣ್ಯ ಇಲಾಖೆಯು ಈಗಾಗಲೆ ಹಸಿರು ಕರ್ನಾಟಕ ಯೋಜನೆಗೆ ಅಗತ್ಯವಿರುವ ಸಸಿಗಳನ್ನು ಹೊಂದಿದೆ. ಸರಕಾರಿ ಕಚೇರಿ ಹಾಗೂ ಶಾಲಾ, ಕಾಲೇಜುಗಳ ಮುಖ್ಯಸ್ಥರು ಮತ್ತು ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಹಾಗೂ ಅಧೀನದಲ್ಲಿರುವ ಭೂಮಿ ವಿವರಗಳನ್ನು ಹಾಗೂ ಅಗತ್ಯವಿರುವ ಸಸಿಗಳ ಸಂಖ್ಯೆಯನ್ನು ಕೂಡಲೆ ಅರಣ್ಯ ಇಲಾಖೆಗೆ ತಿಳಿಸಬೇಕು ಎಂದು ದೀಪಾ ಸೂಚಿಸಿದರು.

ಹಸಿರು ಕರ್ನಾಟಕ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಗಸ್ಟ್ 15 ರಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಮಟ್ಟದಲ್ಲಿ ಚಾಲನೆಗೊಳಿಸಲಿದ್ದಾರೆ. ಆಯಾ ತಾಲೂಕಿನಲ್ಲಿ ಸ್ಥಳೀಯ ಶಾಸಕರು ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಗಸ್ಟ್ 15 ರಿಂದ 18 ರ ವರೆಗೆ ನಾಲ್ಕು ದಿನಗಳ ಕಾಲ ಹಸಿರು ಕರ್ನಾಟಕ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಎಲ್ಲರೂ ಸಹಕರಿಸುವಂತೆ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ಸ್ನೇಹಲ್ ಮಾತನಾಡಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ವಸತಿ ನಿಲಯಗಳು, ವಸತಿ ಶಾಲೆಗಳು ಮತ್ತು ಸ್ಥಳಾವಕಾಶ ಹೊಂದಿರುವ ಗ್ರಾಮ ಪಂಚಾಯತ್‌ಗಳ ಕಚೇರಿ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲು ಸಂಬಂಧಿತ ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಿಳಿಸಿದರು.

ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್‌ಕುಮಾರ್ ಮಾತನಾಡಿ, ಸರಕಾರಿ ಇಲಾಖೆಯ ಮುಖ್ಯಸ್ಥರು ತಮಗೆ ಅಗತ್ಯವಿರುವ ಸಸಿಗಳ ಸಂಖ್ಯೆಯನ್ನು ನೀಡಿದರೆ ಉಚಿತವಾಗಿ ಪೂರೈಸಲಾಗುತ್ತದೆ. ಮತ್ತು ಧಾರವಾಡ ವಲಯದ ಧಾರವಾಡ ತಾಲೂಕಿನ ಹೊನ್ನಾಪೂರ, ಸೆಂಟ್ರಲ್, ಕೋಗಿಲಗೇರಿ ಮತ್ತು ಹುಲಕೋಟಿ ಸಸ್ಯಕ್ಷೇತ್ರಗಳನ್ನು ಮೊಬೈಲ್ ಸಂಖ್ಯೆ: 9035388728, 8095028879 ಮತ್ತು 9731156458 ಮೂಲಕ ಸಂಪರ್ಕಿಸಬಹುದು ಎಂದರು.

ಹುಬ್ಬಳ್ಳಿ ತಾಲೂಕಿನ ರಾಯನಾಳ, ಬಿಡ್ನಾಳ, ತಿಮ್ಮಸಾಗರ ಸಸ್ಯಕ್ಷೇತ್ರಗಳನ್ನು ಮೊಬೈಲ್ ಸಂಖ್ಯೆ: 9886855614, 9449863722 ಮತ್ತು 9538820032 ಸಂಪರ್ಕಿಸಬಹುದು. ಕಲಘಟಗಿ ತಾಲೂಕಿನ ದೇಕೊಪ್ಪ, ಬೆಲವಂತರ ಸಸ್ಯಕ್ಷೇತ್ರಗಳನ್ನು ಮೊಬೈಲ್ ಸಂಖ್ಯೆ: 7090108557, 9035388728 ಮತ್ತು 9535476689 ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದರು.

ನವಲಗುಂದ ತಾಲೂಕಿನ ಗುಡ್ಡದ ಸಸ್ಯಕ್ಷೇತ್ರಗಳನ್ನು ಮೊಬೈಲ್ ಸಂಖ್ಯೆ: 9538573085 ಸಂಪರ್ಕಿಸಬಹುದು. ಮತ್ತು ಕುಂದಗೋಳ ತಾಲೂಕಿನ ಜಿಗಳೂರು ಸಸ್ಯಕ್ಷೇತ್ರ ಮೊಬೈಲ್ ಸಂಖ್ಯೆ: 9448341844 ಇಲ್ಲಿ ಸಸಿಗಳು ಲಭ್ಯವಿವೆ. ಅಲ್ಲಿಂದಲೇ ಸಸಿಗಳನ್ನು ವಿತರಿಸಲಾಗುತ್ತದೆ. ಆದ್ದರಿಂದ ಸಸಿಗಳ ಅಗತ್ಯವಿರುವವರು ತಕ್ಷಣ ಮಾಹಿತಿ ನೀಡುವಂತೆ ಅವರು ಕೋರಿದರು.

ಸಭೆಯಲ್ಲಿ ಉಪಭಾಗಾಧಿಕಾರಿ ಮುಹಮ್ಮದ್ ಝುಬೇರ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್.ರುದ್ರಪ್ಪ, ಪರಿಸರ ಸಮಿತಿಯ ಶಂಕರ ಕುಂಬಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ವಿಜಯಕುಮಾರ್ ಕಡಕಭಾವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಶ್ವವಿದ್ಯಾಲಯಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News